ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಅವ್ಯವಹಾರ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಮಮಂದಿರ ಆಂದೋಲನದ ಹಿರಿಯ ನಾಯಕ ಹಾಗೂ ಧರ್ಮಸೇನೆಯ ಸಂಸ್ಥಾಪಕ ಸಂತೋಷ್ ದುಬೆ ಅವರು, 1989ರಲ್ಲಿ ದೇಶ-ವಿದೇಶಗಳಿಂದ ಪೂಜಿಸಲ್ಪಟ್ಟು ಅಯೋಧ್ಯೆಗೆ ಬಂದಿದ್ದ ಚಿನ್ನ, ಬೆಳ್ಳಿ, ವಜ್ರ ಹಾಗೂ ಅಷ್ಟಧಾತುಗಳ ಒಟ್ಟು 1250 ರಾಮಶಿಲೆಗಳು ಈಗ ನಾಪತ್ತೆಯಾಗಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಅಮೂಲ್ಯ ಶಿಲೆಗಳು 2002ರವರೆಗೆ ಕಾರ್ಸೇವಕಪುರಂನಲ್ಲಿ ಸುರಕ್ಷಿತವಾಗಿದ್ದವು. ಸದ್ಯ ಅಲ್ಲಿ ಮಣ್ಣಿನಿಂದ ಮಾಡಿದ ಶಿಲೆಗಳು ಮಾತ್ರ ಕಾಣಿಸುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಧಾತುಗಳ ಶಿಲೆಗಳು ಮಾಯವಾಗಿವೆ. ಪ್ರಸ್ತುತ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಚಂಪತ್ ರಾಯ್ ಅವರ ಉಸ್ತುವಾರಿಯಲ್ಲೇ ಈ ಶಿಲೆಗಳನ್ನು ಇಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
1985ರಲ್ಲಿ ಪರಮಹಂಸ ರಾಮಚಂದ್ರ ದಾಸ್ ಅವರ ಅಧ್ಯಕ್ಷತೆಯಲ್ಲಿ ‘ಶ್ರೀರಾಮ ಜನ್ಮಭೂಮಿ ನ್ಯಾಸ್’ ರಚನೆಯಾಗಿತ್ತು. ಇದರಲ್ಲಿ ವಿಶ್ವಹಿಂದೂ ಪರಿಷತ್ (VHP) ನಾಯಕರಾದ ಅಶೋಕ್ ಸಿಂಘಲ್, ಗಿರಿರಾಜ್, ರಾಮವಿಲಾಸ್ ವೇದಾಂತಿ ಹಾಗೂ ಚಂಪತ್ ರಾಯ್ ಪ್ರಮುಖರಾಗಿದ್ದರು. 1989ರಲ್ಲಿ ಆಂದೋಲನವನ್ನು ತೀವ್ರಗೊಳಿಸಲು ವಿಹೆಚ್ಪಿ ದೇಶಾದ್ಯಂತ ಮನೆ ಮನೆಯಿಂದ ಒಂದು ಕಾಲು ರೂಪಾಯಿ ಚಂದಾ ಹಾಗೂ ಪೂಜಿಸಿದ ಶಿಲೆಗಳನ್ನು ಸಂಗ್ರಹಿಸುವ ಬೃಹತ್ ಅಭಿಯಾನ ಹಮ್ಮಿಕೊಂಡಿತ್ತು.

“ಆಗ ನನಗೆ 22-23 ವರ್ಷ ವಯಸ್ಸು. ಅಯೋಧ್ಯೆಯ ಕಾರ್ಸೇವಕಪುರಂನಲ್ಲಿ ಸಂಗ್ರಹವಾಗುತ್ತಿದ್ದ ಚಿನ್ನ, ಬೆಳ್ಳಿ, ವಜ್ರ ಹಾಗೂ ಅಷ್ಟಧಾತುಗಳ ಶಿಲೆಗಳ ಲೆಕ್ಕಾಚಾರ ಇಡುವ ಜವಾಬ್ದಾರಿ ನನ್ನದಾಗಿತ್ತು. ನನ್ನೊಂದಿಗೆ ಈ ಕಾರ್ಯದಲ್ಲಿ ಸಂಘದ ಪ್ರಚಾರಕರಾಗಿದ್ದ ಡಾ. ರಾಮವಿಲಾಸ್ ವೇದಾಂತಿ ಮತ್ತು ಪರಮಹಂಸ ರಾಮಚಂದ್ರ ದಾಸ್ ಕೂಡ ಇದ್ದರು. ಈ ಪೈಕಿ ಅತ್ಯಂತ ದುಬಾರಿ ಮತ್ತು ಜಗತ್ತಿನ ಗಮನ ಸೆಳೆದ ಶಿಲೆಯೊಂದು ಮಾರಿಷಸ್ನಿಂದ ಬಂದಿತ್ತು. ಇನ್ನು ಮುಂಬೈನ ಉದ್ಯಮಿಯೊಬ್ಬರು ವಜ್ರಗಳನ್ನು ಕೆತ್ತಿದ ಅಮೂಲ್ಯ ಶಿಲೆಯನ್ನು ದಾನ ಮಾಡಿದ್ದರು” ಎಂದು ಸಂತೋಷ್ ದುಬೆ ನೆನಪಿಸಿಕೊಂಡಿದ್ದಾರೆ.
ಟ್ರಸ್ಟ್ ಅಧ್ಯಕ್ಷರಾಗಿದ್ದ ಪರಮಹಂಸ ರಾಮಚಂದ್ರ ದಾಸ್ ಅವರ ಸೂಚನೆಯ ಮೇರೆಗೆ ಈ 1250 ಶಿಲೆಗಳನ್ನು ವಿಹೆಚ್ಪಿಯ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಚಂಪತ್ ರಾಯ್ ಅವರ ಉಸ್ತುವಾರಿಯಲ್ಲಿ ಇಡಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ಶಿಲೆಗಳನ್ನು ಇಟ್ಟಿದ್ದ ಕೋಣೆಗೆ 3 ಬೀಗಗಳನ್ನು ಹಾಕಲಾಗಿತ್ತು. 2002ರವರೆಗೆ ಅಲ್ಲಿಯೇ ಇದ್ದ ಈ ಶಿಲೆಗಳು ಆ ಬಳಿಕ ರಹಸ್ಯವಾಗಿ ನಾಪತ್ತೆಯಾಗಿವೆ. ಈ ಆಘಾತ ತಡೆಯಲಾರದೆ ಅನಾರೋಗ್ಯಕ್ಕೀಡಾದ ಪರಮಹಂಸ ರಾಮಚಂದ್ರ ದಾಸ್ ಅವರು ಎರಡು ವರ್ಷಗಳ ನಂತರ ಪ್ರಾಣ ತ್ಯಾಗ ಮಾಡಿದರು ಮತ್ತು ಇನ್ನೊಬ್ಬ ನಾಯಕ ವೇದಾಂತಿಯವರು ಭಯದಿಂದಾಗಿ ಈ ಬಗ್ಗೆ ಎಂದಿಗೂ ಬಾಯಿ ಬಿಡಲಿಲ್ಲ ಎಂದು ದುಬೆ ಆರೋಪಿಸಿದ್ದಾರೆ. ರಾಮಮಂದಿರದ ಹೆಸರಲ್ಲಿ ಚಿನ್ನ-ಬೆಳ್ಳಿಯ ಕಳ್ಳತನ 1989ರಿಂದಲೇ ಶುರುವಾಗಿದೆ ಎಂಬುದು ಅವರ ವಾದ.
ಕಾರ್ಸೇವಕಪುರಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ರಾಮಮಂದಿರದ ಮಾದರಿ (Model) ಮುಂದೆ ಇಡಲಾಗಿದ್ದ ದಾನಪೆಟ್ಟಿಗೆಯ ಲೆಕ್ಕಾಚಾರದಲ್ಲೂ ಭಾರಿ ಅಪಾರದರ್ಶಕತೆ ಇತ್ತು ಎನ್ನಲಾಗಿದೆ. ಅಲ್ಲಿ ಕೇವಲ 50 ರೂಪಾಯಿಗಿಂತ ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ರಸೀದಿ ನೀಡಲಾಗುತ್ತಿತ್ತು. ತಿಂಗಳಿಗೆ ಕನಿಷ್ಠ 5 ರಿಂದ 7 ಲಕ್ಷ ರೂಪಾಯಿ ನಗದು ಈ ಪೆಟ್ಟಿಗೆಯಲ್ಲಿ ಜಮೆಯಾಗುತ್ತಿದ್ದರೂ, ವಿಹೆಚ್ಪಿ ಈ ಚಂದಾದ ಮೊತ್ತವನ್ನು ಎಂದಿಗೂ ಸಾರ್ವಜನಿಕಗೊಳಿಸಲಿಲ್ಲ ಎನ್ನಲಾಗಿದೆ.
2020ರ ಫೆಬ್ರವರಿ 5 ರಂದು ಸುಪ್ರೀಂಕೋರ್ಟ್ ಆದೇಶದಂತೆ ಅಧಿಕೃತವಾಗಿ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ರಚನೆಯಾದಾಗ, ಹಳೆಯ ನ್ಯಾಸ್ನಲ್ಲಿದ್ದ ಹಣವನ್ನು ಇದಕ್ಕೆ ವರ್ಗಾಯಿಸಲಾಯಿತು. ಆದರೆ ಆ ಸಮಯದಲ್ಲಿ ಖಾತೆಯಲ್ಲಿದ್ದದ್ದು ಕೇವಲ 8.50 ಕೋಟಿ ರೂಪಾಯಿ ಮಾತ್ರ ಎಂದು ತೋರಿಸಲಾಗಿತ್ತು. ಆ ದಾಖಲೆಯಲ್ಲೂ ಹಳೆಯ ಚಿನ್ನ-ಬೆಳ್ಳಿಯ ಶಿಲೆಗಳ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆರಂಭದಿಂದಲೂ ಚಂಪತ್ ರಾಯ್ ಅವರೇ ಇಲ್ಲಿ ಸರ್ವೇಶ್ವರನಾಗಿದ್ದು, ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಕಳೆದ ನಾಲ್ಕೂವರೆ ವರ್ಷಗಳಲ್ಲಿ (2022 ರಿಂದೀಚೆಗೆ) ಸುಮಾರು 61.53 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪ್ರತಿಯೊಬ್ಬ ಭಕ್ತ ಸರಾಸರಿ 10 ರೂಪಾಯಿ ದಾನ ಮಾಡಿದ್ದರೂ ಕೇವಲ ದಾನಪೆಟ್ಟಿಗೆಯಲ್ಲೇ 600 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಬೇಕಿತ್ತು.
ಇದನ್ನೂ ಓದಿ: ರಾಮಮಂದಿರ ಚಂದಾ ವಿವಾದ: ಉನ್ನತ ಮಟ್ಟದ ತನಿಖೆಗೆ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ ಒತ್ತಾಯ
2024ರಲ್ಲಿ ಚಂಪತ್ ರಾಯ್ ಅವರು ವಿವರ ನೀಡುವಾಗ ಕೇವಲ 13 ಕ್ವಿಂಟಾಲ್ ಬೆಳ್ಳಿ ಮತ್ತು 20 ಕೆಜಿ ಚಿನ್ನದ ಕಾಣಿಕೆ ಬಂದಿದೆ ಎಂದು ತಿಳಿಸಿದ್ದರು. 2025ರ ಸಾಲಿನಲ್ಲಿ ಕೇವಲ 11 ತಿಂಗಳ (1 ಏಪ್ರಿಲ್ 2025 ರಿಂದ 28 ಫೆಬ್ರವರಿ 2026) ಆದಾಯದ ವರದಿಯನ್ನು ಮಾರ್ಚ್ನಲ್ಲಿ ಮಂಡಿಸಿದಾಗ ಟ್ರಸ್ಟ್ ತೋರಿಸಿದ್ದು ಕೇವಲ 54 ಕೋಟಿ ರೂಪಾಯಿ ಮಾತ್ರ! ಭಕ್ತರ ಸಂಖ್ಯೆಗೂ ಮತ್ತು ಟ್ರಸ್ಟ್ ತೋರಿಸುತ್ತಿರುವ ಆದಾಯದ ಮೊತ್ತಕ್ಕೂ ಭಾರಿ ವ್ಯತ್ಯಾಸವಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಚಂಪತ್ ರಾಯ್ ಅವರ ಅಧಿಕೃತ ಪ್ರತಿಕ್ರಿಯೆ ಪಡೆಯಲು ʼದೈನಿಕ್ ಭಾಸ್ಕರ್ʼ ಮಾಧ್ಯಮ ತಂಡವು ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಕಚೇರಿಗೆ ಭೇಟಿ ನೀಡಿತ್ತು. ಅಲ್ಲಿನ ಕೋಣೆಯೊಂದರಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ಚಂಪತ್ ರಾಯ್ ಕುಳಿತಿದ್ದರು. ಆದರೆ ಪತ್ರಕರ್ತರು ತಮ್ಮ ಗುರುತಿನ ಚೀಟಿ ತೋರಿಸಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದಂತೆಯೇ, ಅಲ್ಲಿದ್ದ ಟ್ರಸ್ಟ್ ಸಿಬ್ಬಂದಿ ಮಾಧ್ಯಮದವರನ್ನು ತಕ್ಷಣವೇ ಕಚೇರಿಯಿಂದ ಹೊರಗೆ ಕಳುಹಿಸಿ, ಅಲ್ಲಿ ಹೆಚ್ಚು ಹೊತ್ತು ನಿಲ್ಲದಂತೆ ತಡೆದಿದ್ದಾರೆ. ಈ ನಡೆ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ʼದೈನಿಕ್ ಭಾಸ್ಕರ್ʼ ವರದಿ ಮಾಡಿದೆ.




