ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಚುನಾವಣಾ ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವ ಗುರಿ ಹೊಂದಿದೆ ಎಂದು ಆಂದೋಲನದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಬಳಸಿ ರಾಜಕೀಯ ಪಕ್ಷಗಳನ್ನು ಹೇಗೆ ಒಡೆಯಲಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಚುನಾವಣೆಗಳಲ್ಲಿ ಮತಗಳನ್ನು ಅಳಿಸಿಹಾಕಲಾಗುತ್ತಿದೆ. ಜನರು ರಾಜಕಾರಣದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಈ ಹಂತದಲ್ಲಿ, ರಾಜಕೀಯ ಪಕ್ಷವೊಂದನ್ನು ಕಟ್ಟಿ ನಾವೇನು ಮಾಡಲು ಸಾಧ್ಯ ಎಂದು ದೀಪ್ಕೆ ಪ್ರಶ್ನಿಸಿದ್ದಾರೆ. ಅವರು ತಮ್ಮ ತವರೂರಾದ ಛತ್ರಪತಿ ಸಂಭಾಜಿನಗರದಲ್ಲಿ ಈ ವಿಷಯ ತಿಳಿಸಿದರು. ಇದೇ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಸಿಜೆಪಿಯ ಕಾರ್ಯತಂತ್ರ ರೂಪಿಸುವ ಸಭೆ ಇಲ್ಲಿ ನಡೆಯಲಿದೆ.
ದೇಶದ ನ್ಯಾಯಾಂಗ, ಚುನಾವಣಾ ವ್ಯವಸ್ಥೆ ಹಾಗೂ ಮಾಧ್ಯಮಗಳ ಮೇಲೂ ಜನರು ವಿಶ್ವಾಸ ಕಳೆದುಕೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ದೇಶಕ್ಕೆ ಒಂದು ಬಲವಾದ ಜನಾಂದೋಲನದ ಅಗತ್ಯವಿದೆ ಎಂದು ದೀಪ್ಕೆ ಪ್ರತಿಪಾದಿಸಿದ್ದಾರೆ.
ಅಮೆರಿಕದಲ್ಲಿ ವ್ಯಾಸಂಗ ಮಾಡಲು ತಮಗೆ ಹಣ ಎಲ್ಲಿಂದ ಬಂತು ಎಂಬ ದೂರಿನ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ನನ್ನ ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಮತ್ತು ಶೈಕ್ಷಣಿಕ ಸಾಲದ ಪತ್ರಗಳನ್ನು ಬಹಿರಂಗಪಡಿಸಲು ನಾನು ಸಿದ್ಧನಿದ್ದೇನೆ. ಆದರೆ ‘ಚಕ್ರವರ್ತಿ’ ತಮ್ಮ ಪದವಿ ಪ್ರಮಾಣಪತ್ರವನ್ನು ತೋರಿಸುತ್ತಾರೆಯೇ?” ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇದೇ ವೇಳೆ, ಯುವ ಆಂದೋಲನದ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಲು ಸಿಜೆಪಿ ಸಂಸ್ಥಾಪಕರು, ವಕ್ತಾರರು ಮತ್ತು ಸಾಂಸ್ಥಿಕ ನಾಯಕರು ಪಾಲ್ಗೊಳ್ಳುವ ಎರಡು ದಿನಗಳ ಸಭೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜಂತರ್ ಮಂತರ್ ಪ್ರತಿಭಟನೆಯುದ್ದಕ್ಕೂ ಶ್ರಮಿಸಿದ ಐವತ್ತು ಪ್ರಮುಖ ಸ್ವಯಂಸೇವಕರು ಸೇರಿದಂತೆ ಹಲವು ಪಾಲುದಾರರೊಂದಿಗೆ ಸಿಜೆಪಿ ತಂಡದ ಸದಸ್ಯರು ಮುಂದಿನ ಕಾರ್ಯತಂತ್ರಗಳ ಕುರಿತು ಕಳೆದ ಕೆಲವು ದಿನಗಳಿಂದ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಪಕ್ಷ ತಿಳಿಸಿದೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಯಶಸ್ವಿ ಪ್ರತಿಭಟನೆಯ ನಂತರ, ಯುವಜನರಲ್ಲಿ ದೇಶದ ಭವಿಷ್ಯದ ಬಗ್ಗೆ ಭರವಸೆ ಮತ್ತು ಆಶಾವಾದ ಮೂಡಿದೆ. ಈ ಹಿನ್ನೆಲೆಯಲ್ಲಿ, ಕಾರ್ಯತಂತ್ರ ಸಭೆಯ ಬಳಿಕ ದೇಶಾದ್ಯಂತ ಇರುವ ತನ್ನ ಸ್ವಯಂಸೇವಕರನ್ನು ತಲುಪಲು ಸಿಜೆಪಿ ಯೋಜಿಸಿದ್ದು, ಯುವಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಅರಿಯಲು ‘ಅಖಿಲ ಭಾರತ ಆಲಿಸುವಿಕೆ ಪ್ರವಾಸ’ (ನ್ಯಾಷನ್ವೈಡ್ ಲಿಸನಿಂಗ್ ಟೂರ್) ಆಯೋಜಿಸಲು ನಿರ್ಧರಿಸಿದೆ.
ಯುವಕರು ಒಗ್ಗೂಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈ ಅಹಂಕಾರಿ ಸರ್ಕಾರದ ಸೋಲು ತೋರಿಸಿದೆ. ಯುವಜನರ ನಿರೀಕ್ಷೆಗಳನ್ನು ಅರ್ಥಪೂರ್ಣ ಕಾರ್ಯಗಳಾಗಿ ಪರಿವರ್ತಿಸಲು ನಮ್ಮ ತಂಡವು ಅತ್ಯುತ್ತಮ ಮಾರ್ಗವನ್ನು ರೂಪಿಸುತ್ತಿದೆ ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ.




