- ವಿಧೇಯಕವನ್ನು ಅಂಗೀಕರಿಸಿ ಕಲಾಪವನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ
- ರಾಹುಲ್ ಅನರ್ಹತೆ ವಿಚಾರವಾಗಿ ಕಾಂಗ್ರೆಸ್ ಸದಸ್ಯರಿಂದ ಕಪ್ಪು ಬಟ್ಟೆ ಧರಿಸಿ ವಿಜಯ್ ಚೌಕ್ನಲ್ಲಿ ಮೆರವಣಿಗೆ
ಪ್ರತಿಪಕ್ಷಗಳ ಗದ್ದಲಗಳ ನಡುವೆಯೇ ರಾಜ್ಯಸಭೆಯ ಶಿಫಾರಸ್ಸಿನಂತೆ ಕೆಲವೊಂದು ತಿದ್ದುಪಡಿಗಳೊಂದಿಗೆ 2023ರ ವಿತ್ತೀಯ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು.
ಅಧಿವೇಶನದ ಸಮಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರತಿಪಕ್ಷಗಳ ‘ಮೋದಿ, ಅದಾನಿ ಭಾಯ್, ಭಾಯಿ’ ಎಂಬ ಘೋಷಣೆಗಳ ನಡುವೆಯೇ ಮೇಲ್ಮನೆಯ ಶಿಫಾರಸುಗಳನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಮಂಡಿಸಿದರು. ವಿತ್ತ ಸಚಿವರ ಮನವಿಯನ್ನು ಆಲಿಸಿದ ರಾಜ್ಯಸಭೆಯ ಸಭಾಪತಿ ರಮಾದೇವಿ ಅವರು ವಿಧೇಯಕವನ್ನು ಅಂಗೀಕರಿಸಿ ಕಲಾಪವನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ರಾಹುಲ್ ಅನರ್ಹತೆ; ಮುಂದುವರೆದ ಪ್ರತಿಭಟನೆ
ರಾಹುಲ್ ಗಾಂಧಿ ಅವರ ಅನರ್ಹತೆ ಮತ್ತು ಅದಾನಿ ವಿಷಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಗದ್ದಲವನ್ನು ಮುಂದುವರೆಸಿದ ನಂತರ ಎರಡೂ ಸದನವನ್ನು ಮೊದಲು 11 ಗಂಟೆಗೆ ಮುಂದೂಡಲಾಯಿತು. ಇದಕ್ಕೂ ಮೊದಲು, ಕಾಂಗ್ರೆಸ್ ಸಂಸದರು ಸಭಾಪತಿಗಳ ಮೇಲೆ ಕಾಗದಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸದನವನ್ನು ಸಂಜೆ 4 ಗಂಟೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ‘ಮೋದಿ-ಅದಾನಿ ಭಾಯಿ ಭಾಯಿ’ ಎಂದು ಘೋಷಣೆ ಕೂಗಿದರು. ಇದಕ್ಕೂ ಮುನ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಸಭೆ ನಡೆಸಿದರು.
ಸದನ ಮುಂದೂಡಿದ ನಂತರ ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ವಿಜಯ್ ಚೌಕ್ಗೆ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ಪ್ರಧಾನಿ ಮೋದಿ ಕೊಲ್ಲುತ್ತಿದ್ದಾರೆ. ಪ್ರಧಾನಿಗೆ ತಲೆಬಾಗದವರನ್ನು ಕೇಂದ್ರ ಏಜೆನ್ಸಿಗಳನ್ನು ಬಳಸಿ ಬೇಟೆಯಾಡುತ್ತಿದ್ದಾರೆ. ನರೇಂದ್ರ ಮೋದಿ ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜನರಿಗೆ ತೋರಿಸಲು ಮತ್ತು ಹೇಳಲು ನಾವು ಬಯಸುತ್ತೇವೆ. ಮೂರು ವರ್ಷಗಳಲ್ಲಿ ಅದಾನಿ ಆದಾಯ ₹12 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಇದು ಹೇಗೆ ಸಾಧ್ಯ? ರಾಹುಲ್ ಗಾಂಧಿಯ ಜೊತೆ ಎಲ್ಲಾ ಪ್ರತಿಪಕ್ಷಗಳು ಈ ಪ್ರಶ್ನೆಯನ್ನು ಮುಂದಿಟ್ಟು, ಈ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸುತ್ತಲೇ ಬಂದಿದ್ದೇವೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.