ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ದುರ್ಬಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಪೂರಕ

Date:

ಅಂದು ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹಲವಾರು ಅಡೆತಡೆಗಳನ್ನು ಸೃಷ್ಟಿ ಮಾಡಿದ್ದರು. ನಂತರ ಅಧಿಕಾರ ಹಿಡಿದ ಬಿಜೆಪಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವರದಿ ಬಿಡುಗಡೆ ಮಾಡಿದರೆ ನಾಡಿನಲ್ಲಿ ಹೊಸ ರಾಜಕೀಯ-ಆರ್ಥಿಕ ಮನ್ವಂತರಕ್ಕೆ ನಾಂದಿಯಾಗಲಿದೆ.

ಭಾರತದಂತಹ ದೇಶದಲ್ಲಿ ಜಾತಿ ಮತ್ತು ಅಭಿವೃದ್ಧಿ ಪರಸ್ಪರ ಸಂಬಂಧವನ್ನು ಹೊಂದಿದೆ ಏಕೆಂದರೆ ಸಾಮಾಜಿಕ ವ್ಯವಸ್ಥೆಯು ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಭಾರತದ ಸಂವಿಧಾನವು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಮತ್ತು ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಹಲವಾರು ಸುರಕ್ಷತೆಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಉದ್ಧರಿಸುವುದು ಈ ರಕ್ಷಣೆಗಳ ಮುಖ್ಯ ಉದ್ದೇಶವಾಗಿತ್ತು. ಸಂವಿಧಾನದ 46ನೇ ವಿಧಿಯಲ್ಲಿ ನಮೂದಿಸಲಾಗಿರುವ ರಾಜ್ಯ ನಿರ್ದೇಶಕ ತತ್ವಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಈ ಎಲ್ಲ ಸುರಕ್ಷತೆಗಳನ್ನು ಸ್ಪಷ್ಟವಾಗಿ ಒದಗಿಸಲಾಗಿದೆ. ಸಾಮಾಜಿಕ ನ್ಯಾಯದ ರೂವಾರಿಗಳು ದಮನಿತ ಸಮುದಾಯಗಳಿಗೆ ರಕ್ಷಣಾತ್ಮಕ ತಾರತಮ್ಯ ಮತ್ತು ಸಬಲೀಕರಣದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಎಲ್ಲ ವಾರಸುದಾರರು ಸಾಂವಿಧಾನಿಕ ನಿಬಂಧನೆಗಳನ್ನು ಜಾರಿಗೊಳಿಸದಿದ್ದರೆ ಕಲ್ಯಾಣ ರಾಷ್ಟ್ರ ಸ್ಥಾಪನೆಯ ಕನಸು ನನಸಾಗುವುದಿಲ್ಲ.

ಭಾರತೀಯ ಸಾಮಾಜಿಕ ವ್ಯವಸ್ಥೆಯು ಶತಮಾನಗಳಿಂದಲೂ ಸಮಾನ ಹಕ್ಕುಗಳು, ಸಂಪನ್ಮೂಲಗಳು ಮತ್ತು ಅವಕಾಶಗಳು ವ್ಯವಸ್ಥಿತವಾಗಿ ನಿರಾಕರಿಸಲ್ಪಟ್ಟ ತಳಸಮುದಾಯಗಳ ಮೇಲೆ ಉನ್ನತ ಜಾತಿಗಳು ದಬ್ಬಾಳಿಕೆ ನಡೆಸಿವೆ. ದುರ್ಬಲ ವರ್ಗಗಳು ಯಾವಾಗಲೂ ರಾಷ್ಟ್ರೀಯ ಮುಖ್ಯವಾಹಿನಿಯಿಂದ ಪ್ರತ್ಯೇಕಿಸಲ್ಪಟ್ಟು ಸಾಮಾಜಿಕ ಹೊರಗುಳಿಯುವಿಕೆ, ಆರ್ಥಿಕ ಬಡತನ, ಶೈಕ್ಷಣಿಕ ಹಿಂದುಳಿದಿರುವಿಕೆ ಮೊದಲಾದ ಸಂಕೀರ್ಣತೆಗಳಿಗೆ ಗುರಿಯಾಗಿದ್ದಾರೆ. ಹಿಂದುಳಿದ ಸಮುದಾಯಗಳು ಔದ್ಯೋಗಿಕ ಚಲನಶೀಲತೆ, ಸಾಮಾಜಿಕ ಚಲನಶೀಲತೆ, ರಾಜಕೀಯ ಚಲನಶೀಲತೆ ಮತ್ತು ಅಭಿವೃದ್ಧಿಯ ಚಲನಶೀಲತೆಗೆ ಹಲವಾರು ನಿರ್ಬಂಧಗಳನ್ನು ಜಾತಿವ್ಯವಸ್ಥೆಯಿಂದಾಗಿ ಅನುಭವಿಸುತ್ತಾರೆ. ಭಾರತದಲ್ಲಿ ಮಾರುಕಟ್ಟೆ ಮತ್ತು ಮಾರುಕಟ್ಟೆಯೇತರ ತಾರತಮ್ಯವನ್ನು ಪರಿಹರಿಸಲು, ಅಡೆತಡೆಗಳನ್ನು ತೆಗೆದುಹಾಕಲು ಮತ್ತು ರಕ್ಷಣಾತ್ಮಕ ತಾರತಮ್ಯದ ಆಧಾರದ ಮೇಲೆ ಅನೌಪಚಾರಿಕ ಮತ್ತು ಖಾಸಗಿ ವಲಯದಲ್ಲಿ ಅಂಚಿನಲ್ಲಿರುವ ವರ್ಗಗಳಿಗೆ ಬೆಂಬಲವನ್ನು ನೀಡಲು ನೀತಿಯ ಆವಿಷ್ಕಾರಗಳನ್ನು ಅನ್ವೇಷಿಸಬೇಕು.

ಮೀಸಲಾತಿ ಎನ್ನುವುದು ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಶಾಸಕಾಂಗ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲವು ಶೇಕಡಾವಾರು ಸೀಟುಗಳನ್ನು ಆಧುನಿಕ ಕಾಲದಲ್ಲಿ ದುರ್ಬಲ ವರ್ಗಗಳ ಸದಸ್ಯರಿಗೆ ಮೀಸಲಿಡುವ ಪ್ರಕ್ರಿಯೆಯಾಗಿದೆ. ಸ್ವಾತಂತ್ರ್ಯೋತ್ತರ ಯುಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನುಅನುಷ್ಠಾನಗೊಳಿಸಲಾಗಿದೆ. ಮುಖ್ಯವಾಗಿ ದಮನಿತರ ಸಂಘಟಿತ ಹೋರಾಟದ ಕೊರತೆ ಮತ್ತು ದೇಶವನ್ನು ಆಳುವ ಪ್ರಬಲ ಶಕ್ತಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಾಂವಿಧಾನಿಕ ನಿಬಂಧನೆಗಳು ಸ್ವಾತಂತ್ರ್ಯದ ನಂತರದ ಯುಗದಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಳಿಸಲ್ಪಟ್ಟಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಕಾಂತರಾಜ್‌

ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ನ್ಯಾಯವಿತರಣೆಯ ಹೊಸ ಯುಗವನ್ನು ಆರಂಭಿಸಿದರು. ಅಂದು ದಿವಾನ್ ವಿಶ್ವೇಶ್ವರಯ್ಯ ಬ್ರಾಹ್ಮಣ್ಯದ ಪ್ರಭಾವದಿಂದಾಗಿ ದುರ್ಬಲರಿಗೆ ಮೀಸಲು ಸೌಲಭ್ಯ ನೀಡುವುದನ್ನು ಪ್ರಬಲವಾಗಿ ವಿರೋಧಿಸಿದರು. ಆದರೆ, ನಾಲ್ವಡಿಯವರು ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿಯದೇ ಮೈಸೂರು ಸಂಸ್ಥಾನ ದುರ್ಬಲ ವರ್ಗಗಳ ವಿಮೋಚನೆ ಮತ್ತು ಪ್ರಗತಿಗಳಿಗೆ ಬದ್ಧವಾಗಿದೆಯೆಂದು ಘೋಷಿಸಿ ಮಹಿಳೆಯರು ಮತ್ತು ದುರ್ಬಲ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣ ಕ್ಷೇತ್ರಗಳಲ್ಲಿ ನ್ಯಾಯೋಚಿತ ಅವಕಾಶಗಳನ್ನು ಕಲ್ಪಿಸಿಕೊಟ್ಟು ರಾಷ್ಟ್ರಪಿತ ಮಹಾತ್ಮಗಾಂಧಿಯವರಿಂದ ‘ರಾಜರ್ಷಿ’ ಎಂಬ ಗೌರವಕ್ಕೆ ಭಾಜನರಾದರು.

ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ರಾಜಕಾರಣ ಪ್ರಬಲ ಸಮುದಾಯಗಳ ಏಕಸ್ವಾಮ್ಯಕ್ಕೆ ಗುರಿಯಾಗಿದ್ದು ದುರ್ಬಲರು ಬಹುಜನರಾಗಿದ್ದರೂ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯೋಚಿತ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಲಿಲ್ಲ. ಇದುವರೆಗೂ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದವರು ಸಂಖ್ಯಾಬಲದಲ್ಲಿ ತಾವೇ ಹೆಚ್ಚಾಗಿರುವುದಾಗಿ ಪ್ರತಿಪಾದಿಸಿ ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣಗಳಲ್ಲಿ ಪ್ರಕೃತಿ ಧರ್ಮ ಮತ್ತು ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾಗಿ ಸಿಂಹಪಾಲು ಪಡೆದಿದ್ದಾರೆ. ಇವರು ನಿಜವಾದ ಅರ್ಥದಲ್ಲಿ ಬಹುಸಂಖ್ಯಾತರೂ ಅಲ್ಲ, ಪ್ರಬಲರೂ ಅಲ್ಲ. ಇಂತಹ ಸ್ವಯಂಘೋಷಿತ ಪ್ರಬಲರಿಂದ ನಿಜವಾಗಿಯೂ ಬಹುಸಂಖ್ಯಾತರಾದ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳು ಅಂಚಿಗೆ ನೂಕಲ್ಪಟ್ಟಿದ್ದಾರೆ. ಅಲ್ಲದೆ ಪ್ರಬಲ ರಾಜಕೀಯ ಮಾದರಿ ಮತ್ತು ಅಭಿವೃದ್ಧಿ ಮಾದರಿಗಳ ಮೊದಲ ಬಲಿಪಶುಗಳಾಗಿದ್ದಾರೆ.

ಇದುವರೆಗೂ ರಾಜ್ಯವನ್ನಾಳಿದ ಬಹುತೇಕ ಮುಖ್ಯಮಂತ್ರಿಗಳು ಮೇಲ್ಜಾತಿ ಪ್ರಭುತ್ವದ ವಕ್ತಾರರಾಗಿ ತಳಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ಸಿದ್ಧರಾಮಯ್ಯ ಪ್ರೀತಿ ಮತ್ತು ನಿರ್ಭೀತಿಗಳಿಂದ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ನಿರ್ಣಾಯಕ ಕೊಡುಗೆ ಕೊಟ್ಟಿದ್ದಾರೆ. ಧರಂಸಿಂಗ್, ಬಂಗಾರಪ್ಪ, ವೀರಪ್ಪಮೊಯ್ಲಿ ಮೊದಲಾದ ಮುಖ್ಯಮಂತ್ರಿಗಳಂತೆ ಶಕ್ತಿರಾಜಕಾರಣವನ್ನು ಮುಂದುವರೆಸದೇ ಸಾಮಾಜಿಕ ನ್ಯಾಯಪರ ರಾಜಕಾರಣ ಮತ್ತು ಅಭಿವೃದ್ಧಿಗಳಿಗೆ ವಿಶೇಷ ಮಹತ್ವ ನೀಡಿ ನಾಡಿನ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ. ವಿಶೇಷವಾಗಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುದ್ಧ, ಬಸವ, ಅಂಬೇಡ್ಕರ್ ಮೊದಲಾದವರ ಸಿದ್ಧಾಂತಗಳನ್ನು ರಾಜಕಾರಣದಲ್ಲಿ ಅಳವಡಿಸಿಕೊಂಡು ಪರ್ಯಾಯ ರಾಜಕಾರಣ ಮತ್ತು ಅಭಿವೃದ್ಧಿಗಳಿಗೆ ಕೆಚ್ಚೆದೆಯಿಂದ ಮುನ್ನುಡಿ ಬರೆದಿದ್ದಾರೆ. ಇವರು ನಾಡಿನಲ್ಲಿ ಸಾಮಾಜಿಕ ನ್ಯಾಯವಿತರಣೆಯ ಹರಿಕಾರರೆಂಬ ಹೆಗ್ಗಳಿಕೆ ಹೊಂದಿದ್ದಾರೆ.

ಇದನ್ನು ಓದಿ ರಾಜ್ಯ ಶಿಕ್ಷಣ ನೀತಿ | ತಜ್ಞರ ಜತೆ ಸಮಾಲೋಚಿಸಿ ಗೊಂದಲವಿಲ್ಲದಂತೆ ಜಾರಿಮಾಡುತ್ತೇವೆ: ಸಚಿವ ಸುಧಾಕರ್‌

ಸಿದ್ದರಾಮಯ್ಯನವರು 2013-18ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕಾಂತರಾಜ್‍ರವರ ನೇತೃತ್ವದಲ್ಲಿ ನಡೆಸಿದರು. ಇವರ ಮುಖ್ಯ ಉದ್ದೇಶ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ತಲೆ ಕೆಳಗು ಮಾಡಿ ನಿಜವಾದ ಅರ್ಥದಲ್ಲಿ ಬಹುಜನರಾದ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಕೊಡಬೇಕೆಂಬುದೇ ಇತ್ತು. ಕಾಂತರಾಜ್ ಸಮಿತಿ 2015ರಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ಆರಂಭಿಸಿ 2016ರಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿ ಸುಮಾರು 20 ಸಂಪುಟಗಳುಳ್ಳ ವರದಿಯನ್ನು 158.47 ಕೋಟಿ ರೂ.ವೆಚ್ಚದಲ್ಲಿ ಸಲ್ಲಿಸಿತು. ಸುಮಾರು 1351 ಅಲಕ್ಷಿತ ಜಾತಿಗಳನ್ನು ಪರಿಗಣಿಸಿ 192 ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಿ ವರದಿಯನ್ನು ಸಲ್ಲಿಸಿತು. ಇದು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವಿತರಣೆ, ರಾಜಕೀಯ ಪ್ರಾತಿನಿಧ್ಯ ಮತ್ತು ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಯಿಂದ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ವಾಸ್ತವವಾಗಿ, ಹೊಸ ಸಮೀಕ್ಷಾ ವರದಿಯಲ್ಲಿ ಜಾತಿಗಳ ಸಂಖ್ಯಾ ಬಲ ಏರುಪೇರಾಗಿದೆ. ಈ ವರದಿ ಬಿಡುಗಡೆಯಾದರೆ ರಾಜಕೀಯವಾಗಿ ಹಿನ್ನಡೆಯುಂಟಾಗುವ ಆತಂಕವನ್ನು ಬಿಜೆಪಿ ಮತ್ತು ಜನತಾದಳಗಳು ಹೊಂದಿವೆ.

ಅಂದು ಸಿದ್ಧರಾಮಯ್ಯನವರ ಸರ್ಕಾರಕ್ಕೆ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹಲವಾರು ಅಡೆತಡೆಗಳನ್ನು ಸೃಷ್ಟಿ ಮಾಡಿದ್ದರು. ತದನಂತರ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅಧಿಕಾರ ಗಳಿಸಿದ ಬಿಜೆಪಿ ಸರ್ಕಾರ ದುರ್ಬಲ ಸಮುದಾಯಗಳನ್ನು ಎಂದಿನಂತೆ ತುಳಿದು ಪ್ರಬಲ ಸಮುದಾಯಗಳಿಗೆ ಅಧಿಕಾರವನ್ನು ಮುಂದುವರೆಸುವ ಉದ್ದೇಶದಿಂದ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವ ಅಥವಾ ಅನುಷ್ಠಾನಗೊಳಿಸುವ ಕೆಲಸಕ್ಕೆ ಮುಂದೆ ಬರಲಿಲ್ಲ.

ಇದನ್ನು ಓದಿ ಈ ದಿನ ಸಂಪಾದಕೀಯ | ಬಡಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಹಳ್ಳ ಹಿಡಿಯಿತೇ?

ವಾಸ್ತವವಾಗಿ ಸುಮಾರು 6ಕೋಟಿ ಜನಸಂಖ್ಯೆಯುಳ್ಳ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ 1.08ಕೋಟಿ, ಪರಿಶಿಷ್ಟ ಪಂಗಡ 40.45ಲಕ್ಷ, ಮುಸ್ಲಿಮರು 70ಲಕ್ಷ, ಕುರುಬರು, 45 ಲಕ್ಷ ಮತ್ತು ಇತರ ಹಿಂದುಳಿದ ಸಮುದಾಯಗಳು 70ಲಕ್ಷ ಇರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಬ್ರಾಹ್ಮಣರು 14ಲಕ್ಷ, ಲಿಂಗಾಯತರು 65ಲಕ್ಷ ಮತ್ತು ಒಕ್ಕಲಿಗರು 60 ಲಕ್ಷ ಒಟ್ಟು 1.39 ಕೋಟಿ ಇದ್ದಾರೆ. ಸಂಖ್ಯಾಬಲದಲ್ಲಿ ಮೊದಲ ಸ್ಥಾನದಲ್ಲಿ ಪರಿಶಿಷ್ಟರು ಎರಡನೇ ಸ್ಥಾನದಲ್ಲಿ ಹಿಂದುಳಿದವರು ಮತ್ತು ಮೂರನೇ ಸ್ಥಾನದಲ್ಲಿ ಅಲ್ಪಸಂಖ್ಯಾತರು ಇದ್ದು ನಿಜವಾದ ಅರ್ಥದಲ್ಲಿ ಬಹುಸಂಖ್ಯಾತರಾಗಿದ್ದಾರೆ. ಈ ವರ್ಗಗಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಲಭಿಸಬೇಕಾದ ನ್ಯಾಯೋಚಿತ ಅವಕಾಶಗಳನ್ನು ಒದಗಿಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು ನಾಡಿನಲ್ಲಿ ಹೊಸ ರಾಜಕೀಯ-ಆರ್ಥಿಕ ಮನ್ವಂತರಕ್ಕೆ ನಾಂದಿ ಹಾಡಲಿದೆ.

ಇತ್ತೀಚಿನ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರು (ವಿಶೇಷವಾಗಿ ಬಹುಜನ ಅಹಿಂದ ಸಮುದಾಯಗಳು) ಬಿಜೆಪಿಯ ಭ್ರಷ್ಟಾಚಾರ ಮತ್ತು ದುರಾಚಾರಗಳಿಂದ ಬಸವಳಿದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾಧಿಕಾರ ನೀಡಿದರು. ಸಿದ್ದರಾಮಯ್ಯನವರು ಈ ಸಮೀಕ್ಷೆ ಪರವಾಗಿ ಸಂದರ್ಭಾನುಸಾರ ಮಾತನಾಡಿ ತಮ್ಮ ಸಾಮಾಜಿಕ ನ್ಯಾಯಪರ ನಿಲುವನ್ನು ದಿಟ್ಟವಾಗಿ ಪ್ರತಿಪಾದಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಾಡಿನ ದುರ್ಬಲ ವರ್ಗಗಳ ಬದುಕನ್ನು ಹಸನಾಗಿಸುವ ಸಲುವಾಗಿ ಐದು ಭಾಗ್ಯಗಳನ್ನು ದಿಟ್ಟ ಚಿಂತನೆ ಮತ್ತು ಸಿದ್ಧತೆಗಳಿಂದ ಬಿಡುಗಡೆ ಮಾಡಿದ್ದಾರೆ. ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ದಮನಿತರು ಮತ್ತು ಬಡವರ ಭಾಗ್ಯದ ಬಾಗಿಲನ್ನು ತೆರೆಯುವ ದೃಢಸಂಕಲ್ಪ ಮಾಡಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಜಾತಿ ಗಣತಿ ಸಮೀಕ್ಷೆಯು ಪ್ರಬಲ ಸಮುದಾಯಗಳ ಏಕಸ್ವಾಮ್ಯವನ್ನು ಸಹಜವಾಗಿ ನಗಣ್ಯಗೊಳಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಬಲ ಸಮುದಾಯಗಳ ಮುಲಾಜಿಗೆ ಒಳಗಾಗುವ ಅನಿವಾರ್ಯತೆ ಇಲ್ಲವಾಗಿದೆ.

ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...