- ನ್ಯಾಯಾಂಗ ಸುಧಾರಣೆ ನಿರ್ಧಾರ ಕೈಬಿಡುವಂತೆ ಅಧ್ಯಕ್ಷ ಐಸಾಕ್ ಸೂಚನೆ
- ವಜಾಗೊಂಡ ನಿರ್ಧಾರ ಕೈಬಿಡಲು ಸೂಚಿಸಿದ್ದ ರಕ್ಷಣಾ ಸಚಿವ ಗಲಾಂಟ್
ಇಸ್ರೇಲ್ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರದ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಸೋಮವಾರ (ಮಾರ್ಚ್ 27) ದೇಶದಲ್ಲಿ ಪ್ರತಿಭಟನೆಯ ಪ್ರಕ್ಷುಬ್ಧ ವಾತಾವರಣದ ನಂತರ ಪ್ರಧಾನಿ ನೆತನ್ಯಾಹು ಅವರು ತಮ್ಮ ಅಧಿಕೃತ ನಿವಾಸದಿಂದ ಪಲಾಯನಗೈದಿದ್ದಾರೆ.
ನಿರ್ಧಾರ ಕೈಬಿಡುವಂತೆ ಈ ಮೊದಲು ಸಲಹೆ ನೀಡಿದ್ದ ರಕ್ಷಣಾ ಸಚಿವ ಯೋವ್ ಗಲಾಂಟ್ ಅವರನ್ನು ಪ್ರಧಾನಿ ನೆತನ್ಯಾಹು ಅವರು ಸಂಪುಟದಿಂದ ವಜಾ ಮಾಡಿದ್ದರು. ಪ್ರಧಾನಿಯವರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಮಂಗಳವಾರವೂ (ಮಾರ್ಚ್ 28) ಪ್ರತಿಭಟನೆ ಮುಂದುವರಿದಿದೆ.
ಸೋಮವಾರ ಸಂಜೆ ಪ್ರಧಾನಿ ನೆತನ್ಯಾಹು ಭಾಷಣ ಮಾಡಿದ್ದರು. ಆದರೆ ಇದರಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ನಿರ್ಧಾರ ಬದಲಿಸುವ ತೀರ್ಮಾನ ಪ್ರಕಟಿಸಲಿಲ್ಲ. ಭಾಷಣದ ನಂತರ ಅವರು ನಿವಾಸ ತೊರೆದಿದ್ದರು. ಅವರ ನಿವಾಸದ ಸುತ್ತ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಕಾರಣ ಹೆಲಿಕಾಪ್ಟರ್ ಮೂಲಕ ಅವರನ್ನು ರಕ್ಷಿಸಲಾಗಿತ್ತು. ನೆತನ್ಯಾಹು ವಿದೇಶದಲ್ಲಿ ಆಶ್ರಯ ಪಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಸೋಮವಾರ ಸಂಜೆ ಮಾಡಿದ್ದ ಭಾಷಣದಲ್ಲಿ ನೆತನ್ಯಾಹು, ನ್ಯಾಯಾಂಗ ವ್ಯವಸ್ಥೆ ಬದಲಾವಣೆ ನಿರ್ಧಾರಕ್ಕೆ ತಡೆ ನೀಡಲಾಗುವುದು. ಇದರ ಬಗ್ಗೆ ಚರ್ಚೆ ನಡೆಸಲು ಆಹ್ವಾನಿಸಲಾಗುವುದು. ಪ್ರತಿಭಟನೆ ಹಿನ್ನೆಲೆ ಅಂತರ್ಯುದ್ಧ ತಡೆಯಲು ನ್ಯಾಯಾಂಗ ಬದಲಾವಣೆಗೆ ತಡೆಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ನೆತನ್ಯಾಹು ಅವರ ಮಾತಿಗೆ ಸಮಾಧಾನವಾಗದ ಪ್ರತಿಭಟನಾಕಾರರು ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಯೋಜನೆ ರದ್ಧತಿಯ ಬೇಡಿಕೆ ಈಡೇರಿಕೆವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಅಸಂವಿಧಾನಿಕ ಕಾನೂನುಗಳನ್ನು ತೆಗೆದುಹಾಕುವ ಸುಪ್ರೀಂಕೋರ್ಟ್ನ ಅಧಿಕಾರವನ್ನು ಪ್ರಸ್ತಾವಿತ ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಯೋಜನೆ ಮೊಟಕುಗೊಳಿಸುತ್ತದೆ. ಅಲ್ಲದೆ ನ್ಯಾಯಾಧೀಶರ ಆಯ್ಕೆಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಇದು ಇಸ್ರೇಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ದೇಶಿತ ನ್ಯಾಯಾಂಗ ಬದಲಾವಣೆ ಯೋಜನೆ ಖಂಡಿಸಿ ಜನರು ತಿಂಗಳುಗಳಿಂದ ಪ್ರತಿಭಟನೆ ನಡೆಸಿದ್ದಾರೆ. ರಕ್ಷಣಾ ಸಚಿವ ಯೋವ್ ಗಾಲಂಟ್ ಅವರನ್ನು ವಜಾಗೊಳಿಸಿದ ಒಂದು ದಿನದ ನಂತರ ಹತ್ತಾರು ಸಾವಿರ ಜನರು ಸ್ವಯಂಪ್ರೇರಿತವಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಹಿಸ್ಟಾಡ್ರಟ್ ಕಾರ್ಮಿಕ ಒಕ್ಕೂಟ ಇದನ್ನು ಐತಿಹಾಸಿಕ ಮುಷ್ಕರ ಎಂದು ಕರೆಯಿತು. ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಗಳು, ಮಾಲ್ಗಳು ಮತ್ತು ಇತರ ಅನೇಕ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು.
“ನ್ಯಾಯಾಂಗ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ನಿರ್ಧಾರವನ್ನು ತಕ್ಷಣದಿಂದ ಕೈಬಿಡಬೇಕು” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅಧ್ಯಕ್ಷ ಐಸಾಕ್ ಹೆರ್ಜೋಗ್ ಸೋಮವಾರ (ಮಾರ್ಚ್ 27) ಸೂಚಿಸಿದ್ದರು.
ನ್ಯಾಯಾಂಗ ಬದಲಾವಣೆ ಯೋಜನೆಗೆ ವಾರಗಳ ಕಾಲ ನೆತನ್ಯಾಹು ಅವರ ಪಕ್ಷದಲ್ಲಿ ಭಿನ್ನಾಭಿಪ್ರಾಯವಿತ್ತು. ರಕ್ಷಣಾ ಸಚಿವ ಯೋವ್ ಗಾಲಂಟ್ ಅವರು ಶನಿವಾರ (ಮಾರ್ಚ್ 25) ಅದನ್ನು ಮೊದಲ ಬಾರಿಗೆ ವಿರೋಧಿಸಿದರು. ಆದರೆ ನೆತನ್ಯಾಹು ಅವರು ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದರು.
ಸೋಮವಾರ ತಡರಾತ್ರಿಯವರೆಗೂ ದೇಶಾದ್ಯಂತ ಸ್ವಯಂಪ್ರೇರಿತ ಪ್ರತಿಭಟನೆಗೆ ಕಾರಣವಾದ ರಕ್ಷಣಾ ಸಚಿವ ಗಾಲಂಟ್ ಅವರ ವಜಾಗೊಳಿಸುವಿಕೆಯು ಪ್ರಧಾನಿ ನೆತನ್ಯಾಹು ಪಕ್ಷ ಮತ್ತು ಪ್ರತಿಪಕ್ಷವಾದ ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.