ಎಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಬಯಸಿರುವ ಮಧುಗಿರಿ ತಾಲೂಕಿನ ಮೂವರು ಜೆಡಿಎಸ್ ಕಾರ್ಯಕರ್ತರು ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ತಾಲ್ಲೂಕಿನ ಶ್ರಾವಂಡನಹಳ್ಳಿ ಎಸ್.ಎ ಅಶೋಕ್, ಜಗದೀಶ್ ಹಾಗೂ ಮೂರ್ತಿ ಶ್ರಾವಂಡನಹಳ್ಳಿಯಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವ ಕಾರ್ಯಕರ್ತರು. ಎಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಬೇಕು. ಮಧುಗಿರಿ ಶಾಸಕ ವೀರಭದ್ರಯ್ಯ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು. ಗೌರಿಬಿದನೂರಿನ ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ ಗೆಲುವು ಸಾಧಿಸಬೇಕೆಂದು ಹರಕೆ ಹೊತ್ತಿರುವ ಮೂವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಮಾರ್ಚ್ 23ರಿಂದ ಪಾದಯಾತ್ರೆ ಹೊರಟಿರುವ ಮೂವರು ಮಂಡ್ಯ ಜಿಲ್ಲೆಯ ಭಾರತೀನಗರ ತಲುಪಿಸಿದ್ದಾರೆ. ಅವರನ್ನು ಅಲ್ಲಿನ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ ಅಭಿನಂದಿಸಿ ಬೀಳ್ಕೊಟ್ಟಿದ್ದಾರೆ.
“ಯುಗಾದಿ ಹಬ್ಬದ ಮಾರನೆಯ ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ದಾರಿಯುದ್ದಕ್ಕೂ ನಮ್ಮ ಪಾದಯಾತ್ರೆಗೆ ಹಲವರು ಶುಭ ಹಾರೈಸುತ್ತಿದ್ದಾರೆ. ಎಲ್ಲರ ಬೆಂಬಲ ಸಂತಸ ತಂದಿದೆ” ಎಂದು ಪಾದಯಾತ್ರೆಗಳು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಆಡಳಿತ ಪಕ್ಷಕ್ಕೆ ಮತ್ತೊಂದು ಶಾಕ್: ಕೂಡ್ಲಿಗಿ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ಕಾಂಗ್ರೆಸ್ ಕಡೆ ಮುಖ
“ಎಚ್.ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಇದುವರೆವಿಗೂ ಅಂತಹ ಆಡಳಿತವನ್ನು ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಲಾಟರಿ, ಸಾರಾಯಿ ನಿಷೇಧ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತ ಉತ್ತಮ ಆಡಳಿತ ನೀಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ಆಯ್ಕೆಗೊಂಡರೆ ರಾಜ್ಯ ಅಭಿವೃದ್ದಿಗೊಳ್ಳುತ್ತದೆ ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಎಸ್.ಎ ಅಶೋಕ್ ತಿಳಿಸಿದರು.