ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಬಳಿ ಬಂಧಿಸಲಾಗಿದ್ದ ಪಾಕಿಸ್ತಾನದ ಪ್ರಜೆಯನ್ನು ಭಾರತೀಯ ಸೇನೆಯು ಶುಕ್ರವಾರ ಸ್ವದೇಶಕ್ಕೆ (ಪಾಕ್) ವಾಪಸ್ ಕಳುಹಿಸಿದೆ. ಈ ವೇಳೆ, ಭಾರತೀಯ ಸೇನೆಯ ಮೇಜರ್ ಶ್ರೇಣಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ಸೇನಾ ಅಧಿಕಾರಿಯೊಂದಿಗೆ ಹಸ್ತಲಾಘವ ಮಾಡಿದ್ದಾರೆ. ಈ ಅಪರೂಪದ ಕ್ಷಣದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದೇ ಸಮಯದಲ್ಲಿ, ಎರಡೂ ರಾಷ್ಟ್ರಗಳ ಕ್ರಿಕೆಟ್ ಆಟಗಾರರು ಕ್ರೀಡಾಂಗಣದಲ್ಲಿ ಹಸ್ತಲಾಘವ ಮಾಡದೆ, ರಾಜಕೀಯ ಭಟ್ಟಂಗಿತನ ತೋರುವುದರ ವಿರುದ್ಧವೂ ಟೀಕೆಗಳು ಕೇಳಿಬಂದಿವೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಸಾದ್ ಖಾನ್ ಎಂಬಾತ ಕಳೆದ ವಾರ, ಕಾಶ್ಮೀರದ ಕುಪ್ವಾರ ಜಿಲ್ಲೆಯ ಟೀತ್ವಾಲ್ ಸೆಕ್ಟರ್ನ ಸೀಮಾರಿ ಎಂಬಲ್ಲಿ ‘ಎಲ್ಒಸಿ’ ದಾಟಿದಾಗ ಬಂಧಿಸಲಾಗಿತ್ತು. ಆತನನ್ನು ಬಂಧನದಲ್ಲಿ ಇರಿಸಲಾಗಿತ್ತು. ಆದಾಗ್ಯೂ, ಬಂಧನದ ಅವಧಿಯಲ್ಲಿ ಆತನನ್ನು ಗೌರವ ಮತ್ತು ಮಾನವೀಯತೆಯಿಂದ ನಡೆಸಿಕೊಳ್ಳಲಾಗಿತ್ತು. ಇದೀಗ, ಗಡಿ ದಾಟುವ ನಿಯೋಜಿತ ಸ್ಥಳದಲ್ಲಿ ಪಾಕಿಸ್ತಾನ ಸೇನೆಗೆ ಒಪ್ಪಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪಾಕಿಸ್ತಾನಿ ಪ್ರಜೆಯನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಿ, ಪಾಕಿಸ್ತಾನ ಸೇನೆಗೆ ಒಪ್ಪಿಸುತ್ತಿರುವ ಚಿತ್ರಗಳನ್ನು ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಆ ಚಿತ್ರದಲ್ಲಿ, ಭಾರತೀಯ ಸೇನೆಯ ಮೇಜರ್ ಶ್ರೇಣಿಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಸೇನಾ ಅಧಿಕಾರಿಯೊಂದಿಗೆ ಹಸ್ತಲಾಘವ ಮಾಡುತ್ತಿರುವುದು ಕಂಡುಬಂದಿದೆ. ಉಭಯ ದೇಶಗಳ ನಡುವೆ ಹಗೆತನ ಮುಂದುವರಿದಿರುವ ನಡುವೆಯೂ ಈ ಹಸ್ತಲಾಘವ ನಡೆದಿರುವುದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
“2026ರ ಜೂನ್ 12ರಂದು ಕುಪ್ವಾರದ ಸೀಮಾರಿ ಗ್ರಾಮದಲ್ಲಿ ಬಂಧಿಸಲ್ಪಟ್ಟಿದ್ದ ಅಸಾದ್ ಖಾನ್ನನ್ನು ಜೂನ್ 18ರಂದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ. ಅವರು ಬಂಧನದಲ್ಲಿದ್ದ ಅವಧಿಯಲ್ಲಿ ಗೌರವ ಮತ್ತು ಕರುಣೆಯಿಂದ ನಡೆಸಿಕೊಂಡಿರುವುದು ಮಾನವೀಯ ಮೌಲ್ಯಗಳು ಮತ್ತು ವೃತ್ತಿಪರ ನಡವಳಿಕೆಗೆ ಭಾರತೀಯ ಸೇನೆ ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆತನ ಸುರಕ್ಷಿತ ಹಸ್ತಾಂತರವು ಭಾರತೀಯ ಸೇನೆಯ ನೀತಿ, ಜವಾಬ್ದಾರಿ ಹಾಗೂ ಅತ್ಯುನ್ನತ ಮಿಲಿಟರಿ ವೃತ್ತಿಪರತೆಯನ್ನು ಎತ್ತಿ ತೋರಿಸುತ್ತದೆ” ಎಂದು ಸೇನೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
Repatriation of Pak National
— Chinar Corps🍁 – Indian Army (@ChinarcorpsIA) June 19, 2026
A Pakistani national, Asad Khan, a resident of Khyber Pakhtunkhwa (KPK), who was apprehended in Simari village, Kupwara, on 12 June 2026 after crossing the Line of Control, was repatriated to Pakistan on 18 June 2026.
During his stay in India, Asad… pic.twitter.com/4MUKLUylZh
ಭಾರತೀಯ ಸೇನೆಯ ಬದ್ಧತೆ ಮತ್ತು ಕ್ರಿಕೆಟಿಗರ ಭಟ್ಟಂಗಿತನ
ಗಡಿಯಲ್ಲಿ ನಿಂತಿರುವ ಸೈನಿಕನಿಗೆ ಯುದ್ಧದ ಭೀಕರತೆ ಮತ್ತು ಶಾಂತಿಯ ಮಹತ್ವ ಎರಡೂ ಚೆನ್ನಾಗಿ ಗೊತ್ತಿರುತ್ತದೆ. ಅಂತರರಾಷ್ಟ್ರೀಯ ನಿಯಮಗಳು ಮತ್ತು ಮಿಲಿಟರಿ ಶಿಷ್ಟಾಚಾರಗಳ ಪ್ರಕಾರ, ಕಡು ವೈರಿ ದೇಶದ ಸೈನಿಕರಾಗಿದ್ದರೂ ಪರಸ್ಪರರ ಸಮವಸ್ತ್ರ ಮತ್ತು ಶ್ರೇಣಿಗೆ ಗೌರವ ಕೊಡುವುದು ಒಂದು ವೃತ್ತಿಪರ ನಡೆ. ಅದನ್ನು ಜೂನ್ 18ರಂದು ಭಾರತೀಯ ಮತ್ತು ಪಾಕ್ ಸೈನಿಕರು ಪ್ರದರ್ಶಿಸಿದ್ದಾರೆ.
ಆದರೆ, ಮತ್ತೊಂದೆಡೆ, ಕ್ರೀಡಾಂಗಣದಲ್ಲಿ ಬ್ಯಾಟು-ಬಾಲು ಹಿಡಿದು ಆಡುವ ಕ್ರಿಕೆಟಿಗರು ರಾಜಕೀಯ ಅಜೆಂಡಾಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದಾರೆ. ಉಭಯ ದೇಶಗಳ ಕ್ರಿಕೆಟಿಗರು ಮೈದಾನದಲ್ಲಿ ಸೌಹಾರ್ದತೆ ತೋರಲು ಹಿಂಜರಿಯುತ್ತಿದ್ದಾರೆ. ರಾಜಕೀಯ ಹಿಪಾಕ್ರಸಿಯಿಂದ ವರ್ತಿಸುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಕೇವಲ ಕ್ರೀಡೆಯಾಗಿರದೆ, ಎರಡೂ ರಾಷ್ಟ್ರಗಳ ತಂಡಗಳಿಗೆ ತಮ್ಮ ರಾಷ್ಟ್ರಪ್ರೇಮವನ್ನು ಸಾಬೀತುಪಡಿಸುವ ವೇದಿಕೆಗಳಾಗಿವೆ. ರಾಜಕೀಯ ನಾಯಕರ ಒಪ್ಪಿಗೆಯಿಲ್ಲದೆ ಕ್ರಿಕೆಟ್ ಮಂಡಳಿಗಳು (BCCI ಮತ್ತು PCB) ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಟಗಾರರು ಮೈದಾನದಲ್ಲಿ ಎದುರಾಳಿ ಆಟಗಾರನಿಗೆ ಹಸ್ತಲಾಘವ ಮಾಡಿದರೆ ತಮ್ಮನ್ನು ‘ದೇಶದ್ರೋಹಿ’ ಎಂದು ಬಿಂಬಿಸಬಹುದು ಎಂಬ ಭೀತಿ ಆಟಗಾರರಲ್ಲಿದೆ. ಮಾತ್ರವಲ್ಲ, ಆಟಗಾರರು ಪರಸ್ಪರ ವಿರುದ್ಧ ರಾಜಕೀಯ ದ್ವೇಷವನ್ನು ತುಂಬಿಕೊಂಡಿದ್ದಾರೆ. ಹಸ್ತಲಾಘವ ಮಾಡುವುದು ಅಪಚಾರವೆಂಬ ಭ್ರಾಂತಿ ಕ್ರಿಕೆಟಿಗರನ್ನು ಆವರಿಸಿಕೊಂಡಿದೆ.



