ಜಗತ್ತು ಮತ, ಧರ್ಮ, ಬಣ್ಣ, ಭಾಷೆ ಎಂಬ ಭಿನ್ನಗಳ ವಿಷಮತೆಯಲ್ಲಿ ಮಿಂದೆದ್ದು ದ್ವೇಷವನ್ನೇ ಉಸುರುವಾಗ ಪ್ರೀತಿ, ಸೌಹಾರ್ದತೆ ಮರುಭೂಮಿಯ ಓಯಸಿಸ್ ಹಾಗೆ ಅಪರೂಪದ್ದಾಗಿಯೇ ಕಾಣುತ್ತದೆ. ಬಾಗಲಕೋಟೆಯ ಬಾದಾಮಿ ಇಂತಹ ಅಪರೂಪದ ಕ್ಷಣಗಳಿಗೆ ಸಜ್ಜಾಗುತ್ತಿದೆ. ನಾಳೆಯಿಂದ ಪಟ್ಟಣದಲ್ಲಿ ಉರುಸ್-ಆರಾಧನಾ ಮಹೋತ್ಸವ ಜರುಗಲಿದ್ದು, ಹಿಂದೂ-ಮುಸ್ಲಿಂ ಸೌಹಾರ್ದ ಪರಂಪರೆಯ ಪ್ರತೀಕವಾಗಿರುವ ಈ ಹಬ್ಬದಲ್ಲಿ ಜಾತಿ-ಧರ್ಮದ ಹಂಗು ತೊರೆದು, ಶರಣರ ನಡಿಗೆ ಭಾವೈಕ್ಯತೆಯ ಕಡೆಗೆ ಎಂಬ ಧ್ಯೇಯದೊಂದಿಗೆ ಏಕತೆಯನ್ನು ಜಪಿಸುವ ಮನಸ್ಸುಗಳ ಸಮ್ಮಿಲನವಾಗಲಿವೆ.

ಉತ್ತರ ಕರ್ನಾಟಕದ ಐತಿಹಾಸಿಕ ಬಾದಾಮಿ ಪಟ್ಟಣದ ಬೃಹತ್ ಬೆಟ್ಟದ ಮೇಲಿರುವ ನೈಸರ್ಗಿಕ ಬಾವನ್ ಬಂಡೆ ಕೋಟೆಯಲ್ಲಿನ ಸಂತ ಸೂಫಿ ಹಜರತ್ ಸೈಯದ್ ಬಾದಷಾ ದರ್ಗಾ ಹಾಗೂ ಸಮಕಾಲೀನ ಶರಣ ಶಿವಪ್ಪಯ್ಯಜ್ಜನವರ ಆರಾಧನಾ ಮಹೋತ್ಸವವು ಮತ್ತೊಮ್ಮೆ ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿ ನಡೆಯಲಿದ್ದು, ಆಗಸ್ಟ್ 5 ಮತ್ತು 6ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಹಜರತ್ ಸೈಯದ್ ಬಾದಷಾ ದರ್ಗಾ ಚಾರಿಟಬಲ್ ಟ್ರಸ್ಟ್ ಹಾಗೂ ಭಕ್ತರ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಉತ್ಸವದ ಅಂಗವಾಗಿ ಆಗಸ್ಟ್ 5ರಂದು ಸಂಜೆ ಗಂಧದ ಮೆರವಣಿಗೆ ನಡೆಯಲಿದ್ದು, ಆಗಸ್ಟ್ 6ರಂದು ಸೈಯದ್ ಬಾದಷಾ ದರ್ಗಾದಲ್ಲಿ ಉರುಸ್ ಹಾಗೂ ಶರಣ ಶಿವಪ್ಪಯ್ಯಜ್ಜನವರ ಆರಾಧನಾ ಮಹೋತ್ಸವವು ಭಕ್ತಿಭಾವದಿಂದ ನೆರವೇರಲಿದೆ.
ಸುಮಾರು 16ನೇ ಶತಮಾನದಲ್ಲಿ ಜೀವಿಸಿದ್ದ ಸೂಫಿ ಸಂತ ಸೈಯದ್ ಬಾದಷಾ ಮತ್ತು ಶರಣ ಶಿವಪ್ಪಯ್ಯಜ್ಜ ಸಮಕಾಲೀನ ಮಹನೀಯರಾಗಿದ್ದು, ಧರ್ಮ, ಜಾತಿ, ಮತಗಳ ಭೇದವಿಲ್ಲದೆ ಸಮಾಜ ಸೇವೆ, ಮಾನವೀಯ ಮೌಲ್ಯಗಳ ಪ್ರಸಾರ ಹಾಗೂ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗುವ ಮೂಲಕ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು ಎಂದು ಇತಿಹಾಸ ತಿಳಿಸುತ್ತದೆ.

ಈ ಸಮ್ಮಿಲನದ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಹಿರಿಯ ಪತ್ರಕರ್ತ ಮುತ್ತು ನಾಯ್ಕರ್, “ಹಿಂದೂ–ಮುಸ್ಲಿಂ ಸೌಹಾರ್ದದ ಸಂಕೇತವಾಗಿರುವ ಶರಣ ಶಿವಪ್ಪ ಅಜ್ಜ ಹಾಗೂ ಸೂಫಿ ಸಂತ ಹಜರತ್ ಸೈಯದ್ ಬಾದಷಾ ಅವರ ಪರಂಪರೆ ಶತಮಾನಗಳಿಂದ ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ಜಾತಿ–ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯದ ಜನರು ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಬಾದಾಮಿ ಜನರ ಹೆಮ್ಮೆಯ ಪರಂಪರೆಯಾಗಿದೆ. ಈ ಸೌಹಾರ್ದದ ಸಂಪ್ರದಾಯ ಮುಂದಿನ ಪೀಳಿಗೆಗೂ ಅನುಕರಣೀಯ” ಎಂದು ಅಭಿಪ್ರಾಯಪಟ್ಟರು.
ಸ್ಥಳೀಯರ ನಂಬಿಕೆಯಂತೆ, “ಇಬ್ಬರು ಮಹನೀಯರು ಪವಾಡ ಪುರುಷರಾಗಿದ್ದರು. ಮಳೆ ಕೊರತೆಯ ಸಂದರ್ಭದಲ್ಲಿ ಮಳೆಯಾಗುವಂತೆ ಪ್ರಾರ್ಥಿಸಿ ಜನರಿಗೆ ಆಶಾಕಿರಣವಾಗಿದ್ದರು. ಅನಾರೋಗ್ಯ, ಕುಟುಂಬದ ಸಮಸ್ಯೆಗಳು ಹಾಗೂ ಜೀವನದ ವಿವಿಧ ಸಂಕಷ್ಟಗಳಿಗೆ ಅವರ ಆಶೀರ್ವಾದದಿಂದ ಪರಿಹಾರ ದೊರೆಯುತ್ತದೆ” ಎಂಬ ಭಕ್ತರ ಅಚಲ ನಂಬಿಕೆ ಇಂದಿಗೂ ಮುಂದುವರಿದಿದೆ.
“ಸಂತಾನ ಭಾಗ್ಯವಿಲ್ಲದ ದಂಪತಿಗಳು ಇಲ್ಲಿ ಹರಕೆ ಹೊತ್ತು ಪ್ರಾರ್ಥಿಸಿದರೆ ಸಂತಾನ ಭಾಗ್ಯ ದೊರೆಯುತ್ತದೆ” ಎಂಬ ಭಕ್ತರ ನಂಬಿಕೆಯೂ ಇದೆ. ಪ್ರತಿ ಗುರುವಾರ ಹಾಗೂ ಅಮಾವಾಸ್ಯೆಯಂದು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ದರ್ಗಾದ ಪೀಠಾಧಿಪತಿ ಸೈಯದ್ ಮುಬಾರಕ್ ಬಾದಷಾ ತಿಳಿಸಿದ್ದಾರೆ.
ಈ ವರ್ಷದ ಗಂಧದ ಮೆರವಣಿಗೆಯಲ್ಲಿ “ಶರಣರ ನಡಿಗೆ ಭಾವೈಕ್ಯತೆಯ ಕಡೆಗೆ” ಎಂಬ ಘೋಷವಾಕ್ಯದಡಿ ಸೌಹಾರ್ದದ ಸಂದೇಶ ಸಾರಲಾಗುತ್ತದೆ. ಈ ಭಾವೈಕ್ಯತಾ ನಡಿಗೆಯಲ್ಲಿ ನಾಡಿನ ವಿವಿಧ ಮಠಾಧೀಶರು, ದರ್ಗಾಗಳ ಮುತವಲ್ಲಿಗಳು, ವಿವಿಧ ಧಾರ್ಮಿಕ ಮುಖಂಡರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿ ಸೌಹಾರ್ದದ ಸಂದೇಶ ಸಾರಲಿದ್ದಾರೆ.
ಈದಿನ.ಕಾಮ್ ಜೊತೆಗೆ ಸೌಹಾರ್ದ ಪರಂಪರೆಯ ಕುರಿತು ಎದೆಯಾಳ ಹಂಚಿಕೊಂಡ ಎಂ.ಐ. ಬರವಾಲಿ, “ಉರುಸ್ ಕೇವಲ ಧಾರ್ಮಿಕ ಆಚರಣೆಯಲ್ಲ; ಇದು ಹೃದಯಗಳನ್ನು ಬೆಸೆಯುವ ಭಾವೈಕ್ಯದ ಮಹೋತ್ಸವವಾಗಿದೆ. ಹಲವು ವರ್ಷಗಳಿಂದ ಯಾವುದೇ ಜಾತಿ, ಧರ್ಮ, ಮತದ ಭೇದವಿಲ್ಲದೆ ಎಲ್ಲ ಸಮುದಾಯದ ಜನರು ಒಂದೇ ಕುಟುಂಬದ ಸದಸ್ಯರಂತೆ ಇಲ್ಲಿ ಸೇರಿ ಭಕ್ತಿ, ಸೇವೆ ಮತ್ತು ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಪರಸ್ಪರ ಪ್ರೀತಿ, ಗೌರವ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತಿರುವ ಈ ಪವಿತ್ರ ಪರಂಪರೆ ನಮ್ಮ ಸಮಾಜದ ಹೆಮ್ಮೆಯಾಗಿದೆ. ಇಂತಹ ಸೌಹಾರ್ದದ ಸಂಪ್ರದಾಯ ತಲೆಮಾರಿನಿಂದ ತಲೆಮಾರಿಗೆ ಮುಂದುವರಿದು, ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉರುಸ್ ಹಾಗೂ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು, ಪ್ರಾರ್ಥನೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಬಾಗಲಕೋಟೆ ಸೇರಿದಂತೆ ವಿಜಯಪುರ, ಬೆಳಗಾವಿ, ಗದಗ, ಧಾರವಾಡ, ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಶತಮಾನಗಳ ಇತಿಹಾಸ ಹೊಂದಿರುವ ಈ ಉರುಸ್ ಮತ್ತು ಆರಾಧನಾ ಮಹೋತ್ಸವವು ಹಿಂದೂ-ಮುಸ್ಲಿಂ ಸೌಹಾರ್ದ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿ ಗುರುತಿಸಿಕೊಂಡಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ನಡೆಯಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



