ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ ಈ ವರ್ಷ ರೈತರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ದಾಖಲೆ ಪ್ರಮಾಣದಲ್ಲಿ 58,838 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 25,997 ರೈತರು ಮಾತ್ರ ಯೋಜನೆಗೆ ಹೆಸರು ನೋಂದಾಯಿಸಿದ್ದರೆ, ಈ ಬಾರಿ ಅದರ ದುಪ್ಪಟ್ಟಿಗೂ ಅಧಿಕ ಸಂಖ್ಯೆಯಲ್ಲಿ ರೈತರು ಸೇರ್ಪಡೆಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ತಾಲೂಕುವಾರು ನೋಂದಣಿಯಲ್ಲಿ 16,236 ರೈತರೊಂದಿಗೆ ಇಳಕಲ್ ತಾಲೂಕು ಮೊದಲ ಸ್ಥಾನದಲ್ಲಿದೆ. ಹುನಗುಂದದಲ್ಲಿ 11,593 ಹಾಗೂ ಬಾದಾಮಿಯಲ್ಲಿ 11,469 ರೈತರು ನೋಂದಾಯಿಸಿಕೊಂಡಿದ್ದು, ಮಳೆ ಆಶ್ರಿತ ಪ್ರದೇಶಗಳ ರೈತರು ಬೆಳೆ ವಿಮೆಯತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಜಮಖಂಡಿ ತಾಲೂಕಿನಲ್ಲಿ 6,445, ಬಾಗಲಕೋಟೆಯಲ್ಲಿ 4,506, ಗುಳೇದಗುಡ್ಡದಲ್ಲಿ 3,814, ಮುಧೋಳದಲ್ಲಿ 2,814, ಬೀಳಿಗಿಯಲ್ಲಿ 1,590 ರೈತರು ನೋಂದಾಯಿಸಿಕೊಂಡಿದ್ದಾರೆ. ರಬಕವಿ–ಬನಹಟ್ಟಿ ತಾಲೂಕಿನಲ್ಲಿ ಕೇವಲ 159 ಹಾಗೂ ತೆರದಾಳದಲ್ಲಿ 212 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಈ ಎರಡೂ ತಾಲೂಕುಗಳು ಕೊನೆಯ ಸ್ಥಾನದಲ್ಲಿವೆ.
ಬೆಳೆವಾರು ನೋಂದಣಿಯಲ್ಲಿ ತೊಗರಿ ಬೆಳೆದ ರೈತರು ಅಗ್ರಸ್ಥಾನದಲ್ಲಿದ್ದು, 17,380 ರೈತರು ವಿಮೆಗೆ ಹೆಸರು ನೋಂದಾಯಿಸಿದ್ದಾರೆ. ಮೆಕ್ಕೆಜೋಳ ಬೆಳೆದ 13,616, ಈರುಳ್ಳಿ ಬೆಳೆದ 7,274 ಹಾಗೂ ಸೂರ್ಯಕಾಂತಿ ಬೆಳೆದ 2,516 ರೈತರು ಸೇರಿದಂತೆ ವಿವಿಧ ಬೆಳೆಗಳ ರೈತರು ಯೋಜನೆಯ ಲಾಭ ಪಡೆಯಲು ಮುಂದೆ ಬಂದಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 2.83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಆರಂಭಿಕ ಮಳೆಯ ಬಳಿಕ ಮಳೆ ಕೈಕೊಟ್ಟಿರುವ ಪರಿಣಾಮ ಹಲವು ಕಡೆ ಬೆಳೆ ಒಣಗಲಾರಂಭಿಸಿದೆ. ಕೆಲವು ಪ್ರದೇಶಗಳಲ್ಲಿ ಬಿತ್ತಿದ ಬೀಜಗಳು ಮೊಳಕೆಯೇ ಬರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲೂ ಮಳೆ ವಿಳಂಬವಾದರೆ ಬೆಳೆ ನಷ್ಟದ ಭೀತಿ ಎದುರಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆಯ ಮೊರೆ ಹೋಗಿದ್ದಾರೆ.
ಕೃಷಿ ಇಲಾಖೆಯು ಗ್ರಾಮ ಮಟ್ಟದಲ್ಲಿ ನಡೆಸಿದ ಜಾಗೃತಿ ಅಭಿಯಾನವೂ ನೋಂದಣಿ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎರಡು ಪಟ್ಟು ಹೆಚ್ಚು ರೈತರು ಯೋಜನೆಗೆ ಸೇರ್ಪಡೆಯಾಗಿದ್ದಾರೆ.
ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಲು ಆಗಸ್ಟ್ 14 ಕೊನೆಯ ದಿನವಾಗಿದ್ದು, ಅರ್ಹ ರೈತರು ವಿಳಂಬ ಮಾಡದೆ ಕೂಡಲೇ ನೋಂದಣಿ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮನವಿ ಮಾಡಿದ್ದಾರೆ.




