ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆ ವೇಳೆ ಬಿಜೆಪಿಯ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಮಾಡಿದ್ದ ದ್ವೇಷ ಭಾಷಣ ಪ್ರಕರಣದಲ್ಲಿ ಅವರಿಗೆ ನೀಡಿದ್ದ ಕ್ಲೀನ್ಚಿಟ್ ಅನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಜುಲೈ 29ರಂದು ವಜಾಗೊಳಿಸಿದೆ.
“ಮರುಪರಿಶೀಲನೆಗೆ ಅವಕಾಶ ಕಲ್ಪಿಸುವಂತಹ ಯಾವುದೇ ಸ್ಪಷ್ಟ ದೋಷ ಅಥವಾ ತಪ್ಪು ಹಿಂದಿನ ಆದೇಶದಲ್ಲಿ ಕಂಡುಬಂದಿಲ್ಲ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣವನ್ನು ತೆರೆದ ನ್ಯಾಯಾಲಯದಲ್ಲಿ ಮರು ವಿಚಾರಣೆ ನಡೆಸುವ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಮರುಪರಿಶೀಲನಾ ಅರ್ಜಿಗಳನ್ನು ಸಾಮಾನ್ಯವಾಗಿ ನ್ಯಾಯಮೂರ್ತಿಗಳು ತಮ್ಮ ಕೊಠಡಿಗಳಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿ, ವಕೀಲರ ವಾದ ಅಥವಾ ಮೌಖಿಕ ವಿಚಾರಣೆ ನಡೆಸದೆ ತೀರ್ಮಾನಿಸುತ್ತಾರೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕೇಂದ್ರದ ಮಾಜಿ ಸಚಿವರಾಗಿದ್ದು, ಪರ್ವೇಶ್ ವರ್ಮಾ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಏನಿದು ಪ್ರಕರಣ?
2020ರ ಜನವರಿ 27ರಂದು ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಅನುರಾಗ್ ಠಾಕೂರ್ “ದೇಶ್ ಕೆ ಗದ್ದಾರೋನ್ ಕೋ, ಗೋಲಿ ಮಾರೋ…” ಎಂಬ ಘೋಷಣೆ ಕೂಗಿದ್ದರು. ಅದೇ ವೇಳೆ ಶಾಹೀನ್ಬಾಗ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪರ್ವೇಶ್ ವರ್ಮಾ ಕೂಡ “ಇಂದು ಶಾಹೀನ್ಬಾಗ್ನಲ್ಲಿ ಸಾವಿರಾರು ಜನ ಸೇರಿದ್ದಾರೆ. ನಾಳೆ ಅವರು ನಿಮ್ಮ ಮನೆಗಳಿಗೆ ನುಗ್ಗುತ್ತಾರೆ, ನಿಮ್ಮ ಸಹೋದರಿಯರು ಮತ್ತು ಪುತ್ರಿಯರ ಮೇಲೆ ಅತ್ಯಾಚಾರ ಮಾಡುತ್ತಾರೆ ಹಾಗೂ ಅವರನ್ನು ಕೊಲ್ಲುತ್ತಾರೆ. ಇಂದೇ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ” ಎಂದು ದ್ವೇಷದ, ಪ್ರಚೋದನಾಕಾರಿ ಹೇಳಿಕೆ ಹೇಳಿದ್ದರು. ಇದನ್ನೇ ದ್ವೇಷ ಭಾಷಣಕ್ಕೆ ಸಮನಾಗಿವೆ ಎಂದು ಬೃಂದಾ ಕಾರಟ್ ಆರೋಪಿಸಿದ್ದರು.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ಗಳು 153ಎ, 153ಬಿ, 295ಎ ಮತ್ತು 505ರಡಿ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಬೇಕೆಂಬ ಮನವಿಯನ್ನು ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ್ದರು. ಆ ಆದೇಶವನ್ನು 2022ರಲ್ಲಿ ದೆಹಲಿ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಾರಟ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಏಪ್ರಿಲ್ 29ರಂದು ನೀಡಿದ್ದ ತೀರ್ಪಿನಲ್ಲಿ, ಸೆಕ್ಷನ್ 156(3)ರಡಿ ತನಿಖೆಗೆ ಆದೇಶಿಸಲು ಸೆಕ್ಷನ್ 196ರಡಿ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರ ಭಾಷಣಗಳು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿರಲಿಲ್ಲ. ಹೀಗಾಗಿ ಅವುಗಳಿಂದ ಸಂಜ್ಞೇಯ (Cognizable) ಅಪರಾಧದ ಅಂಶಗಳು ಕಂಡುಬರುವುದಿಲ್ಲ ಎಂದು ಹೇಳಿ ಹೈಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ಅವರ ತೀರ್ಪನ್ನು ಎತ್ತಿಹಿಡಿದಿತ್ತು.
ಇದನ್ನೂ ಓದಿ: ಪ್ರತಿವರ್ಷ ದೇಣಿಗೆ ದುರ್ಬಳಕೆ ಆರೋಪ: ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ನಿಂದ ವರದಿ ಕೇಳಿದ ಮಹಾರಾಷ್ಟ್ರ ಸರ್ಕಾರ
ತಮ್ಮ ಅರ್ಜಿಯಲ್ಲಿ ಬೃಂದಾ ಕಾರಟ್, ಸುಪ್ರೀಂ ಕೋರ್ಟ್ ಪ್ರಕರಣದ ಮೂಲ ವಿಚಾರಗಳನ್ನು ಪರಿಶೀಲಿಸದೆ ಸಂಜ್ಞೇಯ ಅಪರಾಧವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ವಾದಿಸಿದ್ದರು. ದೆಹಲಿ ಹೈಕೋರ್ಟ್ ಕೂಡ ಪೂರ್ವಾನುಮತಿ ವಿಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಸುಪ್ರೀಂ ಕೋರ್ಟ್ ವಿಚಾರಣೆಯ ವ್ಯಾಪ್ತಿಯನ್ನು ಮೀರಿ ಪ್ರಕರಣದ ಗುಣದೋಷಗಳ ಬಗ್ಗೆ ತೀರ್ಪು ನೀಡಿದೆ ಎಂದು ಅವರು ಆಕ್ಷೇಪಿಸಿದ್ದರು. ಅಲ್ಲದೆ, 2020ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಚುನಾವಣಾ ಆಯೋಗವು ಈ ಇಬ್ಬರು ನಾಯಕರ ಭಾಷಣಗಳು ಕೋಮು ವೈಷಮ್ಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿ, ಬಿಜೆಪಿ ‘ಸ್ಟಾರ್ ಪ್ರಚಾರಕರ’ ಪಟ್ಟಿಯಿಂದ ಅವರನ್ನು ಕೈಬಿಟ್ಟು, ಪ್ರಚಾರ ನಿರ್ಬಂಧ ಹೇರಿದ್ದನ್ನೂ ಕಾರಟ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ವೀಡಿಯೊ ಸಾಕ್ಷ್ಯಗಳು ಹಾಗೂ ಚುನಾವಣಾ ಆಯೋಗದ ವರದಿಯನ್ನು ಪರಿಗಣಿಸಿ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿದ್ದರೂ, ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ತನ್ನ ಹಿಂದಿನ ತೀರ್ಪನ್ನೇ ಮುಂದುವರಿಸಿದೆ.




