ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಗುರ್ಜಿ ಟೀಮ್ ಹಾಗೂ ನಾಟ್ಯಯೋಗ ಟ್ರಸ್ಟ್ ಸಾಲಾಪೂರ ವತಿಯಿಂದ ಮಹಿಳೆಯರಿಗಾಗಿ ಜಾನಪದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಕಿಸಾನ್ ಸಮಿತಿಯ ಸದಸ್ಯ ಸಿದ್ದು ಹಂಪಿಹೊಳಿ ಮಾತನಾಡಿ, ಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಅದೇ ರೀತಿ ಇಂದು ಮಹಿಳೆಯರು ಒಗ್ಗಟ್ಟಿನಿಂದ ಜಾನಪದ ಕಾರ್ಯಕ್ರಮ ನಡೆಸುತ್ತಿರುವುದು ಮಹಿಳಾ ಶಕ್ತಿ ಹಾಗೂ ಸಾಮಾಜಿಕ ಒಗ್ಗಟ್ಟಿನ ಪ್ರತೀಕವಾಗಿದೆ ಎಂದರು.
ಮಹಿಳೆಯರು ಧಾರಾವಾಹಿಗಳಿಗೆ ಸೀಮಿತವಾಗದೆ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಜಾನಪದ ಕಲೆಗಳ ತರಬೇತಿಗೆ ಅಗತ್ಯ ಸಹಾಯ ನೀಡುವುದಾಗಿ ಅವರು ಭರವಸೆ ನೀಡಿದರು.
ರಂಗಭೂಮಿ ನಿರ್ದೇಶಕರಾದ ಕಲ್ಲಪ್ಪ ಪೂಜೇರ ಮಾತನಾಡಿ ನಮ್ಮ ಹಬ್ಬಗಳು, ಆಚರಣೆಗಳು ಹಾಗೂ ಜಾನಪದ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗೌರಿ ಹುಣ್ಣಿಮೆ, ಭಾರತ ಹುಣ್ಣಿಮೆ, ಸೀಗೆ ಹುಣ್ಣಿಮೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳನ್ನು ಗ್ರಾಮದ ಜನರನ್ನು ಒಗ್ಗೂಡಿಸಿಕೊಂಡು ಆಚರಿಸುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಮುಂದಿನ ಪೀಳಿಗೆಗೆ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಹಂಪನ್ನವರ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರು ಸೋಬಾನ ಪದ, ಜೋಗುಳ ಪದ ಹಾಗೂ ಬಿಸುಕಲ್ಲಿನ ಪದಗಳನ್ನು ಹಾಡುತ್ತಿದ್ದರು. ಇವು ಮಹಿಳೆಯರ ಬದುಕಿನ ಭಾಗವಾಗಿದ್ದವು. ಆದರೆ ಇಂದು ಇಂತಹ ಜಾನಪದ ಕಲೆಗಳು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಮುಂದುವರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಚಿನ್ನವ್ವ ಕೆಂಚರಡ್ಡಿ, ಗುರ್ಜಿ ಟೀಮ್ ಮುಖ್ಯಸ್ಥೆ ಕಸ್ತೂರಿ ರಾಜನಾಳ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.



