- ಪಿಎಸ್ಎನ್ ಗ್ರೀನ್ ಕಂಪನಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದ ರಾಜೇಂದ್ರ ಸಿಂಗ್
- ಅಧಿಕಾರಿಗಳ ನಿರ್ಲಕ್ಷವೇ ಕಾರ್ಮಿಕನ ಸಾವಿಗೆ ಕಾರಣ ; ದೂರು ದಾಖಲಿಸಿದ ಮಗ
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಜೋರು ಮಳೆಯಾಗುತ್ತಿದ್ದು, ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಇಬ್ಬರು ಸಾವಿನ್ನಪ್ಪಿದ್ದಾರೆ. ಈ ಬೆನ್ನಲ್ಲೇ, ಕೆಂಪೇಗೌಡ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (ಕೆಐಎ) ಆವರಣದಲ್ಲಿರುವ ಚರಂಡಿ ಸ್ವಚ್ಛಗೊಳಿಸುತ್ತಿದ್ದ 52 ವರ್ಷದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾರೆ.
ರಾಜೇಂದ್ರ ಸಿಂಗ್ ಮೃತ ದುರ್ದೈವಿ. ಇವರು ಮೂಲತಃ ಮಧ್ಯಪ್ರದೇಶದ ಮಂಡ್ಲಾದವರು. “ರಾಜೇಂದ್ರ ಸಿಂಗ್ಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಒದಗಿಸದ ಕಾರಣ ಅವರು ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ” ಎಂದು ಕೆಐಎಎಲ್ ಪೊಲೀಸ್ ಠಾಣೆಗೆ ರಾಜೇಂದ್ರ ಸಿಂಗ್ ಮಗ ರವೀಂದ್ರ ಸಿಂಗ್ ದೂರು ನೀಡಿದ್ದಾರೆ.
ರಾಜೇಂದ್ರ ಸಿಂಗ್ ಮತ್ತು ರವೀಂದ್ರ ಸಿಂಗ್ ಇಬ್ಬರು ಪಿಎಸ್ಎನ್ ಗ್ರೀನ್ ಎಂಬ ಕಂಪನಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಂಪನಿಯು ಇವರಿಬ್ಬರಿಗೆ ನಾನಾ ಸ್ಥಳಗಳಲ್ಲಿ ಕೆಲಸ ನಿಯೋಜಿಸುತ್ತಿತ್ತು.
ರವೀಂದ್ರ, ಅವರ ತಂದೆ ಮತ್ತು ಇತರ ಕೆಲವರನ್ನು ವಿಮಾನ ನಿಲ್ದಾಣದ ಆವರಣದಲ್ಲಿರುವ ಚರಂಡಿ ಸ್ವಚ್ಛಗೊಳಿಸಲು ನಿಯೋಜಿಸಲಾಗಿತ್ತು. ಈ ಹಿನ್ನೆಲೆ, ತಂದೆ-ಮಗ ಮೇ 16 ರಂದು ಬೆಂಗಳೂರಿಗೆ ಬಂದಿದ್ದರು.
ಮೇ 19 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಕೆಐಎಯ ಕಾರ್ಗೋ ರಸ್ತೆಯಲ್ಲಿರುವ ಬ್ರಾವೋ-1 ಮುಂಭಾಗದ ಚರಂಡಿ-8 ರಿಂದ ಮಣ್ಣು ಮತ್ತು ಮರದ ಎಲೆಗಗಳನ್ನು ತೆರವುಗೊಳಿಸಲು ಅವರಿಗೆ ಹೇಳಲಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ರಾಜೇಂದ್ರ ಸಿಂಗ್ ಚರಂಡಿ ಒಳಗೆ ಇಳಿದಿದ್ದರು. ಮೇಲೆ ಬರಲಾಗದೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದರು. ಈ ವೇಳೆ, ಮಗ ರವೀಂದ್ರ ತಂದೆಯ ಸಹಾಯಕ್ಕೆ ಧಾವಿಸಿ ಬಂದು ತಂದೆಯನ್ನು ಹೊರಗೆ ತೆಗೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೇ 24ರಂದು ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ, ಇಲ್ಲಿದೆ ನೋಡಿ
ರಾಜೇಂದ್ರ ಅವರನ್ನು ಇತರ ಕಾರ್ಮಿಕರ ಸಹಾಯದಿಂದ ಮೈಲನಹಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ರವೀಂದ್ರ ಅವರ ದೂರಿನ ಆಧಾರದ ಮೇಲೆ ಕೆಐಎಎಲ್ ಪೊಲೀಸರು ಪಿಎಸ್ಎನ್ ಗ್ರೀನ್ನ ಎಂಡಿ ಪಿ.ಎಸ್ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕನ ಸಾವಿಗೆ ಕಾರಣ ಎಂದು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.