- ಶಾಖದ ಅಲೆ ಸ್ಥಿತಿಯಿಂದ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ
- ಅಸ್ಸಾಂ, ಮೇಘಾಲಯಕ್ಕೆ ಭಾರೀ ಮಳೆ ಎಚ್ಚರಿಕೆ ನೀಡಿದ ಐಎಂಡಿ
ಭಾರತದ ಅನೇಕ ಭಾಗಗಳಲ್ಲಿ ಶಾಖದ ಅಲೆ ಪ್ರಮಾಣ ಹೆಚ್ಚಿದ್ದು, ವಾಯುವ್ಯ ಭಾಗದಲ್ಲಿ ಭಾನುವಾರ (ಮೇ 21) 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ದೆಹಲಿ-ಎನ್ಸಿಆರ್ ಸೇರಿದಂತೆ ದೆಹಲಿ, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರಪ್ರದೇಶ, ಪಶ್ಚಿಮ ರಾಜಸ್ಥಾನ, ಪೂರ್ವ ಉತ್ತರಪ್ರದೇಶ, ಜಾರ್ಖಂಡ್, ಪೂರ್ವ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಶಾಖದ ಅಲೆಗಳಿಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದ ಭಾಗಗಳಲ್ಲಿ ಶಾಖದ ಅಲೆ ಪ್ರಮಾಣದಿಂದ 2-3 ಡಿಗ್ರಿ ತಾಪಮಾನ ಹೆಚ್ಚಲಿದ್ದು, ಭಾರತದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನ ಇರಲಿದೆ. ಯಾವುದೇ ಮಹತ್ವದ ಬದಲಾವಣೆ ಕಂಡು ಬರುವುದಿಲ್ಲ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 24ರಿಂದ ಬೀಸುವ ಪಶ್ಚಿಮ ಮಾರುತಗಳಿಂದ ಗರಿಷ್ಠ ತಾಪಮಾನದಲ್ಲಿ 3-5 ಡಿಗ್ರಿ ಕುಸಿತವಾಗಲಿದೆ. ಇದರಿಂದ ಶಾಖದ ಹವಾಮಾನ ತುಸು ತಗ್ಗಲಿದೆ. ಈ ವೇಳೆ ಮೂರರಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಅಲ್ಲದೆ ಮೋಡ ಮುಸುಕಿದ ವಾತಾವರಣ ಇರಲಿದೆ.
ಶಾಖದ ಅಲೆಗಳ ಪರಿಸ್ಥಿತಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಭಾನುವಾರ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಜರ್ಗಢದಲ್ಲಿಯೂ ಗರಿಷ್ಠ 46.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಸ್ಸಾಂ | ಶಾಲಾ ಶಿಕ್ಷಕರು ಜೀನ್ಸ್ ಧರಿಸದಂತೆ ವಸ್ತ್ರ ಸಂಹಿತೆ ಹೊರಡಿಸಿದ ಸರ್ಕಾರ
ಶಾಖದ ಅಲೆ ಪ್ರಮಾಣ ಕರಾವಳಿಯ ಭಾಗಗಳಾದ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ, ಕೇರಳ ಹಾಗೂ ಮಾಹೆಗಳಲ್ಲೂ ಹೆಚ್ಚಾಗಿದ್ದು, ಗರಿಷ್ಠ ತಾಪಮಾನದ ವಾತಾವರಣವಿದೆ ಎಂದು ಐಎಂಡಿ ಹೇಳಿದೆ.
ಅಲ್ಲದೆ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಸೋಮವಾರ ಭಾರೀ ಮಳೆ ಉಂಟಾಗಲಿದೆ. ಮುಂದಿನ ದಿನಗಳಲ್ಲಿಯೂ ಭಾರತದ ಕೆಲವು ಭಾಗಗಳಲ್ಲಿ ಮಳೆ ಸುರಿಯಬಹುದು. ಕೆಲವೆಡೆ ಗರಿಷ್ಠ ತಾಪಮಾನವೂ ದಾಖಲಾಗಲಿದೆ ಎಂದು ಐಎಂಡಿ ಹೇಳಿದೆ.