ಹಾಸನ ಜಿಲ್ಲೆಯ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಸಂಸತ್ ಸಭೆಯಲ್ಲಿ ಈವರೆಗೂ ನೋಡೆ ಇಲ್ಲ. ಅವರು ಸಮಸ್ಯೆ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ ಎಂದು ಈಶಾನ್ಯ ದೆಹಲಿ ಸಂಸದ ಮನೋಜ್ ತಿವಾರಿ ಆರೋಪಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಿರುವ ತಿವಾರಿ, ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಈ ಬಾರಿ ಹಾಸನ ಜಿಲ್ಲೆಯಲ್ಲಿ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣನವರು ಈವರೆಗೂ ಜಿಲ್ಲೆಯ ಸಮಸ್ಯೆ ಬಗ್ಗೆ ಸಂಸತ್ ಸಭೆಯಲ್ಲಿ ಗಮನ ಸೆಳೆದಿಲ್ಲ. ನಾನು ಕೂಡ ಸಂಸದನಾಗಿ ನಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಗಮನ ಸೆಳೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ಸಂಸದ ಪ್ರಜ್ವಲ್ ರೇವಣ್ಣ ಸಂಸತ್ನಲ್ಲಿ ಶೂನ್ಯ ಹಾಜರಾತಿ ಹೊಂದಿದ್ದಾರೆ” ಎಂದು ಆರೋಪಿಸಿದರು.
“ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಗೌಡ ಅವರ ಕೆಲಸ ಎಲ್ಲರ ಗಮನ ಸೆಳೆಯುವಂತಿದೆ. ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಹಕ್ಕು ಪತ್ರ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ” ಎಂದು ಶ್ಲಾಘನೆ ವ್ಯಕ್ತಪಡಿಸಿದರು.
“ಪ್ರೀತಂ ಅವರು ಇನ್ನಷ್ಟು ಜನಸೇವೆ ಮಾಡುವ ಅವಕಾಶಕ್ಕಾಗಿ ಈ ಬಾರಿ ಮತ್ತೆ ಅವರಿಗೆ ಅವಕಾಶ ಮಾಡಿಕೊಡಬೇಕು. ದಲಿತರು, ಮುಸಲ್ಮಾನರು, ಹಿಂದುಳಿದವರು ಸೇರಿದಂತೆ ಬಿಜೆಪಿ ಸರ್ಕಾರ ಎಲ್ಲರಿಗೂ ಸಮಾನ ಅವಕಾಶ ನೀಡುವ ಸದುದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯೂ ಬಿಜೆಪಿ ಸರ್ಕಾರಕ್ಕೆ ಮತ ನೀಡಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಮುರುಳಿ ಮೋಹನ್ಗೆ ಕಾಂಗ್ರೆಸ್ ಟಿಕೆಟ್; ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲುಳಿದ ಜೆ.ಸಿ ರವಿ
“ಬಿಜೆಪಿ ಸರ್ಕಾರದ ಮೇಲೆ ಬಂದಿರುವ 40 ಪರ್ಸೆಂಟ್ ಆರೋಪ ಸತ್ಯಕ್ಕೆ ದೂರವಾಗಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿರುವುದಕ್ಕೆ ಯಾವ ದಾಖಲೆಗಳಿಲ್ಲ. ಕೆಂಪಣ್ಣ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಪ್ಪಟ ಶಿಷ್ಯ. ಗಾಳಿಯಲ್ಲಿ ಗುಂಡು ಹಾರಿಸುವ ಆರೋಪ ಮಾಡಿದ್ದಾರೆ. ಸರ್ಕಾರ ನಿಜವಾಗಿಯೂ ತಪ್ಪು ಮಾಡಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಬೇಕಿತ್ತು. ಆದರೆ, ಈವರೆಗೂ ಅವರು ಯಾವ ದೂರು ನೀಡಿಲ್ಲ” ಎಂದು ದೂರಿದರು.
“ಜೆಡಿಎಸ್ ವರಿಷ್ಠರು ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಲವಾರು ಅಧಿಕಾರ ಅನುಭವಿಸಿದ್ದರೂ ಈವರೆಗೂ ಅಷ್ಟೊಂದು ಅಭಿವೃದ್ಧಿ ಕಂಡಿಲ್ಲ. ಆದರೆ, ಪ್ರೀತಂ ಗೌಡ ಅವರು ಶಾಸಕರಾದ ಮೊದಲ ಅವಧಿಯಲ್ಲೇ ಬಹುತೇಕ ವರ್ಷಗಳಿಂದ ಆಗದ ಅಭಿವೃದ್ಧಿಯನ್ನು ಮಾಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೀಲಕಂತ್ ಬಕ್ಷಿದ್, ಅಭಯ್ ವರ್ಮಾ, ಬಿಜೆಪಿ ನಗರ ಅಧ್ಯಕ್ಷ ವೇಣುಗೋಪಾಲ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಎಸ್.ಡಿ. ಚಂದ್ರು, ಮನುಕುಮಾರ್ ಇತರರು ಇದ್ದರು.