ಬಾಗಲಕೋಟೆ ಜಿಲ್ಲೆಯ ಏಕೈಕ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರನ್ನು ಸೋಲಿಸಿರುವ ಶಾಸಕ ಆರ್ ಬಿ ತಿಮ್ಮಾಪೂರ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಇಲಾಖೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸರ್ಕಾರಗಳ ಅವಧಿಯಲ್ಲಿ ಸಚಿವ ಸ್ಥಾನ ನಿಶ್ಚಿತ ಎನ್ನುವುದು ಮುಧೋಳ ವಿಧಾನಸಭಾ ಕ್ಷೇತ್ರದ ಹೆಗ್ಗಳಿಕೆ. ಈ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಗೋವಿಂದ ಕಾರಜೋಳ, ಕಾಂಗ್ರೆಸ್ನ ಆರ್ ಬಿ ತಿಮ್ಮಾಪೂರ ಪ್ರತಿ ಬಾರಿಯೂ ಸಚಿವ ಸ್ಥಾನ ಪಡೆದಿದ್ದಾರೆ. ಇದೀಗ ಮತ್ತೊಮ್ಮೆ ಮುಧೋಳ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದುಬಂದಿದೆ. ಯಾರೇ ಇಲ್ಲಿನ ಶಾಸಕರಾದರೂ ಅವರು ಸಚಿವರಾಗುತ್ತಾರೆ ಎನ್ನುವ ಇತಿಹಾಸ ಈಗ ಮುಂದುವರಿದಿದೆ.
ಬಾಗಲಕೋಟೆ ಜಿಲ್ಲೆಯ ಏಕೈಕ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರನ್ನು ಸೋಲಿಸಿರುವ ಶಾಸಕ ಆರ್ ಬಿ ತಿಮ್ಮಾಪೂರ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಇಲಾಖೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಮೂಲಕ ಸೋತರೂ ಗೆದ್ದರೂ ಛಲ ಬಿಡದಂತೆ ಪಕ್ಷಕ್ಕಾಗಿ ಕಾರ್ಯನಿರ್ವಹಿಸಿದ ಪ್ರಬಲ ಎಸ್ಸಿ (ಎಡಗೈ) ಸಮುದಾಯದ ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕರಾದ ಶಾಸಕ ಆರ್ ಬಿ ತಿಮ್ಮಾಪೂರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಿದೆ ಎನ್ನುವ ಅಭಿಮಾನದ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿವೆ.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ತಿಮ್ಮಾಪೂರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅರವತ್ತು ವರ್ಷದ ಆರ್ ಬಿ ತಿಮ್ಮಾಪೂರ ಅವರು ಅತಿ ಹೆಚ್ಚು ಬಾರಿ ಸಚಿವ ಸ್ಥಾನ ಪಡೆದಿದ್ದಾರೆ. ತಿಮ್ಮಾಪುರ ಅವರು ಸೋತಾಗಲು ಕೂಡ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ಇವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಿದ ಉದಾಹರಣೆಯಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಆರ್ ಬಿ ತಿಮ್ಮಾಪೂರ ತಮ್ಮದೇ ವಿಶಿಷ್ಟ ವ್ಯಕ್ತಿತ್ವದ ಮೂಲಕ ಕಾಂಗ್ರೆಸ್ನ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.
ಆರ್ ಬಿ ತಮ್ಮಾಪುರ ರಾಜಕೀಯ ಹಿನ್ನೆಲೆ
ಬಾದಾಮಿ ತಾಲೂಕಿನ ಕಾಡರಕೊಪ್ಪದಲ್ಲಿ ಜನಿಸಿದ ರಾಮಪ್ಪ ಬಾಲಪ್ಪ ತಿಮ್ಮಾಪೂರ (ಆರ್ ಬಿ ತಿಮ್ಮಾಪುರ) ಕಾಲೇಜು ದಿನಗಳಿಂದಲೇ ರಾಜಕೀಯದ ಆಸಕ್ತಿ ಹೊಂದಿದ್ದರು. ಆರ್ ಬಿ ತಿಮ್ಮಾಪೂರ ಅವರು ಕಾಲೇಜು ದಿನಗಳಲ್ಲಿ ಕುಸ್ತಿಯಲ್ಲಿ ಪೈಲ್ವಾನ್ ಆಗಿದ್ದರು. ತಿಮ್ಮಾಪುರ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ, ಎಲ್ಎಲ್ಬಿ ಪದವಿ ಪಡೆದಿದ್ದಾರೆ.
1989ರಲ್ಲಿ ಮೊದಲ ಬಾರಿ ಮುಧೋಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 27 ವರ್ಷ ವಯಸ್ಸಿನವರಾಗಿದ್ದ ತಿಮ್ಮಾಪೂರ ಆಗ ರಾಜ್ಯದಲ್ಲೇ ಅತ್ಯಂತ ಕಿರಿಯ ಶಾಸಕರು ಎಂಬ ಖ್ಯಾತಿ ಪಡೆದಿದ್ದರು. 1989ರಿಂದ ರಾಜಕೀಯ ಆರಂಭಿಸಿರುವ ಆರ್.ಬಿ. ತಿಮ್ಮಾಪುರ, ಈವರೆಗೂ ಒಟ್ಟು ಏಳು ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಸೋತು, ಮೂರು ಬಾರಿ ಗೆಲುವು ಸಾಧಿಸಿದ್ದಾರೆ.
ಸೋತರೂ, ಗೆದ್ದರೂ, ಅಧಿಕಾರ ಇದ್ದರೂ, ಇಲ್ಲದಿದ್ದರೂ ಸಂಯಮ ಕಳೆದುಕೊಳ್ಳದೆ, ತಾಳ್ಮೆಯಿಂದ ಕ್ಷೇತ್ರದ ಜನರೊಂದಿಗೆ ಇರುವ ನಾಯಕ ಎಂಬ ಖ್ಯಾತಿ ಗಳಿಸಿದ್ದಾರೆ. 1993ರಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. 1994ರ ಚುನಾವಣೆಯಲ್ಲಿ ಸೋತು, ಬಳಿಕ 1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಮೊದಲ ಬಾರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಖಾತೆಯ ರಾಜ್ ಸಚಿವರಾಗಿ ಸಮರ್ಥ ಆಡಳಿತ ನಿರ್ವಹಿಸಿದ ಖ್ಯಾತಿ ಪಡೆದಿದ್ದಾರೆ.
ಸೋತರು ಗೆದ್ದರೂ ತಿಮ್ಮಾಪೂರ ಮಂತ್ರಿ
2002ರಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ, ಸಾಂಖ್ಯಿಕ ಖಾತೆ ಸಚಿವರಾಗಿದ್ದರು. 2003ರಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪಕ್ಷ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ಅಷ್ಟೇ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2004, 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು. ಆದರೂ, ಇಡೀ ಉತ್ತರಕರ್ನಾಟಕದಲ್ಲಿ ಎಸ್ಸಿ ಎಡಗೈ ಸಮುದಾಯದ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಸತತ ಸೋತರೂ, 2016ರಲ್ಲಿ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆ ಮಾಡಿ, ಮುಂದೆ 2017ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರನ್ನಾಗಿ ಮಾಡಲಾಯಿತು. 2018ರ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಿಂದ ಟಿಕೆಟ್ ವಂಚಿತರಾದರೂ, ತಾಳ್ಮೆಯಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಆದರೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಕ್ಕರೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಅವರ ಎಂಎಲ್ಸಿ ಅವಧಿ ಪೂರ್ಣಗೊಂಡಿದೆ.
ಪ್ರಸ್ತುತ 2023ರ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ, ಮಾಜಿ ಸಚಿವ, ಬಿಜೆಪಿಯ ಗೋವಿಂದ ಕಾರಜೋಳ ವಿರುದ್ಧ 17 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂರನೇ ಬಾರಿ ವಿಧಾನಸೌಧ ಪ್ರವೇಶಿಸಿ, ತಿಮ್ಮಾಪೂರ ಮತ್ತೆ ಮಂತ್ರಿ ಸ್ಥಾನ ಪಡೆದಿದ್ದಾರೆ.
ಈಗಲೂ ಹಲವಾರು ಗ್ರಾಮಗಳು ಕಂಗಾಲು
ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ ಕ್ಷೇತ್ರದ ಹಲವಾರು ಗ್ರಾಮಗಳು ಪ್ರತಿ ವರ್ಷ ಕಂಗಾಲಾಗುತ್ತಿವೆ. ”ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದೇನೆ, ಮಾದರಿ ಕ್ಷೇತ್ರವನ್ನಾಗಿಸುತ್ತೇನೆ” ಎಂದು ಹೇಳುತ್ತ ಬಂದಿದ್ದ ಕಾರಜೋಳ ಈಗ ಸೋತು ಮನೆ ಸೇರಿದ್ದಾರೆ. ”ನಾನು ರೂಪಿಸಿದ ಹಲವು ಯೋಜನೆ ಸರಿಯಾಗಿ ಜಾರಿಗೊಳಿಸದ ಪರಿಣಾಮ ಅಭಿವೃದ್ಧಿ ಆಗಿಲ್ಲ” ಎನ್ನುತ್ತಿದ್ದ ತಿಮ್ಮಾಪೂರ ಈಗ ಮಂತ್ರಿಗಿರಿ ಪದವಿಯಲ್ಲಿದ್ದಾರೆ. ಇನ್ನಾದರೂ ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ನಲುಗುವ ಗ್ರಾಮಗಳ ಕಡೆ ತಿಮ್ಮಾಪೂರ ಗಮನ ಹರಿಸಬೇಕಿದೆ.
ಹಾಗೆಯೇ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿ ಚುರುಕುಗೊಳ್ಳಬೇಕಿದೆ. ಅಲ್ಲದೇ ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ) ಮೂರನೇ ಹಂತದ ಯೋಜನೆಯಡಿ ಮುಳುಗಡೆಯಾಗುವ ಗ್ರಾಮಗಳ ತ್ವರಿತ ಸ್ಥಳಾಂತರ ಕುರಿತು ಸಚಿವರು ಮುಂದೆ ನಿಂತು ಸರ್ಕಾರದಿಂದ ಪರಿಹಾರ ಕಲ್ಪಿಸಬೇಕಿದೆ.
ಕಬ್ಬಿನ ಕಾವು ತನಿಸಬೇಕಿದೆ
ಮುಧೋಳ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ಕಬ್ಬು ಬೆಳೆಯುತ್ತಾರೆ. ಅಷ್ಟೇ ಪ್ರಮಾಣದಲ್ಲಿ ಕಬ್ಬು ನುರಿಸುವ ಕಾರ್ಖಾನೆಗಳು ಅಲ್ಲಿವೆ. ಪ್ರತಿ ವರ್ಷ ಕಬ್ಬಿಗೆ ಉತ್ತಮ ಬೆಲೆ ನೀಡಬೇಕೆಂದು ಮುಧೋಳದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ನೂತನ ಸಚಿವರು ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದು ಕಾದುನೋಡಬೇಕಿದೆ.