ಮೂಡಲ ಸೀಮೆಯ ಹಾಡು | ಕಂಬದ ಬೋಳಿ ದಿಂಬದ ಮ್ಯಾಲೆ ಮಾದಪ್ಪ ನಿಂದು ನೋಡುವ ದೀಪಾವಳಿ ಪರಿಶೆ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಮಾರ್ಲಮಿ ಹಬ್ಬ ಆದ್ಮೇಲ ಊರಿಂದ ಹೊಂಟ್ರ ಗೋಳೂರು, ತಗಡೂರು, ಮೂಗೂರು, ಕುಂತೂರು ಬುಟ್ಟು, ಕೊಳ್ಳೇಗಾಲ ಹೋಗಿ, ಅಲ್ಲಿಂದ ಹನೂರು, ಕೌದಳ್ಳಿ ಕಣಿವೆಗನಿ ತಾಳಬೆಟ್ಟು ತಲುಪಿ, ಏಳು ಬೆಟ್ಟ ಹತ್ತಿ ಏಳು ಬೆಟ್ಟ ಇಳಿದು ನಡುಮಲೆಗೆ ಹೊಯ್ತಿವಿ. ಬಸ್ಸು, ಕಾರು, ಬೈಕಲಿ ಬರವು ಬತ್ತವ. ನಮ್ ಸಣ್ ಸಣ್ ಐಕ್ಳು ಸೈಕಲ್ಲು ಹೊಯ್ತವ…

ಆನುಮಲೆ ಜೇನುಮಲೆ
ಗುಂಜುಮಲೆ ಗುಳುಗುಂಜುಮಲೆ
ಎಪ್ಪತೇಳು ಮಲೆಯಲ್ಲಿ
ತಪ್ಪದೆ ನಲಿದು ನಾಟ್ಯವಾಡುವಂತ
ನಮ್ ಅಪ್ಪಾಜಿ ಮುದ್ದು ಮಾದೇವನ್ ಪಾದಕೊಂದ್ಸಲ
ಉಘೇ ಅನ್ರಪ್ಪೋ
ಉಘೇ… ಉಘೇ….

ನಾವು ವರ್ಷ ವರ್ಷವಿ ದೀವ್ಳ್ಗಗ (ದೀವಳಿಗೆಗೆ, ದೀಪಾವಳಿಗೆ) ಮಾದಪ್ಪುನ್ ಬೆಟ್ಟುಕ್ಕ ರಜಾ  ಹೊಡೆಯಕ್ ಅಂತ ಹೊಯ್ತಿವಿ.

ದೀವ್ಳ್ಗ  ಇನ್ನೊಂದ್ ತಿಂಗ್ಳು ಅದ ಅನ್ನಂಗ ಬೆಟ್ಟುಕ್ಕ ಹೋದ್ರ  ಇನ್ನು ಹಬ್ಬುದ್ ದಿನ್ಕೆ ಊರಿಗೆ ಬರದು. ಆಗ ಅಂದ್ರ ನೆಡ್ಕಂಡೆ ಹೊಯ್ತಿದ್ನು. ನಮ್ಮೂರಿಂದ ನೂರು ಮೈಲಿ ದೂರ ಅದ ಮಾದಪ್ಪುನ್ ಬೆಟ್ಟ. ಮೂರು ಹಗ್ಲು ಮೂರು ರಾತ್ರಿ ಆಯ್ತುದ ಹೋಗಿ ತಲುಪೋಗಂಟ. ಅಲ್ಲಿವರ್ಗ ಹೊಟ್ಟೆಗ ತಿನ್ನಕ ಅಂತ ಹಿಂದುನ್ ಕಾಲದಲ್ಲಿ ಬದನೆಕಾಯಿ ಎಣ್ಗಾಯಿ, ಜೋಳುದ್ ಮುದ್ದ ಮಾಡ್ಕಂಡು ಅಡ್ಕ ತಟ್ಟಲಿ ಬುತ್ತಿ ಕಟ್ಕಂಡು ಹೊಯ್ತಿದ್ರ್ರು. ಆಚ ಬೀದಿಯವರು ಕೊರ್ಬಾಡು- ಉರ್ಬಾಡು ರಾಗಿಮುದ್ದನ ಬುತ್ತಿಗಾಕಳರು. ಬೆಟ್ಟ ತಲ್ಪಗಂಟ ಯಂಗೊ ಹೊಟ್ಟೆ ತ್ಯಾಮ ಮಾಡ್ಕಳಂವು.

ನಾವು ಈಗ್ಲೂ ನೆಡ್ಕಂಡೆ ಹೋಗದು. ಅಂದ್ರ ಈಗ ನಾವು ಬುತ್ತಿ-ಗಿತ್ತಿ ತಕ ಹೋಗಲ್ಲ. ಒಂದ್ ಸಣ್ಣ ಟೆಂಪ ಮಾಡ್ಕತಿವಿ. ಅದ್ರಲ್ಲಿ ಅಡ್ಗ ಭಟ್ಟುನ್ನ ನೇಮಿಸ್ಕತ್ತಿವಿ. ನಾವು ನೆಡ್ಕ ಹೋಗಗಂಟ ನಮ್ಕಿಂತ ಮುಂಚ ಹೋಗಿ ನೀರು ನೆರಳು ಇರಕಡ ನಿಲ್ಸಿ ಅಡ್ಗ ರೆಡಿ ಮಾಡಿರ್ತನ. ಉಣ್ಕಳದು. ಹತ್ನಿಮ್ಸ ಕೂತ್ಕಳದು. ಉಘೇ ಉಘೇ ಮಾದಪ್ಪೋ ಅನ್ಕ ಹೋಗದು ಅಷ್ಟಿಯ ಈಗ.

ಮಾರ್ಲಮಿ ಹಬ್ಬ ಆದ್ಮೇಲ ಊರಿಂದ ಹೊಂಟ್ರ ಗೋಳೂರು, ತಗಡೂರು, ಮೂಗೂರು, ಕುಂತೂರು ಬುಟ್ಟು, ಕೊಳ್ಳೇಗಾಲ ಹೋಗಿ, ಅಲ್ಲಿಂದ ಹನೂರು, ಕೌದಳ್ಳಿ ಕಣಿವೆಗನಿ ತಾಳಬೆಟ್ಟು ತಲುಪಿ, ಏಳು ಬೆಟ್ಟ ಹತ್ತಿ ಏಳು ಬೆಟ್ಟ ಇಳಿದು ನಡುಮಲೆಗೆ ಹೊಯ್ತಿವಿ. ಬಸ್ಸು, ಕಾರು, ಬೈಕಲಿ ಬರವು ಬತ್ತವ. ನಮ್ ಸಣ್ ಸಣ್ ಐಕ್ಳು ಸೈಕಲ್ಲು ಹೊಯ್ತವ.

ಅಮ್ಮೋ ಸುಸ್ತಾಗಲ್ವ ನಿಮ್ಗ, ಅಷ್ಟು ದೂರ ನೆಡ್ಕಂಡ್ ಹೊಯ್ತಿರಲ್ಲ.

ಅಯ್ ನಮ್ಗೆನ್ ಇದ್ ಹೊಸದ. ದಾರಿಯುದ್ದಕ್ಕು ಮಾದಪ್ಪುನ್ನ ನೆನಿಸ್ಕಂಡು, ಹಾಡ್ಗಳ ಹಾಡ್ತಾ ಹೊಯ್ತಿದ್ರ ಹೊತ್ ಹೋಗದೆ ಗೊತ್ತಾಗಲ್ಲ.

ಮುಂಗೊಂಡದ ಮಾದೇವನವರು
ಮುಂದಲ ಪೂಜೆಗೆ ಬರುವಾಗ
ಹಣ್ಣು ಕಾಯಿ ಸಾಂರಾಣಿ ಗವುಲು
ಮಂಜುಗವುದಾವು…

ಬೆಟ್ಟದ ಮಾದೇವ ಬರುವಾಗಾ ಹುಟ್ಟುಗಲ್ಲು ಗುಡಿಗುಟ್ಟಿದವೂ…
ಹುಲಿಯ ಮೇಲೆ ಮದೆವಾ ಬರುವಾ ಮಾಯಾ ನೋಡಣ್ಣ…

ಮುಂಗೋಡದ ಮಾದೇಶ್ವರಗೆ ಶರಣು ಶರಣಯ್ಯ
ಮಾಯಕಾರ ಮಾದೇಶ್ವರಗೆ ಶರಣು ಶರಣಯ್ಯ…

ಕಾಣಿಕೆ ತಂದಿವಿನಿ ಸ್ವಾಮಿ ಕಾಣೆನಲ್ಲೋ ಮಾದೇಶ್ವರನಾ…
ಮಾಯ್ಕಾರ ಮಾದೆವಾ ಬರುವ ಮಾಯಾ ನೋಡಣ್ಣ…
ಗಂಡುಲಿ ಮ್ಯಾಲಿಂದ ಗದ್ದುಗೆಯೂ
ಸ್ವಾಮಿ ಹಿಂಡುಲಿ ಮ್ಯಾಲಿಂದ ಇಳ್ದರಿರೂ…
ಎತ್ತಿದರೋ ದುಂಡು ಮಾದಯ್ಯನಾ
ಗಂಡು ಹುಲಿಯ ಮ್ಯಾಲೆ..

ಹಿಂಗ ಉದ್ದುಕ್ಕು ಹಾಡ್ಕಂಡ್ ಕುಣ್ಕಂಡ್ ಹೊಯ್ತಿವಿ…

ಮಾದಪ್ಪ ಮಾಯ್ಕಾರ ಮಾದಯ್ಯ ಅನ್ನುವವನು ಹೇಗೆ ಮೆರೆದಾನೆ ಅಂದ್ರ್ರೆ…

ಕೂಸು, ಮಾದಪ್ಪ ಅಂದ್ರ ನಿಮ್ಮ್ಹಟ್ಟಿ ಪೋಟಲಿ ತಲೆ ಬೋಳಿಸ್ಕಂಡು ಹುಲಿ ಮ್ಯಾಲ ಕೂತನಲ್ಲ ಶರಣ ಹಂಗಿದ್ನ ಅನ್ಕಂಡಿದಯ. ಹಂಗೆಲ್ಲಕಪ್ಪೋ ಅವುನ್ಗ ಮಾರುದ್ದ ಜಡ, ಅದ್ಕೆ ಅಲ್ವ.

ಮಲ್ಲಿಗೆ ಹೂವ ಮುಡಿದು ಬಾರೋ ಮಲೆಯ ಮಾದಯ್ಯ
ನೀ ಮೆಲ್ಲ ಮೆಲ್ಲಗೆ ಪಾದವನಿಟ್ಟು ಒಲಿದು ಬಾರಯ್ಯ…

ಪದವ ಕಟ್ಟಿ ಹಾಡುವವರು ಎಲ್ಲನು ನೋಡಿಯ ಹಾಡದು. ಮಾದಪ್ಪ ಹಿಂಗಿದ್ನ ಅಂತ ಕೊಂಡಾಡಿರದು. ಸುಳ್ಳು-ಪಳ್ಳು, ಧಗ-ಮೋಸ ಇಲ್ಲಕಪೈ ನಮ್ತಂವು. ಮಾದಪ್ಪ ಮಲ್ಲುಗ ದಂಡೆಯ ಮುಡ್ಕಂಡ್ ಬತ್ತಿದ್ರ ಯಂಗ್ ಕಾಣ್ತಿದ್ನ ಅಂತ ನೆಪ್ ಮಾಡ್ಕಂಡ್ರೆ ಆಹಾ… ಸಿವಾ ಸಿವಾ.. ನಮ್ಮಪ್ಪ. ಉಘೇ ಮಾದಪ್ಪ… ಉಘೇ ಉಘೇ…

ನಾವು ಚಿಕ್ಕವರಿದ್ದಾಗ ನಮ್ಮ  ತವಸರಯ್ಯ ಹೇಳ್ತಿದ್ನಲ್ಲ ಹಾಡ. ಮಾದಯ್ಯನವರು ಮಾರುದ್ದ ಕೂದುಲ್ನ ಎತ್ತಿ, ನೆತ್ತಿನ ಕಟ್ಬುಟ್ರ ಒಳ್ಳೆ ನಾಗರ ಹೆಡೆ ಥರ ಇರದುಕಪ್ಪೋ ಅಂತ…

ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ
ನಿಮ್ಮ ನೆತ್ತಿ ಮ್ಯಾಲೆ ನಾಗರ ಜಡೆ ನಲಿದು ಬಾರಯ್ಯ…

ಹಿಂಗ ಪರಿಶೆ ಮೂರ್ ದಿಕ್ಕಿಂದ್ಲು ತಾಳಬೆಟ್ಟಕ್ಕ ಬಂದು ಬೆಟ್ಟ ಹತ್ಕ ಹೊಯ್ತಿದ್ರ ಮಾದಪ್ನಾದುರೂವಿ.

ಕಂಬದ ಬೋಳಿ ದಿಂಬದ ಮ್ಯಾಲೆ ನಿಂದು ನೋಡಯ್ಯ
ನಿಮ್ಮ ಪಡುವಾಲ ಪರಿಶೆಯು ಬರುವ ಚಂದವ ನೋಡಯ್ಯ…

ತನ್ನ ನೋಡಕ ಬರ ಪರ್ಶನ ಮಾದಪ್ಪ ಕಂಬದಬೋಳಿ ಮ್ಯಾಲ ನಿಂತ್ಕಂಡು ನೋಡಿ ಅವರನ್ನ ಮನಸಾರೆ ಹರಸುತ್ತಾನಂತೆ!

ಅಮೈ, ಕಂಬದಬೋಳಿ ಅಂದ್ರ ತಪಸ್ಸರೆತವು ಅಯ್ತಲ್ಲ ಅದಿಯಲ್ವ; ಗುಡ್ಡ.

ಹೂಂಕಪ ಅದಿಯ. ನೋಡಿದಯ!

ನಾನೊಂದ್ಸಲ ಹತ್ತಿನಿಕನತಕ ಆ ಬೆಟ್ಟುಕ್ಕ. ಒಂದ್ಸಲ ನಮ್ಮೂರ ಕುರಿಮಾದ ಕರ್ಕ ಹೋಗಿದ್ನ. ಆ‌ ಅಲ್ಲಿಗ ಹೋಗ ಹಾದಿಲಿ ಆ ಹಾಲಳ್ಳಗುಂಟ ಹೋಯ್ತಿದ್ರ, ಆಹಾ ಆ ಭೂಮ್ತಾಯಿ ಚೆಲುವಿನ, ಅವಳ ಕಣ್ಣುಕುಕ್ಕ ಸೌಂದರ್ಯವ ನೋಡಕ ಎರಡು ಕಣ್ಣು ಸಾಲ್ದು.

ಆ ಕಂಬದಬೋಳಿ ಬೆಟ್ಟದ ಮ್ಯಾಲ ನಿಂತ್ಕ ನೋಡುದ್ರ ಸುತ್ತ ಎಪ್ಪತ್ತೇಳು ಮಲೆಗಳು ಕಾಣ್ತವ. ನಾವು ಹೋಗಿದ್ವಲ್ಲ ಅವತ್ತು ನಮ್ ಎದುರ್ಗ ಇದ್ದ ಬೆಟ್ಟದಲ್ಲಿ  ಮಳ ಬಂದ್ಬುಡ್ತು. ಆ ಮಳ ಹೇಗೆ  ಕಾಣುತ್ತಿತ್ತು ಅಂದ್ರ: ಮಾದಪ್ಪುನ್ ತಲ ಮ್ಯಾಲ ಒಳ್ಳೆ ಮಲ್ಗ; ಮಲ್ಗ ಹೂವು ಸುರಿದಂಗೆ ಕಾಣ್ತಾ ಇತ್ತು.

ಚೆಲ್ಲಿದರು ಮಲ್ಲಿಗೆಯ ಬಾನಾಸೂರೇರಿಮ್ಯಾಗೆ…
ಅಂದಾದ ಚಂದಾದ ಮಾಯ್ಕಾರ ಮಾದೇವನಿಗೆ…

ಸುಮ್ನೆ ಸುಮ್ನೆ ಹೇಳಿದರಪ್ಪ; ನೋಡಿರವ್ರೆ ಕಪ ಹೇಳಿರದು. ಇಂಥ ಒಂದ್ ಪದ ಕಟ್ಟಕಾದ್ದ ನಮ್ ಕೈಲಿ.

ದೀಪಾವಳಿ ತೇರಿನ ದಿನ ಬೆಟ್ಟದಲ್ಲಿ ಕಾಲು ಮಡ್ಗಕಾದ್; ಹೆಣ್ಣೇಳು ಕೋಟಿ ಗಂಡೇಳು ಕೋಟಿ ಭಕ್ತರು, ಮಕ್ಕ-ಮರಿ, ಗುಡ್ಡರು, ಶರಣರು, ನೀಲಗಾರರು, ಒಳ್ಳೆವರು, ಕೆಟ್ಟವರು, ಯಾವ ಜಾತ್ಯೋ, ಯಾವ ಧರ್ಮೋ, ಯಾವ್ ಬೇಧಭಾವವೂ ಇಲ್ಲ. ಎಲ್ಲ ಬಂದು ನಡುಮಲೆಯಲ್ಲಿ ಸೇರಿ ಎಲ್ಲರೂ ಮಾದಪ್ಪುನ ಪ್ರೇಮದಲ್ಲಿ ಕರೆಯುವವರೆ.

ಕೂಗಿ ಕೂಗಿ ಕರೆದೇವಲ್ಲೋ ಕುಣಿಯುತ ಬಾರಯ್ಯ
ನಮ್ ಕೂಗಿನ ದನಿಗೆ ನವಿಲಿನಂಗೆ ನಲಿದು ಬಾರಯ್ಯ…

ಕರಿಯ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ನೀವು ಭಾರೀ ಬರಗನ ಏರಿಕೊಂಡು ನಲಿದು ಬಾರಯ್ಯ…

ಬಂಕಾಪುರದ ದುರಂಹಕಾರಿ ಶ್ರವಣ ದೊರೆಯ ನಾಶ ಮಾಡಿ ಅವನ ಸಂಕೋಲೆಯಿಂದ ಶರಣರನ್ನು ಬಿಡಿಸಿದ ಮಾದಪ್ಪ, ಬೇವನ್ಹಟ್ಟಿ ಕಾಳಮ್ಮನ ಸೊಕ್ಕು ಮುರುದು ಜನರ ಪ್ರಾಣ ಉಳಿಸಿದಾತ, ಕೊಂಗರಸನಿಗೆ ಬುದ್ದಿ ಕಲಿಸಿ- ಸಂಕವ್ವನ ಸೆರೆ ಬಿಡಿಸಿದ ಮಹಾತ್ಮಲೆಯನ ನೆನೆದುಕೊಳ್ಳುವುದೆ ಪುಣ್ಯದ ಕೆಲಸ.

ನಮ್ಗ ದೀಪಾವಳಿ ಅಂದ್ರ ಇಂಥ ಮಾದಪ್ಪನ್ನ ನೆನ್ಕಳದಿನ!
ನಮ್ಮನ್ನೆಲ್ಲ ಕಾಪಾಡುವ ನಮ್ಮಪ್ಪಾಜಿ ಮಾದೇವ ಏಳುಮಲೆ ಎತ್ತಯ್ಯನ ಕೊಂಡಾಡ ದಿನ!

ನೀನು ಏನೇ ಅನ್ನು ನಮ್ ಜನ ಮಾದಪ್ಪುನ್ ಕಂಡ್ರ ಪ್ರಾಣ ಬುಡುಸ್ಕತ್ತರ…!

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯ
ಎದ್ದೊಂದು ಘಳಿಗೆ ನೆನೆದೇನೋ.

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಮಾದಪ್ಪ…
ಕಲ್ಲು ಕಾವೇರಿ ಕಪನಿಯ ನೆನ್ದಾರೆ
ಹೊತ್ತಿದ್ದ ಪಾಪಾ ಪರಿಹಾರ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಗೋಳೂರ ನಾರಾಯಣಸ್ವಾಮಿ
ಗೋಳೂರ ನಾರಾಯಣಸ್ವಾಮಿ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೋಳೂರಿನವರು. ಜನಪದ ಸಂಸ್ಕೃತಿ ಬಗೆಗೆ ಅಪಾರ ಪ್ರೀತಿ. ಪತ್ರಕರ್ತ, ಮೇಷ್ಟ್ರು, ರೈತ. ಸದ್ಯ ಕಾಡಿನ ಜನಪದ ಕಾವ್ಯಗಳ ಅಧ್ಯಯನ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಹುಲಿ ಉಗುರು – ಕೆಲವು ರಹಸ್ಯಗಳು ಮತ್ತು ಹಲವು ಮೂಢನಂಬಿಕೆ

ಹುಲಿಯುಗುರು ಎಲ್ಲ ಉಗುರಿನಂತಲ್ಲ. ಅದರ ಒಳಭಾಗದಲ್ಲಿ ಮೂಳೆಯಂತಹ ಗಟ್ಟಿ ಭಾಗವಿರುತ್ತದೆ. ಈ...