ಕರ್ನಾಟಕದ ಕರಾವಳಿ ಭಾಗದ ಧರ್ಮಸ್ಥಳದಲ್ಲಿ ನಡೆದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೇವಲ ಒಂದು ಕ್ರಿಮಿನಲ್ ಕೇಸ್ ಆಗಿ ಉಳಿದಿಲ್ಲ. ಇದು ವರ್ಷಾನುಗಟ್ಟಲೇ ಪಟ್ಟಭದ್ರರು ಹಾಗೂ ಊಳಿಗಮಾನ್ಯ ಅಧರ್ಮ ಸಾಮ್ರಾಜ್ಯದ ವಿರುದ್ಧ ನಡೆಯುತ್ತಿರುವ ಮಹಾ ಹೋರಾಟ. ತನಿಖಾ ಸಂಸ್ಥೆಗಳ ಜೊತೆಗೂಡಿಯೇ ತನಿಖೆಯ ಹಾದಿಯನ್ನ ತಪ್ಪಸಿದ್ದು ಎಂಬ ಸಾರ್ವಜನಿಕ ಆಕ್ರೋಶದ ನಡುವೆಯೇ, ಈಗ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಯ ದಾರಿಯನ್ನು ಸುಗಮಗೊಳಿಸಬಹುದು ಎಂಬ ಆಶಾಭಾವ ಮೂಡಿದೆ. ಹೌದು, ಮಗಳನ್ನ ಕಳೆದುಕೊಂಡ ನೋವಿನಲ್ಲಿರುವ ತಾಯಿ ಕುಸುಮಾವತಿ ಅವರ ಅಚಲವಾದ ಕಾನೂನು ಹೋರಾಟಕ್ಕೆ ಜಯ ಸಿಗುವ ಕಾಲ ಇನ್ನೂ ದೂರವಿದ್ದರೂ ಅವರ ಹೋರಾಟಕ್ಕೆ ಮಾನ್ಯತೆ ದೊರೆಯುವ ಹಂತ ಹತ್ತಿರ ಬಂದಿಂತಿದೆ.
ಸುಪ್ರೀಂ ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ :-
ಸೌಜನ್ಯ ಪ್ರಕರಣದ ಮರುತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠವು ಕೈಗೆತ್ತಿಕೊಂಡಿತು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶೋಭಾ ಗುಪ್ತ, ಶೇಖರ ದೇವಸ್ ಮತ್ತು ಸಂಜಯ್ ನೂಲವಿ ಅವರು ವಾದಗಳನ್ನು ಮಂಡಿಸಿದರು.

ವಾದದ ವೇಳೆ ವಕೀಲರು ಪ್ರಮುಖವಾಗಿ ಎತ್ತಿ ತೋರಿಸಿದ್ದು ‘ಸಾಕ್ಷಿಗಳ ನಿಗೂಢ ಸಾವು’. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದ ಹಲವು ವ್ಯಕ್ತಿಗಳು ಕಳೆದ ಕೆಲವು ವರ್ಷಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಇದು ಕೇವಲ ಕಾಕತಾಳೀಯವಲ್ಲ, ಬದಲಿಗೆ ಪ್ರಕರಣದ ಸತ್ಯವನ್ನು ಹೂತುಹಾಕಲು ನಡೆಯುತ್ತಿರುವ ದೊಡ್ಡ ಮಟ್ಟದ ಪಿತೂರಿ ಎಂಬ ವಾದವನ್ನು ನ್ಯಾಯಾಲಯದ ಮುಂದಿಡಲಾಯಿತು. ಈ ಅಂಶವು ನ್ಯಾಯಪೀಠವನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿತು.
ರಾಜ್ಯ ಸರ್ಕಾರ ಮತ್ತು ಸಿಬಿಐ ವಿರುದ್ಧ ನ್ಯಾಯಪೀಠದ ಕೆಂಗಣ್ಣು:-
ವಿಚಾರಣೆಯ ಆರಂಭದಲ್ಲೇ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಕರ್ನಾಟಕ ಸರ್ಕಾರದ ಪರವಾಗಿ ಅಥವಾ ಸಿಬಿಐ ಪರವಾಗಿ ಯಾವುದೇ ಅಭಿಯೋಜಕರು ಕೋರ್ಟ್ ಹಾಲ್ನಲ್ಲಿ ಹಾಜರಿರಲಿಲ್ಲ. ಇದು ಪ್ರಕರಣದ ಕುರಿತು ಸರ್ಕಾರಕ್ಕಿರುವ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಮಧ್ಯಾಹ್ನದ ನಂತರ ವಿಚಾರಣೆ ಮುಂದುವರಿದಾಗಲೂ, ಸರ್ಕಾರಿ ವಕೀಲರು ಪ್ರಕರಣದ ಕುರಿತು ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲು ತಡಕಾಡಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, “ರಾಜ್ಯ ಸರ್ಕಾರವು ಈ ಸೂಕ್ಷ್ಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ” ಎಂದು ಕಟುವಾಗಿ ಟೀಕಿಸಿದರು. ಇಷ್ಟು ದೊಡ್ಡ ಮಟ್ಟದ ಜನಜಾಗೃತಿ ಮತ್ತು ಅನ್ಯಾಯ ನಡೆದಿರುವ ಈ ಕೇಸಿನಲ್ಲಿ ಸರ್ಕಾರದ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.
ಮರುತನಿಖೆಗೆ ಮುಹೂರ್ತ ಫಿಕ್ಸ್:-ಸುಪ್ರೀಂ ಕೋರ್ಟ್ ಮರುತನಿಖೆಯ ಪ್ರಕ್ರಿಯೆಗೆ ಚಾಲನೆ ನೀಡಲು ಮೂರು ಪ್ರಮುಖ ನಿರ್ದೇಶನಗಳನ್ನು ನೀಡಿದೆ.
ಸಾಕ್ಷಿಗಳ ರಕ್ಷಣೆ: ಮೊದಲು ಸಾಕ್ಷಿಗಳ ಜೀವ ಉಳಿಸುವುದು ಅನಿವಾರ್ಯ ಎಂದು ಕಂಡುಕೊಂಡ ನ್ಯಾಯಾಲಯ, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ತಕ್ಷಣವೇ ಬಿಗಿ ಪೊಲೀಸ್ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸಾಕ್ಷಿಗಳು ಭಯಮುಕ್ತವಾಗಿ ಹೇಳಿಕೆ ನೀಡಲು ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ ಎಂದು ನೆನಪಿಸಿದೆ.
ಸುಪ್ರೀಂ ಕೋರ್ಟ್ ಯಾಕೆ ಈಗ ಸಾಕ್ಷ್ಯ ರಕ್ಷಣೆ ಬಗ್ಗೆ ಮೆನ್ಷನ್ ಮಾಡಿದೆ ಅಂದರೆ, ಅತ್ಯಾಚಾರ ನಡೆದ ರಾತ್ರಿಯಿಂದಲೇ ಈ ಪ್ರಕರಣದಲ್ಲಿ ಸಾಕ್ಷ್ಯನಾಶವಾಗೋಕೆ ಶುರುವಾಗಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ಈ ಬಾರಿ ಸಾಕ್ಷಿಗಳ ರಕ್ಷಣೆಗೆ ಹೆಚ್ಚಿನ ಮಹತ್ವವನ್ನ ಕೊಟ್ಟಂತಿದೆ.
ಕೌಂಟರ್ ಅಫಿಡೆವಿಟ್ ಸಲ್ಲಿಕೆ: ರಾಜ್ಯ ಸರ್ಕಾರ ಮತ್ತು ಸಿಬಿಐ ಸಂಸ್ಥೆಗಳು ಜುಲೈ 14 ರೊಳಗೆ ತಮ್ಮ ಲಿಖಿತ ನಿಲುವನ್ನು ಕೌಂಟರ್ ಅಫಿಡೆವಿಟ್ ರೂಪದಲ್ಲಿ ಸಲ್ಲಿಸಬೇಕು. ತನಿಖೆಯಲ್ಲಿ ಎಲ್ಲಿ ತಪ್ಪಾಗಿದೆ ಮತ್ತು ಮುಂದೆ ಏನು ಮಾಡಬಹುದು ಎಂಬುದನ್ನು ವಿವರಿಸಲು ಸೂಚಿಸಲಾಗಿದೆ.
ತನಿಖಾ ಸಂಸ್ಥೆಯ ಆಯ್ಕೆ: ಮರುತನಿಖೆಯನ್ನು ಯಾವ ಸಂಸ್ಥೆಗೆ ವಹಿಸಬೇಕು? ಹೊಸದಾಗಿ ವಿಶೇಷ ತನಿಖಾ ತಂಡ (SIT) ರಚಿಸಬೇಕೇ ಅಥವಾ ಬೇರೆ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ವಹಿಸಬೇಕೇ ಎಂಬ ಬಗ್ಗೆ ಸರ್ಕಾರ ತಮ್ಮ ಅಭಿಪ್ರಾಯವನ್ನು ಎರಡು ವಾರಗಳಲ್ಲಿ ನೀಡಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ದೋಷಪೂರಿತ ತನಿಖೆ ಮತ್ತು ಹೈಕೋರ್ಟ್ ನೋಟಿಸ್:-
ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಆರೋಪಿ ಎಂದು ಬಿಂಬಿತವಾಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿಯಾಗಿ ಬಿಡುಗಡೆಯಾಗಿದ್ದರು. ಆಗ ವಿಶೇಷ ಸಿಬಿಐ ನ್ಯಾಯಾಲಯವು ನೀಡಿದ್ದ ತೀರ್ಪಿನಲ್ಲಿ ತನಿಖಾಧಿಕಾರಿಗಳ ವೈಫಲ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿತ್ತು.ಒಬ್ಬ ಮಾನಸಿಕ ಅಸ್ವಸ್ಥನನ್ನು ಬಲಿಪಶು ಮಾಡಿ, ನೈಜ ಕಾಮುಕರನ್ನು ರಕ್ಷಿಸಲು ಪ್ರಯತ್ನ ನಡೆದಿದೆ ಎಂಬ ಅಂಶ ತೀರ್ಪಿನಲ್ಲಿ ಉಲ್ಲೇಖವಾಗಿತ್ತು.
ಈ ದೋಷಪೂರಿತ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ವಿಚಾರವನ್ನು ‘ಖುಲಾಸೆ ಸಮಿತಿ’ಯ ಮುಂದೆ ಇಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಆದೇಶವು ಜಾರಿಯಾಗಿರಲಿಲ್ಲ. ಇದೀಗ ಕರ್ನಾಟಕ ಹೈಕೋರ್ಟ್ ಕೂಡ ಈ ಸಂಬಂಧ ಸಿಬಿಐ ಮತ್ತು ಚೆನ್ನೈನ ವಿಶೇಷ ತನಿಖಾ ದಳಕ್ಕೆ ನೋಟಿಸ್ ಜಾರಿ ಮಾಡಿದ್ದು, ತನಿಖೆಯಲ್ಲಿ ತಪ್ಪು ಮಾಡಿದ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಲಿದೆ.

ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾದ ಸಾಕ್ಷ್ಯಗಳು:-
ಅರ್ಜಿದಾರ ಕುಸುಮಾವತಿ ಅವರ ಪರ ವಕೀಲರು ಪ್ರಕರಣದ ಕೆಲವು ಸ್ಫೋಟಕ ಮಾಹಿತಿ ಮತ್ತು ಸಾಕ್ಷ್ಯಗಳನ್ನು ‘ಮುಚ್ಚಿದ ಲಕೋಟೆ’ (Sealed Cover) ಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ದಾಖಲೆಗಳಲ್ಲಿ ಪ್ರಕರಣದ ದಿಕ್ಕನ್ನು ಬದಲಿಸಬಲ್ಲ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ. ನ್ಯಾಯಾಲಯವು ಈ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಸಾಕ್ಷಿಗಳ ರಕ್ಷಣೆಗೆ ತಕ್ಷಣದ ಆದೇಶ ನೀಡಿತು ಎನ್ನುವುದು ಇಲ್ಲಿ ಗಮನಾರ್ಹ.
ಸೌಜನ್ಯ ಪ್ರಕರಣದ ಹಿನ್ನೆಲೆ ಮತ್ತು ಜನಸಾಮಾನ್ಯರ ಹೋರಾಟ:-
2012ರ ಅಕ್ಟೋಬರ್ ತಿಂಗಳಿನಲ್ಲಿ ಸೌಜನ್ಯ ಅಪಹರಣಕ್ಕೊಳಗಾಗಿ, ನಂತರ ಕಾಡಿನಲ್ಲಿ ಆಕೆಯ ಶವ ಪಿಶಾಚಿಗಳ ಕೈಗೆ ಸಿಕ್ಕಿ ಕ್ರೌರ್ಯವನ್ನ ಎದುರಿಸಿ ಅತ್ಯಂತ ಭಯಾನಕ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಕರಾವಳಿ ಭಾಗದಲ್ಲಿ ಮತ್ತು ಇಡೀ ರಾಜ್ಯದಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಹೋರಾಟವಲ್ಲ, ಸಮಾಜದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧದ ಧ್ವನಿಯಾಗಿ ಎಲ್ಲರೂ ಎದೆಸೆಟೆದು ನಿಂತಿದ್ದರು.
ತನಿಖಾ ಹಂತದಲ್ಲಿ ಪೋಲಿಸರು ಮತ್ತು ನಂತರ ಸಿಬಿಐ ಅಧಿಕಾರಿಗಳು ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಹಿಡಿದು ನ್ಯಾಯ ಸಿಗಲೇಬಾರದು ಅಂತ ಪಟ್ಟು ಹಿಡಿದ ಪ್ರತಿಯೊಬ್ಬರಿಂದಲೂ ವ್ಯವಸ್ಥಿತ ಸಾಕ್ಷ್ಯನಾಶವಾಗಿದೆ.

“ಸೌಜನ್ಯ ಕಾಣೆಯಾದ ಹಿಂದಿನ ದಿನ 200 ಜನರು ಹುಡುಕಿದರೂ ಆಕೆ ಸಿಗುವುದಿಲ್ಲ. ಜೋರಾಗಿ ಮಳೆ ಬಂದಿದ್ದರಿಂದ ಜನರೆಲ್ಲರೂ ಮನೆಗೆ ಮರಳಿದ್ದರು. ಆದರೆ, ಮಾರನೇ ದಿನ ಸೌಜನ್ಯಳ ಮೃತದೇಹ ಸಿಕ್ಕಿದ ಸ್ಥಳದಲ್ಲಿ ಆಕೆಯ ಬ್ಯಾಗ್ ಹಾಗೂ ಬುಕ್ ಬಿದ್ದಿರುತ್ತೆ. ಅಷ್ಟು ಮಳೆ ಬಂದರೂ ಬ್ಯಾಗ್ ಹಾಗೂ ಪುಸ್ತಕಗಳು ಒದ್ದೆಯಾಗಿರಲಿಲ್ಲ. ಈ ಮೂಲಕ ಬೇರೆ ಯಾವುದೇ ಜಾಗದಲ್ಲಿ ಅತ್ಯಾಚಾರ ನಡೆದಿತ್ತು. ಆದರೆ, ಪೊಲೀಸರು ಮೃತದೇಹ ಸಿಕ್ಕಿದ ಜಾಗದಲ್ಲಿ ಈ ಕೃತ್ಯ ನಡೆದಿದೆ ಅಂತ ಪ್ರೂವ್ ಮಾಡುವುದಕ್ಕೆ ಹೊರಟಿದ್ದರು” ಅನ್ನೋ ಆರೋಪ ಇದೆ.
“ಸೌಜನ್ಯ ಮೃತದೇಹ ಸಿಕ್ಕಿದ 50 ಅಡಿ ದೂರದಲ್ಲಿ ಸಂತೋಷ್ ರಾವ್ನ ಒಂದು ಟೆಂಟ್ ಹಾಕಿಸುತ್ತಾರೆ. ಎಲ್ಲೋ ಬಾಹುಬಲಿ ಬೆಟ್ಟದಲ್ಲಿದ್ದ ಸಂತೋಷ್ ರಾವ್ ಅನ್ನು ಹಿಡಿದು ಈ ಟೆಂಟ್ನಲ್ಲಿಯೇ ಇದ್ದ ಎಂದು ಸಾಬೀತು ಮಾಡುವುದಕ್ಕೆ ಪೊಲೀಸರು ಮುಂದಾಗುತ್ತಾರೆ. ಸೌಜನ್ಯ ಹುಡುಕಿದ ಜನರಲ್ಲಿ ಒಬ್ಬರಿಗೂ ಈ ಟೆಂಟ್ ಯಾಕೆ ಕಾಣಲಿಲ್ಲ. ಸೌಜನ್ಯ ಮೃತದೇಹ ಸಿಕ್ಕಿದ ದಿನ ಮೂರು ಸಾವಿರ ಜನ ಸೇರುತ್ತಾರೆ. ಅವರಿಗೂ ಆ ಟೆಂಟ್ ಕಾಣಿಸಲಿಲ್ಲ. ಅಲ್ಲಿ ಟೆಂಟ್ ಇರಲೇ ಇಲ್ಲ” ಇದು ಪೊಲೀಸರು ಮೇಲಿರುವ ಎರಡನೇ ಆರೋಪ.
ಇನ್ನು ಸೌಜನ್ಯ ಕೇಸ್ನಲ್ಲಿ ಸಾಕ್ಷಿಯಾಗಬಹುದಾದವರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಅದರಲ್ಲಿ ಸಂತೋಷ್ ರಾವ್ ಅವರನ್ನು ಹಿಡಿದು ಕೊಟ್ಟವರಲ್ಲಿ ಒಬ್ಬರಾಗಿದ್ದ ರವಿ ಪೂಜಾರಿ. ಕೇಸ್ ಸಿಬಿಐಗೆ ವರ್ಗಾವಣೆ ಆದಾಗ, ರವಿ ಪೂಜಾರಿ ನಿಗೂಢವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಆರೋಪಿಗಳು ಸೌಜನ್ಯ ಜೊತೆ ಫಾರ್ಮ್ ಹೌಸ್ನಲ್ಲಿ ಇರುವುದನ್ನು ನೋಡಿದ್ದ ಅಲ್ಲೇ ಕೆಲಸ ಮಾಡುತ್ತಿದ್ದ ವಾರಿಜಾ ಎಂಬುವವರ ಮೃತದೇಹ ಕೂಡ ಅದೇ ಫಾರ್ಮ್ ಹೌಸ್ನ ಬಾವಿಯಲ್ಲಿ ಸಿಗುತ್ತೆ.
ಹಾಗೇ ಗೋಪಾಲ ಕೃಷ್ಣ ಸ್ಲೋ ಪಾಯಿಸನ್ನಿಂದ ಸತ್ತಿದ್ದು, ಸೌಜನ್ಯಳನ್ನು ಕಿಡಿಗೇಡಿಗಳಿಂದ ಬಿಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದ ಪ್ರಶಾಂತ್ ಕೂಡ ಸಾವನ್ನಪ್ಪಿದ್ದ. ಹಾಗೇ ಸೌಜನ್ಯ ಅಪಹರಣದ ಕಂಡಿದ್ದ ದಿನೇಶ್ ಗೌಡ, ಹೇಳಿಕೆ ಕೊಟ್ಟಿದ್ದ ಹರೀಶ್ ಮಡಿವಾಳ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದ. ಹೀಗೆ ಸಾಕ್ಷಿಗಳೆಲ್ಲ ನಾಶ ಆಗಿದ್ದಾವೆ. ಇನ್ನು ಸೌಜನ್ಯಳ ಮನೆಗೆ ಹೋಗಿದ್ದ ಪೊಲೀಸರು ಆಕೆಯ ಒಳು ಉಡುಪನ್ನ ತಂದು ಅದೇ ಅತ್ಯಾಚಾರಕ್ಕೊಳಗಾದಾಗ ಸಿಕ್ಕ ಬಟ್ಟೆ ಅಂತ ಸುಳ್ಳು ಹೇಳಿದ್ದಾರೆ ಅನ್ನೋ ಆರೋಪ ಇದೆ. ಸ್ಥಳೀಯವಾಗಿ ಲಭ್ಯವಿದ್ದ ಬೆರಳಚ್ಚುಗಳು, ಬಟ್ಟೆಗಳ ಮೇಲಿದ್ದ ಡಿಎನ್ಎ ಮಾದರಿಗಳು ಸರಿಯಾಗಿ ಸಂಗ್ರಹವಾಗಿರಲಿಲ್ಲ ಎಂಬುದು ನ್ಯಾಯಾಲಯದ ಅಸಮಾಧಾನಕ್ಕೆ ಮೂಲ ಕಾರಣ.

ನನ್ನ ಮಗಳಿಗಾದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಮತ್ತು ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂಬ ಹಠ ತೊಟ್ಟಿರುವ ಸೌಜನ್ಯ ತಾಯಿ ಕುಸುಮಾವತಿ, ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಸಾಮಾನ್ಯ ಜನರಿಗೆ ಕಾನೂನಿನ ಮೇಲೆ ನಂಬಿಕೆ ಬರುವಂತೆ ಮಾಡಿದೆ. ಅವರ ಹೋರಾಟಕ್ಕೆ ಶೋಭಾ ಗುಪ್ತ ಅವರಂತಹ ಅನುಭವಿ ವಕೀಲರು ಬೆನ್ನೆಲುಬಾಗಿ ನಿಂತಿರುವುದು ಪ್ರಕರಣಕ್ಕೆ ಮತ್ತಷ್ಟು ಬಲ ತಂದಿದೆ.
ಇನ್ನು ಮರುತನಿಖೆ ಎನ್ನುವುದು ಹೇಳಿದಷ್ಟು ಸುಲಭವಲ್ಲ. ಹನ್ನೆರಡು ವರ್ಷಗಳ ಹಳೆಯ ಕೇಸ್ ಇದಾಗಿರುವುದರಿಂದ ಭೌತಿಕ ಸಾಕ್ಷ್ಯಗಳು ಎಷ್ಟರ ಮಟ್ಟಿಗೆ ಲಭ್ಯವಿವೆ ಎಂಬುದು ದೊಡ್ಡ ಪ್ರಶ್ನೆ. ಆದರೆ, ಸಾಕ್ಷಿಗಳ ಜೀವ ರಕ್ಷಣೆ ಮತ್ತು ಮರು ವಿಚಾರಣೆಯ ಮೂಲಕ ಸತ್ಯವನ್ನು ಹೊರತೆಗೆಯಲು ಸುಪ್ರೀಂ ಕೋರ್ಟ್ ತೋರಿರುವ ಉತ್ಸುಕತೆ ಹೀಗೆ ಮುಂದುವರೆಯಲಿ ಅನ್ನೋದು ನ್ಯಾಯದ ಪರ ಇದ್ದವರ ಆಶಯ. ಸರ್ಕಾರದ ಮೇಲೆ ಈಗ ಜವಾಬ್ದಾರಿಯ ದೊಡ್ಡ ಹೊರೆ ಇದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಸತ್ಯವನ್ನು ಹೊರಹಾಕುವ ಸಾಹಸವನ್ನು ಸರ್ಕಾರ ಮಾಡಬೇಕಿದೆ.
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಮುಹೂರ್ತ ನಿಗದಿಪಡಿಸಿರುವುದು ಅನ್ಯಾಯಕ್ಕೊಳಗಾದವರಿಗೆ ಸಿಕ್ಕ ಮರುತನಿಖೆಯ ಕ್ಷೀಣ ಆಶಾಕಿರಣ. ವ್ಯವಸ್ಥೆಯ ಕಪಿಮುಷ್ಠಿಯಿಂದ ಪ್ರಕರಣವನ್ನು ಬಿಡಿಸಿ, ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸುವ ಅಗತ್ಯವಿದೆ. ಈಗಿನ ಸುಪ್ರೀಂ ಕೋರ್ಟ್ ಆದೇಶಗಳು ಸೌಜನ್ಯಳ ಆತ್ಮಕ್ಕೆ ಶಾಂತಿ ಸಿಗುವ ದಿನ ಹತ್ತಿರದಲ್ಲಿದೆ ಎಂಬ ಆಶಾವಾದವನ್ನು ಮೂಡಿಸಿವೆ. ತನಿಖೆ ದಾರಿತಪ್ಪಿಸಿದ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಮತ್ತು ನಿಜವಾದ ಹಂತಕರು ಜೈಲು ಸೇರುವುದು ನ್ಯಾಯದಾನದ ಅಂತಿಮ ಗುರಿಯಾಗಲಿ.




