ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಗಂಭೀರ ಎಡವಟ್ಟಿನಿಂದಾಗಿ ಪಾಸ್ಪೋರ್ಟ್ ಕೂಡ ಹೊಂದಿಲ್ಲದ ನಾಗ್ಪುರದ ನೀಟ್ (NEET) ಆಕಾಂಕ್ಷಿಯೊಬ್ಬನಿಗೆ ಬರೋಬ್ಬರಿ 2,500 ಕಿ.ಮೀ. ದೂರದ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿದೆ.
ನಾಗ್ಪುರದ 18 ವರ್ಷದ ನೀಟ್ (NEET) ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ತನ್ನ ಪ್ರವೇಶ ಪತ್ರವನ್ನು ನೋಡಿದಾಗ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಆತನ ಪರೀಕ್ಷಾ ಕೇಂದ್ರವು 2,500 ಕಿ.ಮೀ ದೂರದಲ್ಲಿರುವ ಅಬುಧಾಬಿಯಲ್ಲಿತ್ತು ಮತ್ತು ಆತನ ಬಳಿ ಪಾಸ್ಪೋರ್ಟ್ ಕೂಡ ಇರಲಿಲ್ಲ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಒದಗಿಸುತ್ತದೆಯಾದರೂ, ಅವು ಸಾಮಾನ್ಯವಾಗಿ ಎನ್ಆರ್ಐ (NRI) ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತವೆ.
ಜೂನ್ 14 ರಂದು ಬಿಡುಗಡೆಯಾದ ಪ್ರವೇಶ ಪತ್ರದಲ್ಲಿ ‘ಅಬುಧಾಬಿ ಇಂಡಿಯನ್ ಸ್ಕೂಲ್’ ಅನ್ನು ಆತನ ಪರೀಕ್ಷಾ ಕೇಂದ್ರವಾಗಿ ನಮೂದಿಸಲಾಗಿತ್ತು. ಈ ಪ್ರಮಾದದ ಬಗ್ಗೆ ಕುಟುಂಬವು ತಕ್ಷಣ ಎನ್ಟಿಎ ಸಹಾಯವಾಣಿಯನ್ನು ಸಂಪರ್ಕಿಸಿದಾಗ, ದೋಷವನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಭರವಸೆ ನೀಡಿದ್ದರು. ಆದರೆ, ಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿದ್ದರೂ, ಎನ್ಟಿಎ ಇನ್ನೂ ಆ ತಪ್ಪನ್ನು ತಿದ್ದಿಲ್ಲ. ಇದರಿಂದ ಆತಂಕಗೊಂಡ ಕುಟುಂಬವು ಅನಿವಾರ್ಯವಾಗಿ ಪ್ರಯಾಣದ ದಾಖಲೆಗಳು ಮತ್ತು ವಿಮಾನದ ಟಿಕೆಟ್ಗಳನ್ನು ಹೊಂದಿಸಲು ಪ್ರಾರಂಭಿಸಿತ್ತು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ತಾಲಿಬ್ ಈಗಾಗಲೇ ತೀವ್ರ ಒತ್ತಡದಲ್ಲಿದ್ದನು ಮತ್ತು ಆ ಆಘಾತದಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿರಲಿಲ್ಲ. ಈ ಪ್ರವೇಶ ಪತ್ರ ದೋಷವು ಆತನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ನಡುವೆ, ತಾವು ಯಾವುದೇ ಹೊಸ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೂ, ತಮ್ಮ ಮಕ್ಕಳ ಪರೀಕ್ಷಾ ಕೇಂದ್ರಗಳನ್ನು ಬೇರೆ ದೂರದ ಸ್ಥಳಗಳಿಗೆ ಬದಲಾಯಿಸಲಾಗಿದೆ ಎಂದು ಹಲವು ಪೋಷಕರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ-ಇರಾನ್ ಒಪ್ಪಂದ: ಆರ್ಥಿಕ ಲಾಭದ ಮುಂದೆ ಸೋತ ಮಾನವೀಯತೆ?
ಈ ಘಟನೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಕ್ಕಳ ಭವಿಷ್ಯದೊಂದಿಗೆ “ಜೂಜಾಡುವುದನ್ನು ನಿಲ್ಲಿಸಿ” ಎಂದು ಆಗ್ರಹಿಸಿದ್ದಾರೆ. “ಒಂದು ತಿಂಗಳಿನಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗೆ ಪರೀಕ್ಷೆಯ ಹಿಂದಿನ ದಿನ ತನ್ನ ಕೇಂದ್ರ ಅಬುಧಾಬಿಯಲ್ಲಿದೆ ಎಂದು ತಿಳಿದಿದೆ. ಆತನ ಬಳಿ ಪಾಸ್ಪೋರ್ಟ್ ಇಲ್ಲ, ವಿದೇಶಕ್ಕೆ ಕಳುಹಿಸುವಷ್ಟು ಹಣ ಕುಟುಂಬದ ಬಳಿ ಇಲ್ಲ. ಇದರಿಂದ ಆತ ರಾತ್ರಿಯಿಡೀ ಅಳುತ್ತಿದ್ದಾನೆ” ಎಂದು ಅವರು ಎಕ್ಸ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇದು ಹೇಗೆ ಸಂಭವಿಸಿತು? ಯಾವ ವಿದ್ಯಾರ್ಥಿಯೂ ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗದಂತಹ ಸಮಸ್ಯೆಯನ್ನು ಎದುರಿಸಬಾರದು. ವಾಸ್ತವದಲ್ಲಿ, ಎನ್ಟಿಎ ಕೇವಲ ದೇಶದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ. ವಿದ್ಯಾರ್ಥಿಗೆ ತನ್ನದೇ ನಗರದಲ್ಲಿ ಕೇಂದ್ರವನ್ನು ನೀಡಲಾಗದ ಮತ್ತು ಬದಲಿಗೆ ವಿದೇಶದಲ್ಲಿ ಕೇಂದ್ರವನ್ನು ನೀಡುವ ವ್ಯವಸ್ಥೆಗೆ ಪರೀಕ್ಷೆಗಳನ್ನು ನಡೆಸುವ ಯಾವುದೇ ಹಕ್ಕಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
“ನಾನು ಕೋಟಾದಲ್ಲಿ ಹೇಳಿದ್ದು ಇದನ್ನೇ
ಇದು ಇನ್ನು ಮುಂದೆ ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ. ಇದು ಇಡೀ ಪೀಳಿಗೆಯ ಹಣ, ಸಮಯ ಮತ್ತು ಮಾನಸಿಕ ನೆಮ್ಮದಿಯ ಶೋಷಣೆಯಾಗಿದೆ” ಎಂದು ಅವರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಸೂಕ್ಷ್ಮ, ಜವಾಬ್ದಾರಿಯುತ ಮತ್ತು ಉತ್ತರದಾಯಿತ್ವವುಳ್ಳ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಗೆ ಅರ್ಹರಾಗಿದ್ದಾರೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನು ಎತ್ತಿಹಿಡಿಯಲು ಮತ್ತು ಸರ್ಕಾರಕ್ಕೆ ನೇರವಾಗಿ ಬೇಡಿಕೆಗಳನ್ನು ಸಲ್ಲಿಸಲು ಸಹಿ ಸಂಗ್ರಹ ಅಭಿಯಾನವನ್ನು ಸಹ ಪ್ರಾರಂಭಿಸಿದ್ದಾರೆ.




