- ರಾಜ್ಯ ಕಾಂಗ್ರೆಸ್ ಶಾಂತಿ ಕದಡಿದ ಸಿಎಂ ಅಧಿಕಾರಾವಧಿ ವಿಚಾರ
- ಶಾಸಕರ ನಡುವೆ ಪರ ವಿರೋಧ ಚರ್ಚೆ, ಬೇಡಿಕೆ ಅಸಮಾಧಾನ
ಐದು ವರ್ಷವೂ ಸಿದ್ಧಾರಾಮಯ್ಯ ಸಿಎಂ ಎಂಬ ಹೇಳಿಕೆ ನೀಡಿದ್ದ ಸಚಿವ ಎಂಬಿ ಪಾಟೀಲ್ಗೆ ಸಂಸದ ಡಿಕೆ ಸುರೇಶ್ ನೇರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್, ಹೈ ಕಮಾಂಡ್ ವಲಯದಲ್ಲಾಗಿರುವ ನಿರ್ಧಾರದ ಬಗ್ಗೆ ಈಗ ಚರ್ಚೆ ಬೇಡ. ಈ ವಿಷಯದಲ್ಲಿ ಎಂಬಿ ಪಾಟೀಲ್ ಅವರಿಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ, ಎಚ್ಚರಿಕೆಯನ್ನೂ ಕೊಡಬಲ್ಲೆ. ಆದರೆ ಈಗಲೇ ಅದೆಲ್ಲ ಬೇಡ ಎಂದರು.
ಹಾಗೆಯೇ ಮಾಧ್ಯಮದವರ ಮೂಲಕ ಎಂಬಿ ಪಾಟೀಲ್ ಗೆ ಸಂದೇಶ ನೀಡಿದ ಸಂಸದ ಸುರೇಶ್, ಎಂಬಿ ಪಾಟೀಲ್ಗೆ ಹೇಳಿ, ಇವೆಲ್ಲವು ಬೇಡ ಎಂದು. ಈ ವಿಚಾರದಲ್ಲಿಅವರಿಗೆ ಹೆಚ್ಚಿನ ಮಾಹಿತಿ ಬೇಕು ಅಂದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಲಿ ಎಂದರು.
ಈ ಬೆಳವಣಿಗೆ ನಡುವೆಯೇ ಡಿಸಿಎಂ ಶಿವಕುಮಾರ್ ಅವರಿಗೂ ಸಿಎಂ ಸ್ಥಾನ ಕೊಡುವಂತೆ ಕುಣಿಗಲ್ ಶಾಸಕ ರಂಗನಾಥ್ ಪಕ್ಷ ಪ್ರಮುಖರನ್ನು ಆಗ್ರಹಿಸಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಇಷ್ಟು ಬಹುಮತ ಬರಲು ಡಿಕೆ ಶಿವಕುಮಾರ್ ಅವರ ಪಾತ್ರ ಕೂಡ ದೊಡ್ಡದಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಅವಕಾಶವನ್ನ ಕೊಡಿ ಎಂದರು.
ಈ ಸುದ್ದಿ ಓದಿದ್ದೀರಾ?:ಐದು ವರ್ಷ ಸಿಎಂ ಸಿದ್ದರಾಮಯ್ಯ | ವರಿಷ್ಠರು ಹೇಳಿದ್ದನ್ನೇ…
ನಾನು ಈ ಹಿಂದೆಯೂ ಈ ಮಾತನ್ನು ಹೇಳಿ, ಪ್ರಮುಖರನ್ನು ಆಗ್ರಹಿಸಿದ್ದೆ, ಈಗಲೂ ಅದನ್ನೇ ಹೇಳುತ್ತಿದ್ದೇನೆ. ಕಾಂಗ್ರೆಸ್ ಒಂದು ಸಮುದ್ರ ಇದ್ದಂತೆ. ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಸಿಎಂ ಆಗಲು ಅವಕಾಶ ಮಾಡಿಕೊಡುತ್ತದೆ ಅನ್ನೋ ವಿಶ್ವಾಸ ಇದೆ ಎಂದು ರಂಗನಾಥ್ ಹೇಳಿದರು.