- ʼಸಕಲೇಶಪುರ ಕ್ಷೇತ್ರಕ್ಕೆ ಮುರಳಿ ಮೋಹನ್ ಕೊಡುಗೆ ಏನೂ ಇಲ್ಲʼ
- ʼಸಕಲೇಶಪುರ ಕ್ಷೇತ್ರದಲ್ಲಿ 68 ಸಾವಿರ ದಲಿತ ಮತದಾರರಿದ್ದಾರೆ‘
ಹಾಸನ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮಂದಿ ದಲಿತ ಮತದಾರರು ಇದ್ದರೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಸಕಲೇಶಪುರದಿಂದ ಹೊರ ರಾಜ್ಯದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಕಾರಣಕ್ಕಾಗಿ ನಾನು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಉಳಿದಿದ್ದೇನೆ ಎಂದು ಜೆ ಸಿ ರವಿ ಹೇಳಿದರು.
ಸಕಲೇಶಪುರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಸಕಲೇಶಪುರ – ಆಲೂರು – ಕಟ್ಟಾಯ (ಎಸ್ಸಿ) ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 68 ಸಾವಿರ ಮಂದಿ ದಲಿತ ಸಮುದಾಯದ ಮತದಾರಿದ್ದಾರೆ. ಅವರಲ್ಲಿ ವಿದ್ಯಾವಂತರು, ಹೋರಾಟಗಾರರು, ಶಾಸಕರಾಗಲು ಅರ್ಹತೆ ಇರುವ ಸಾಕಷ್ಟು ಮಂದಿ ಇದ್ದಾರೆ” ಎಂದರು.
“ಜಿಲ್ಲಾ ವ್ಯಾಪ್ತಿಯಲ್ಲಿ ಅರ್ಹತೆ ಇರುವವರು ಹಲವರಿದ್ದರೂ, ಪಕ್ಷದಲ್ಲಿ ದಶಕಗಳಿಂದ ದುಡಿದವರನ್ನು ಕಡೆಗಣಿಸಿ ಮುರಳಿ ಮೋಹನ್ ಅವರಿಗೆ ಟಿಕೆಟ್ ನೀಡಿರುವ ಉದ್ದೇಶವೇನು” ಎಂದು ಪ್ರಶ್ನಿಸಿದರು.
“ಮುರಳಿ ಮೋಹನ್ ಅವರು ಕ್ಷೇತ್ರದಲ್ಲಾಗಲಿ, ಜಿಲ್ಲೆಯಲ್ಲಾಗಲಿ ಕಾಂಗ್ರೆಸ್ ಕಟ್ಟಿ ಬೆಳೆಸಿಲ್ಲ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಕೇವಲ ಮೂರು ವರ್ಷದಿಂದ ಓಡಾಡಿಕೊಂಡು ಇರುವ ಇವರಿಗೆ ಟಿಕೆಟ್ ನೀಡುವುದಾದರೆ 30 ರಿಂದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಈ ಜಿಲ್ಲೆಯ ದಲಿತ ಸಮುದಾಯದ ನಾಯಕರ ಗತಿ ಏನು?” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಹಾಸನ ಕ್ಷೇತ್ರ | ದಾಸ ಒಕ್ಕಲಿಗರ ನಡುವಿನ ಕಾದಾಟವಾದರೂ, ಮುಸ್ಲಿಂ ಮತದಾರರೆ ನಿರ್ಣಾಯಕ
“ಹಾಸನ ಜಿಲ್ಲೆಯ ದಲಿತ ಕಾಂಗ್ರೆಸ್ ಮುಖಂಡರು ಯಾರೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಮರ್ಥರಿಲ್ಲ ಎಂದು ತಿಳಿದಿರುವ ಹೈಕಮಾಂಡ್ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿಗೆ ಧಕ್ಕೆ ತಂದಿದೆ. ದಲಿತರನ್ನು ಕೇವಲ ಕಾಂಗ್ರೆಸ್ ಮತದಾಳು ಎಂದು ತಿಳಿದಿರುವ ಹೈಕಮಾಂಡ್ಗೆ ನಮ್ಮಲ್ಲಿ ಸಮರ್ಥ ನಾಯಕರಿದ್ದಾರೆಂದು ತೋರಿಸಬೇಕಿದೆ” ಎಂದರು.
“ಆದ್ದರಿಂದ ಹಾಸನ ಜಿಲ್ಲೆಯ ದಲಿತ ಸಮುದಾಯದ ಎಲ್ಲ ಮುಖಂಡರು, ಕಾರ್ಯಕರ್ತರ ಪರವಾಗಿ ಹಾಗೂ ಈ ಕ್ಷೇತ್ರದ ದಲಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಣಿಕಂಠ, ಆನಂದ, ಶಂಕ್ರಪ್ಪ, ಸೋಮಣ್ಣ ಇದ್ದರು.