ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ, ಹೈವೋಲ್ಟೇಜ್ ಕಣವಾಗಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ರಣತಂತ್ರದ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮತ್ತೊಂದೆಡೆ, ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ತೀವ್ರ ಮುಖಭಂಗ ಅನುಭವಿಸಿ ಪರಾಭವಗೊಂಡಿದ್ದಾರೆ. ಇದೇ ಕಣದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವಿನ ನಗೆ ಬೀರಿದ್ದಾರೆ.
ಜೆಡಿಎಸ್ ಅಭ್ಯರ್ಥಿಯ ಈ ಸೋಲು ಪಕ್ಷದ ವರಿಷ್ಠರಿಗೆ ಅನಿರೀಕ್ಷಿತವೇನಲ್ಲ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಸಂಖ್ಯಾಬಲದ ಕೊರತೆಯಿಂದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ಗೆಲುವು ಕಷ್ಟ ಎಂದು ಗೊತ್ತಿದ್ದರೂ ಕಣಕ್ಕಿಳಿಸಲಾಗಿತ್ತು. ಮೈತ್ರಿ ಪಕ್ಷವಾಗಿರುವ ಬಿಜೆಪಿಯ ಆಂತರಿಕ ನಿಲುವು ಹಾಗೂ ಅವರ ಅಸಲಿ ‘ಆಟ’ವನ್ನು ಕಣ್ಣಾರೆ ನೋಡಲೆಂದೇ ಎಚ್.ಡಿ. ಕುಮಾರಸ್ವಾಮಿ ಅವರು ಈ ರಿಸ್ಕ್ ತೆಗೆದುಕೊಂಡಿದ್ದರು. ಅದೇ ವಿಷಯ ಈಗ ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರ ಈ ಗೆಲುವಿನ ಹಿಂದೆ ಕಾಂಗ್ರೆಸ್ ತಂತ್ರಗಾರಿಕೆ ಎದ್ದು ಕಾಣುತ್ತಿದೆ. ಅಡ್ಡಮತದಾನದ ಭೀತಿಯ ನಡುವೆಯೂ ತಮ್ಮ ಶಾಸಕರನ್ನು ಒಗ್ಗೂಡಿಸಿಕೊಂಡು, ಎದುರಾಳಿ ಪಾಳಯದ ಮತಗಳಿಗೂ ಗಾಳ ಹಾಕುವಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ. ಈ ಮೂಲಕ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಗಟ್ಟಿಗೊಳಿಸಿಕೊಂಡಿದೆ.
ಇದನ್ನು ಓದಿದ್ದೀರಾ? ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮದ ಬಗ್ಗೆ ಮೌನ ಮುರಿದ ಬಿಸಿಸಿಐ
ಈ ಚುನಾವಣೆಯಲ್ಲಿ ಮೈತ್ರಿ ಪಾಳಯಕ್ಕೆ ಅಡ್ಡಮತದಾನದ ಬಿಸಿ ತೀವ್ರವಾಗಿ ತಟ್ಟಿದೆ. ತಮ್ಮದೇ ಜೆಡಿಎಸ್ ಪಕ್ಷದ ಕೆಲವು ಶಾಸಕರು ವಿಪ್ ಉಲ್ಲಂಘಿಸಿ ಕೈಕೊಟ್ಟಿರುವುದು ಒಂದೆಡೆಯಾದರೆ, ಅದಕ್ಕಿಂತ ಮಿಗಿಲಾಗಿ ಮೈತ್ರಿ ಧರ್ಮ ಪಾಲಿಸಬೇಕಿದ್ದ ಬಿಜೆಪಿ ಸದಸ್ಯರು ಅಡ್ಡಮತದಾನ ಮಾಡಿರುವುದು ಜೆಡಿಎಸ್ ಪಾಳಯಕ್ಕೆ ಅರಗಿಸಿಕೊಳ್ಳಲಾಗದ ಬಹುದೊಡ್ಡ ಆಘಾತವನ್ನು ನೀಡಿದೆ. ಇದು ಉಭಯ ಪಕ್ಷಗಳ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ಬಿಜೆಪಿಯ ಬೆಂಬಲದೊಂದಿಗೆ ಕನಿಷ್ಠ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರಗಳು ಇಲ್ಲಿ ತಲೆಕೆಳಗಾಗಿವೆ. ಬಿಜೆಪಿಯ ಕೆಲ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಚಲಾಯಿಸದೆ ಅಂತರ ಕಾಯ್ದುಕೊಂಡಿರುವುದು, ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರು ಹೊಂದಿದ್ದ ಅನುಮಾನಗಳನ್ನು ಅಕ್ಷರಶಃ ನಿಜ ಮಾಡಿದೆ. ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡರೂ, ಆಂತರಿಕವಾಗಿ ಬಿಜೆಪಿ ನಾಯಕರು ಜೆಡಿಎಸ್ ಜೊತೆ ಪ್ರಾಮಾಣಿಕವಾಗಿಲ್ಲ ಎಂಬುದನ್ನು ಈ ಅಡ್ಡಮತದಾನದ ಫಲಿತಾಂಶವು ಸಾಬೀತುಪಡಿಸಿದೆ.
ಇದೊಂದು ಕೇವಲ ವಿಧಾನ ಪರಿಷತ್ ಸ್ಥಾನದ ಪ್ರತಿಷ್ಠೆಯ ಚುನಾವಣೆಯಾಗಿರದೆ, ಮೈತ್ರಿ ಪಕ್ಷಗಳ ವಿಶ್ವಾಸಾರ್ಹತೆಯನ್ನು ಒರೆಗೆ ಹಚ್ಚಿದ ಅಗ್ನಿಪರೀಕ್ಷೆಯಾಗಿತ್ತು. ಇದರಲ್ಲಿ ಆಡಳಿತರೂಢ ಕಾಂಗ್ರೆಸ್ ತನ್ನ ಸಾಂಸ್ಥಿಕ ಸಂಘಟನಾ ಚಾತುರ್ಯವನ್ನು ಪ್ರದರ್ಶಿಸಿ ಮೇಲುಗೈ ಸಾಧಿಸಿದೆ. ಇತ್ತ, ಕುಮಾರಸ್ವಾಮಿ ಅವರು ಸೋಲಿನ ಮೂಲಕವೇ ಬಿಜೆಪಿಯ ಅಸಲಿ ಬಣ್ಣವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಮೈತ್ರಿಕೂಟದ ಸಮೀಕರಣಗಳು ಬದಲಾಗುವ ಸ್ಪಷ್ಟ ಮುನ್ಸೂಚನೆ ಸಿಕ್ಕಿದೆ.




