ಜಾತಿ ಗುರುತಿನ ಆಧಾರದ ಮೇಲೆ ಹಲ್ಲೆ ಮತ್ತು ಅವಮಾನಗಳ ಆರೋಪಗಳು ಇನ್ನೂ ದಾಖಲಾಗುತ್ತಿರುವುದು, ಸಾಮಾಜಿಕ ಅಸಮಾನತೆ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಾಮಾಜಿಕ ನ್ಯಾಯದ ಸಾಧನಗಳ ಅಗತ್ಯದ ಕುರಿತ ಚರ್ಚೆಯನ್ನೂ ಮತ್ತೆ ಮುಂದಿಟ್ಟಿದೆ. ಇಂತಹ ಘಟನೆಗಳ ತನಿಖೆ ಕಾನೂನು ಪ್ರಕಾರ ನಡೆಯಬೇಕು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ(SH) ಗ್ರಾಮದಲ್ಲಿ ಆಗಸ್ಟ್ 1ರಂದು ದಲಿತ ಕುಟುಂಬವನ್ನು ತಡೆದು, ದೈಹಿಕವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪೊಲೀಸರು 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮದಲ್ಲಿ ಜುಲೈ 25ರಂದು ವಾಲ್ಮೀಕಿ ಸಮುದಾಯದ ಮಹಿಳೆಯೊಬ್ಬರು ನಿಧನರಾದರು. ಶವಸಂಸ್ಕಾರಕ್ಕೆ ಗುಂಡಿ ಅಗೆಯುವ ವಿಚಾರಕ್ಕೆ ಸಂಬಂಧಿಸಿ ವಿವಾದ ಉಂಟಾಗಿತ್ತು. ಕಲಬುರಗಿ ಮೂಲದ ದಲಿತ ಸಮುದಾಯಕ್ಕೆ ಸೇರಿದ ದೇವಪ್ಪ ಶಿವಪ್ಪ ತಲ್ವಾರ್ ಈಗ ಶಾಖಾಪುರ(ಎಸ್ಎಚ್)ದಲ್ಲಿ ವಾಸಿಸುತ್ತಿದ್ದಾರೆ. ಅವರ ಸಂಬಂಧಿಯೊಂದಿಗೆ ಸಮಾಧಿ ಗುಂಡಿ ಅಗೆಯಲು ಹೇಳಲಾಯಿತು. ಆದರೆ ಅನಾರೋಗ್ಯದ ಕಾರಣ ಅವರು ಗುಂಡಿ ಅಗೆಯಲು ನಿರಾಕರಿಸಿದರು.
ಇದೇ ವಿಷಯಕ್ಕೆ ಜಿದ್ದು ಸಾಧಿಸಿದ್ದ ಆರೋಪಿಗಳು, ದೇವಪ್ಪ ಆಗಸ್ಟ್ 1ರಂದು ಸ್ಥಳೀಯ ಬೋರ್ವೆಲ್ ಬಳಿ ನೀರು ಸೇದಲು ಹೋಗುತ್ತಿದ್ದಾಗ ತಡೆದು ದೈಹಿಕವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ, ಕೊಲೆಬೆದರಿಕೆ ಹಾಕಿರುವುದಾಗ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಅದೇ ದಿನ, ದೇವಪ್ಪ, ಅವರ ಪತ್ನಿ ಲಲಿತಾ ಮತ್ತು ಸಂಬಂಧಿಕರಾದ ಭೀಮವ್ವ, ಸಿದ್ದಮ್ಮ ಹಾಗೂ ಗಂಗಮ್ಮ ಹೊಲದ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿಗಳು ಅಡ್ಡಗಟ್ಟಿದ್ದು, ಅವರ ಮೇಲೆ ಕಟ್ಟಿಗೆಗಳಿಂದ ಹಲ್ಲೆ ಮಾಡಿ, ಒದೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಸಮಾಧಿ ಗುಂಡಿಗಳನ್ನು ಅಗೆಯಲು ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಗಾಯಾಳುಗಳು ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದು, ಬಳಿಕ ಅವರು ಪೊಲೀಸ್ ದೂರು ದಾಖಲಿಸಿದ್ದರು. ದೇವಪ್ಪ ಅವರ ದೂರಿನ ಮೇರೆಗೆ ಸುರಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ(ಬಿಎನ್ಎಸ್)-2023 ರ ಸೆಕ್ಷನ್ 189(2), 191(2), 191(3), 115(2), 118(1), 74, 352, ಮತ್ತು 351(2) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ(ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(5), 3(1)(2), ಮತ್ತು 3(2)(v-a) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಎಫ್ಐಆರ್ ಪ್ರಕಾರ ಆರೋಪಿತ ವ್ಯಕ್ತಿಗಳು
ಸಿದ್ದಪ್ಪ ಶಿವರಾಯ ದೇವದುರ್ಗ
ನಾಗಪ್ಪ ಮರಿಯಪ್ಪ ಮಸಳಿ
ಮಾಳಪ್ಪ ಮುದುಕಪ್ಪ ಪೂಜಾರಿ
ಹುಲಿಗೆಪ್ಪಗೌಡ ಯಲ್ಲಯ್ಯಗೌಡ ಪೊಲೀಸ್ ಪಾಟೀಲ್
ಮರಿಯಪ್ಪ ಬಸನಗೌಡ ಮಾಲಿಗೌಡ
ಗಂಗಪ್ಪ ನಾರಾಯಣಪ್ಪ ಪೋಲೀಸಗೌಡ
ಭೀಮನಗೌಡ ನಿಂಗನಗೌಡ ಮಾಲಿಪಾಟೀಲ
ಮಲ್ಲೇಶ ನಿಂಗಪ್ಪ ಮಾಳಿಗೌಡರ್
ನಾಗಪ್ಪ ಹುಲಿಗೆಪ್ಪ ಪೋಲೀಸಗೌಡರ್
ಭೀಮಣ್ಣ ರಾಮನಗೌಡ ಪೊಲೀಸ್ ಪಾಟೀಲ್
ಹನುಮಂತ ಭೀಮಣ್ಣ ಭೈರಮಡ್ಡಿ
ಮೌನೇಶ್ ಭೀಮಪ್ಪ
ಭೀಮಣ್ಣ ಭೀಮಣ್ಣ ಪಾನೇರ್
ಮಲ್ಲಪ್ಪ ರಾಮನಗೌಡ ಪೊಲೀಸ್ ಪಾಟೀಲ್
ದೇವಮ್ಮ ಹನುಮಂತ ಮಾಲಿಪಾಟೀಲ
ಭೀಮವ್ವ ಮರೆಪ್ಪ ಮಾಲಿಪಾಟೀಲ್
ಪರಶುರಾಮ ಈಶಪ್ಪ ಸೂಗೂರು
ನಾಗಪ್ಪ ಈಡಿಗ ಸಮುದಾಯಕ್ಕೆ ಹಾಗೂ ಮಾಳಪ್ಪ ಕುರುಬ ಸಮುದಾಯಕ್ಕೆ ಸೇರಿದವರು. ಉಳಿದವರೆಲ್ಲರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಸ್ಥಳೀಯ ದಲಿತರಿಗೆ ರಕ್ಷಣೆ ನೀಡಲು ಶಾಖಾಪುರ(ಎಸ್ಎಚ್) ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ಉಪ ವರಿಷ್ಠಾಧಿಕಾರಿ(ಸುರಪುರ) ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಮಾಹಿತಿ ಪಡೆಯಲು ಈ ದಿನ.ಕಾಮ್ ಜಿಲ್ಲಾ ವರಷ್ಠಾಧಿಕಾರಿಯವರನ್ನು ಸಂಪರ್ಕಿಸಿದೆಯಾದರೂ, ಕರೆಗೆ ಲಭ್ಯವಾಗಿಲ್ಲ.
‘ಸಂವಿಧಾನ ನಿಷೇಧಿಸಿದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಸಂಪೂರ್ಣವಾಗಿ ಕೊನೆಗೊಂಡಿದೆ. ಈಗ ಎಲ್ಲರೂ ಸಮಾನರು’ ಎನ್ನುತ್ತ ಮೀಸಲಾತಿ ಹಠಾವೋ ಆಂದೋಲನ ಆರಂಭಿಸಿರುವ ಹೊತ್ತಿನಲ್ಲೇ ಜಾತಿಯ ಹೆಸರಿನಲ್ಲಿ ಕೆಲಸ ಮಾಡಲು ಒತ್ತಾಯಿಸುವ ಆರೋಪಗಳು ಇನ್ನೂ ಏಕೆ ಕೇಳಿಬರುತ್ತಿವೆ? ಇಂತಹ ಘಟನೆಗಳು ನಡೆಯುತ್ತಿರುವಾಗ ಮೀಸಲಾತಿಯ ಅಗತ್ಯ ಮುಗಿದಿದೆ ಎಂದು ಹೇಳಬಹುದೇ?
ಇದನ್ನೂ ಓದಿದ್ದೀರಾ? ಕೆ ಎಸ್ ಬಸವಂತಪ್ಪ ಹೋರಾಟದ ಹೆಜ್ಜೆಗುರುತು: ಪೌರಕಾರ್ಮಿಕರ ಮಗನಿಂದ ಸಚಿವ ಸ್ಥಾನದವರೆಗೆ
ಜಾತಿ ಇನ್ನೂ ಬದುಕಿರುವಾಗ, ಜಾತಿ ಆಧಾರಿತ ಅನ್ಯಾಯವೂ ಬದುಕಿದೆ; ಅದಕ್ಕೆ ಸಂವಿಧಾನ ನೀಡಿದ ಉತ್ತರವೇ ಮೀಸಲಾತಿ ಮತ್ತು ದೌರ್ಜನ್ಯ ತಡೆ ಕಾನೂನು. ಮೀಸಲಾತಿ ಬಡತನ ನಿವಾರಣೆ ಮಾತ್ರವಲ್ಲ; ಐತಿಹಾಸಿಕ ಸಾಮಾಜಿಕ ಬಹಿಷ್ಕಾರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂವಿಧಾನದ ವಿಧಿ 17 – ಅಸ್ಪೃಶ್ಯತೆಯನ್ನು ರದ್ದುಗೊಳಿಸಿದೆ. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ, 1989 – ಜಾತಿ ಆಧಾರಿತ ದೌರ್ಜನ್ಯಗಳಿಗೆ ವಿಶೇಷ ಕಾನೂನು ರಕ್ಷಣೆ ಒದಗಿಸುತ್ತದೆ. ಆದರೂ ಕೂಡ ತಳಸಮುದಾಯಗಳ ಮೇಲೆ ಎಗ್ಗಿಲ್ಲದೆ ಹಲ್ಲೆಗಳು ನಡೆಯುವುದಲ್ಲದೆ, ಪ್ರಾಣ ಬೆದರಿಕೆಯನ್ನೂ ಹಾಕಲಾಗುತ್ತದೆ. ಹಾದಿ ಬೀದಿಯಲ್ಲಿ ಅಮಾನವೀಯವಾಗಿ ಎಳೆದಾಡಲಾಗುತ್ತದೆ. ಜಾತಿ ಗುರುತಿನ ಆಧಾರದ ಮೇಲೆ ಹಲ್ಲೆ ಮತ್ತು ಅವಮಾನಗಳ ಆರೋಪಗಳು ಇನ್ನೂ ದಾಖಲಾಗುತ್ತಿರುವುದು, ಸಾಮಾಜಿಕ ಅಸಮಾನತೆ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಾಮಾಜಿಕ ನ್ಯಾಯದ ಸಾಧನಗಳ ಅಗತ್ಯದ ಕುರಿತ ಚರ್ಚೆಯನ್ನೂ ಮತ್ತೆ ಮುಂದಿಟ್ಟಿದೆ. ಇಂತಹ ಘಟನೆಗಳ ತನಿಖೆ ಕಾನೂನು ಪ್ರಕಾರ ನಡೆಯಬೇಕು.




