ರಾಯಚೂರು ಜಿಲ್ಲೆಯ ಲಿಂಗಸಗೂರು ಮೀಸಲು ವಿಧಾನಸಭಾ ಕ್ಷೇತ್ರದಿಂದ 2008, 2013 ಹಾಗೂ 2023ರ ಚುನಾವಣೆ ಸೇರಿದಂತೆ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮಾನಪ್ಪ ವಜ್ಜಲ್ ಅವರ ಎದುರು ಹಲವು ಸವಾಲುಗಳಿವೆ.
ಲಿಂಗಸಗೂರು ಕ್ಷೇತ್ರದಲ್ಲಿ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಲ್ಲದೆ, ಶಾಸಕರು ಚುನಾವಣೆ ವೇಳೆ ಹಲವು ಭರವಸೆಗಳನ್ನೂ ನೀಡಿದ್ದಾರೆ. ಈಗ ಅವರಿಗೆ ಅಭಿವೃದ್ಧಿ ಮತ್ತು ಅವುಗಳನ್ನು ಈಡೇರಿಸಬೇಕಾದ ಸವಾಲು ಎದುರಾಗಿದೆ.
ನಂದವಾಡಗಿ ಏತ ನೀರಾವರಿ ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿರುವ ಗ್ರಾಮಗಳ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು. 2019–20 ರಲ್ಲಿ ನೀಡಿದ್ದ ಕಾಚಾಪುರ ಏತ ನೀರಾವರಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ಏತ ನೀರಾವರಿ, ಅಮರೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಅನುಷ್ಠಾನದ ನಿರೀಕ್ಷೆಯಲ್ಲಿದ್ದಾರೆ.
“ನನೆಗುದಿಗೆ ಬಿದ್ದಿರುವ ಶಾಸಕರ ಭವನ ಜೀರ್ಣೋದ್ಧಾರ, ನರಕಲದಿನ್ನಿ ಗ್ರಾಮ ಪಂಚಾಯಿತಿ ಸಭಾಭವನ ನಿರ್ಮಾಣ, ಮಾವಿನಭಾವಿಯಲ್ಲಿನ ಸಭಾಭವನ ನಿರ್ಮಾಣ ಕಾಮಗಾರಿಗಳಿಗೆ ಪುನಶ್ಚೇತನ ನೀಡುವುದು ಸೇರಿದಂತೆ ಶುದ್ಧ ಕುಡಿವ ನೀರು ಪೂರೈಕೆ, ಜಲಶುದ್ಧೀಕರಣ ಘಟಕಗಳ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ, ನೀರಾವರಿ ಯೋಜನೆಗಳಡಿ ರೈತರ ಜಮೀನಿಗೆ ನೀರು ಹರಿಸುವ ಸಮರ್ಪಕ ಕಲ್ಪಿಸಬೇಕು” ಎಂದು ಶಾಸರಿಗೆ ಒತ್ತಾಯಿಸಿದ್ದಾರೆ.
“ಕನಿಷ್ಠ 2,000 ಮಂದಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಉದ್ಯಮ ಸ್ಥಾಪನೆ. ಹಟ್ಟಿ ಚಿನ್ನದ ಗಣಿಗೆ ಮೈನಿಂಗ್ ಕಾಲೇಜು ಮಂಜೂರಾತಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗ ತ್ವರಿತ ನಿರ್ಮಾಣಕ್ಕೆ ಕ್ರಮ ಸೇರಿದಂತೆ ಬಹುತೇಕ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಗೊಳ್ಳಬೇಕಿದೆ. ಯರಜಂತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಸೇರಿ ಉದ್ಯೋಗ ಸೃಷ್ಟಿಯ ಯೋಜನೆಗಳ ಕನಸು ಸಾಕಾರಗೊಳಿಸಬೇಕು” ಎಂಬುದು ಕ್ಷೇತ್ರದ ಜನರ ಆಗ್ರಹವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆ; ಸ್ಥಳೀಯರ ಆಕ್ರೋಶ
“ಮುದಗಲ್ ತಾಲೂಕು ಘೋಷಣೆ, ಜಲದುರ್ಗ ಮತ್ತು ಮುದಗಲ್ ಕೋಟೆ ಸಂರಕ್ಷಣೆ, ಪ್ರವಾಸಿ ತಾಣಗಳನ್ನಾಗಿಸುವುದು. ಹಟ್ಟಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವುದು, ಮುದಗಲ್, ಹಟ್ಟಿ, ಲಿಂಗಸುಗೂರು ಪಟ್ಟಣಗಳಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ. ತಾಂಡಾ, ದೊಡ್ಡಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ, ರೈತರ ಪಂಪ್ಸೆಟ್ಗಳಿಗೆ ದಿನದ 12 ಗಂಟೆ ನಿರಂತರ ವಿದ್ಯುತ್ ಸಂಪರ್ಕದ ಭರವಸೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಎರಡು ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿರುವ ಶಾಸಕ ಮಾನಪ್ಪ ವಜ್ಜಲ್ ಮತ್ತೊಂದು ಅವಧಿಗೆ ಶಾಸಕರಾಗಿ ಆಯ್ಕೆ ಆಗಿರುವುದು ಕ್ಷೇತ್ರದ ಜನರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಯೋಜನೆಗಳ ಅನುಷ್ಠಾನ, ಭರವಸೆಗಳನ್ನು ಈಡೇರಿಸುವ ನಿರೀಕ್ಷೆಯಲ್ಲಿ ಜನರಿದ್ದಾರೆ ಎಂದು ತಿಳಿದುಬಂದಿದೆ.