- 12 ನಿರ್ದೇಶಕರ ಪೈಕಿ 7 ಮಂದಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರ ಹಿಡಿದಿತ್ತು
- ರಾಮಚಂದ್ರ ರಾಜೀನಾಮೆ ಹಿನ್ನೆಲೆ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ
ಪ್ರಸಕ್ತ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯಾದ ಮಂಡ್ಯವನ್ನು ಕಳೆದುಕೊಂಡಿರುವುದರಿಂದ, ಪಕ್ಷವು ಮಂಡ್ಯ ಹಾಲು ಒಕ್ಕೂಟ (ಮನ್ಮುಲ್) ಮೇಲಿನ ಹಿಡಿತವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಬಿ ಆರ್ ರಾಮಚಂದ್ರ ಅವರ ರಾಜೀನಾಮೆಯಿಂದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ಅನಿವಾರ್ಯವಾಗಿದೆ.
12 ನಿರ್ದೇಶಕರ ಪೈಕಿ 7 ನಿರ್ದೇಶಕರ ಬೆಂಬಲದೊಂದಿಗೆ ಜೆಡಿಎಸ್ ಮನ್ಮುಲ್ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಮೂವರು ಕಾಂಗ್ರೆಸ್ ನಿರ್ದೇಶಕರು ಮತ್ತು ಒಬ್ಬರು ಬಿಜೆಪಿ ನಿರ್ದೇಶಕರಿದ್ದು, ಒಂದು ಹುದ್ದೆ ಖಾಲಿ ಇದೆ.
ಜೆಡಿಎಸ್ನ ಆಂತರಿಕ ನಿರ್ಧಾರದಂತೆ ರಾಮಚಂದ್ರ ಒಂದು ತಿಂಗಳ ಹಿಂದೆ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಮೇ 16ರಂದು ಅಂಗೀಕರಿಸಲಾಗಿತ್ತು. ಇದೀಗ ರಾಮಚಂದ್ರ ಅವರು ಮಂಡ್ಯ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೂ ಒಬ್ಬ ನಿರ್ದೇಶಕರನ್ನು ನಾಮನಿರ್ದೇಶನ ಮಾಡಿತ್ತು. ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ನಾಮನಿರ್ದೇಶನವನ್ನು ರದ್ದುಗೊಳಿಸಲಾಗುವುದು. ಇದಲ್ಲದೆ, ಮನ್ಮುಲ್ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಅಧಿಕಾರವನ್ನು ಹೊಂದಿರುವ ಮೂವರು ರಾಜ್ಯ ಸರ್ಕಾರಿ ಅಧಿಕಾರಿಗಳು ಆಡಳಿತ ಪಕ್ಷಕ್ಕೆ ಮತ ಚಲಾಯಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಕೇವಲ ಮೂವರು ಚುನಾಯಿತ ನಿರ್ದೇಶಕರನ್ನು ಹೊಂದಿದ್ದರೂ, ನಾಮನಿರ್ದೇಶಿತ ನಿರ್ದೇಶಕರು ಮತ್ತು ಮೂವರು ಅಧಿಕಾರಿಗಳ ಸಹಾಯದಿಂದ ಅದರ ಸಂಖ್ಯೆ ಏಳಕ್ಕೆ ಏರುತ್ತದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮಾನ ಸಂಖ್ಯೆಯ ಮತಗಳನ್ನು ಹೊಂದಿರುವುದರಿಂದ, ಮನ್ಮುಲ್ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ.
ಮಂಡ್ಯದ ಜೆಡಿಎಸ್ ಅಧ್ಯಕ್ಷ ರಮೇಶ್ ಅವರು ಮನ್ಮುಲ್ನಲ್ಲಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರನೇ ಬಾರಿಗೆ ಶಾಸಕ; ಎದುರಾಗಿರುವ ಅಭಿವೃದ್ಧಿ ಸವಾಲು
“ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಹೊಸದಾಗಿ ನಾಮನಿರ್ದೇಶನಗೊಂಡ ನಿರ್ದೇಶಕರು ಮತ್ತು ಎಲ್ಲ ಮೂವರು ಅಧಿಕಾರಿಗಳು ಕಾಂಗ್ರೆಸ್ಗೆ ಮತ ಚಲಾಯಿಸಲಿದ್ದಾರೆ” ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಡುವೆ ಹೋರಾಟ ನಡೆಯುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಯು ಸಿ ಶಿವಪ್ಪ ಮತ್ತು ಬೋರೇಗೌಡ ನಡುವೆ ಪೈಪೋಟಿ ಏರ್ಪಟ್ಟಿತ್ತು. ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಬಾಲು ಮತ್ತು ಡಾಲು ರವಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.