ಈ ದಿನ ಸಂಪಾದಕೀಯ | ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಶಿಫಾರಸು ಅನಾಹುತಕಾರಿ

Date:

ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನಿದು. ಈ ಕಾನೂನನ್ನು ಸುಪ್ರೀಂ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕರಾಳ ಕಾನೂನನ್ನು ರದ್ದು ಮಾಡುವ ಕುರಿತು ವಾದ ಮಂಡನೆಯನ್ನು ಆಲಿಸುವ ಇಂಗಿತ ನೀಡಿದೆ ಕೂಡ.

ರಾಜದ್ರೋಹಕ್ಕೆ ಶಿಕ್ಷೆ ನೀಡುವ ಕಾನೂನನ್ನು ಉಳಿಸಿಕೊಳ್ಳಬೇಕಷ್ಟೇ ಅಲ್ಲದೆ, ಹೆಚ್ಚಿನ ಶಿಕ್ಷೆಯನ್ನು ನಿಗದಿ ಮಾಡಿ ಬಲಪಡಿಸಬೇಕು ಎಂದು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ! ಸ್ವತಂತ್ರ ಸಾರ್ವಭೌಮ ಗಣರಾಜ್ಯವನ್ನು  ಹಿಂದಕ್ಕೆ ಎಳೆದೊಯ್ಯುವ ಪ್ರತಿಗಾಮಿ ಶಿಫಾರಸು ಇದು.  

ವ್ಯಕ್ತಿಯೊಬ್ಬ ಬಾಯಿಮಾತಿನಲ್ಲಿ ಅಥವಾ ಬರೆಹದಲ್ಲಿ ಅಥವಾ ಸಂಕೇತಗಳಲ್ಲಿ, ಅಥವಾ ದೃಶ್ಯ ಪ್ರಾತಿನಿಧ್ಯದಲ್ಲಿ ವಿಧಿದ್ವಾರಾ ಸ್ಥಾಪಿಸಲಾಗಿರುವ ಭಾರತ ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅಸಂತೋಷ ಉಂಟು ಮಾಡುವುದು ಅಥವಾ ಅಂತಹ ಪ್ರಯತ್ನ ಮಾಡುವುದು ರಾಜದ್ರೋಹ. ಭಾರತೀಯ ಅಪರಾಧ ಸಂಹಿತೆಯ 124 ಎ ಸೆಕ್ಷನ್ ಈ ವ್ಯಾಖ್ಯೆಯನ್ನು ನೀಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು 130 ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತ ಜಾರಿಗೆ ತಂದಿದ್ದ ಕಾನೂನು.

ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನು. ಈ ಕಾನೂನಿನ ಜಾರಿಯನ್ನು ಸುಪ್ರೀಮ್ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕರಾಳ ಕಾನೂನನ್ನು ರದ್ದು ಮಾಡುವ ಕುರಿತು ವಾದ ಮಂಡನೆಯನ್ನು ಆಲಿಸುವ ಇಂಗಿತ ನೀಡಿದೆ ಕೂಡ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂತಹ ಹಿನ್ನೆಲೆಯಿದ್ದಾಗಲೂ ರಾಜದ್ರೋಹದ ಕಾನೂನನ್ನು ಉಳಿಸಿಕೊಂಡು ಅದನ್ನು  ಇನ್ನಷ್ಟು ಬಲಪಡಿಸುವ ಅರ್ಥಾತ್ ಕರಾಳಗೊಳಿಸುವ ಶಿಫಾರಸನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವುದು ಅತ್ಯಂತ ದುರದೃಷ್ಟಕರ. ನೆಲದ ಅತ್ಯುನ್ನತ ನ್ಯಾಯಾಲಯ ವರ್ಷದ ಹಿಂದೆ ವ್ಯಕ್ತಪಡಿಸಿದ ಆತಂಕಗಳನ್ನು ಕಾನೂನು ಆಯೋಗ ನಿರ್ಲಕ್ಷಿಸುವುದಾದರೂ ಹೇಗೆ? ವಸಾಹತುಶಾಹಿ ಕಾನೂನಿದು ಎಂಬ ಆಕ್ಷೇಪವನ್ನೂ ಆಯೋಗ ಲೆಕ್ಕಕ್ಕೆ ಇಟ್ಟಿಲ್ಲ. ನಮ್ಮ ಇಡೀ ಕಾನೂನು ವ್ಯವಸ್ಥೆಯ ಹಂದರವೇ ವಸಾಹತುಶಾಹಿಯ ಬಳುವಳಿ ಎಂಬ ಮೇಲ್ ಸ್ತರದ ಹೊಣೆಗೇಡಿ ವಾದವನ್ನು ಮುಂದೆ ಮಾಡಿದೆ.

ಮಾವೋವಾದಿ ತೀವ್ರವಾದ, ಭಯೋತ್ಪಾದನೆ, ವಿಚ್ಛಿದ್ರಕಾರಿ ಆಂದೋಳನಗಳು ಹಾಗೂ ಈಶಾನ್ಯ ಭಾರತದಲ್ಲಿ ಜನಾಂಗೀಯ ಘರ್ಷಣೆಗಳ ಪರಿಸ್ಥಿತಿಯನ್ನು ಆಯೋಗವು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಬಳಸಿಕೊಂಡಿದೆ. ದೇಶದ ಆಂತರಿಕ ಭದ್ರತೆಗೆ ಬೆದರಿಕೆಗಳಿವೆ ಎಂದಿದೆ.

‘ದೇಶಹಿತಕ್ಕೆ ಬಾಧೆ ಒಡ್ಡುವಂತೆ ನಾಗರಿಕ ಸಮಾಜವನ್ನು (ಸಿವಿಲ್ ಸೊಸೈಟಿ) ಎತ್ತಿಕಟ್ಟುವ, ಬುಡಮೇಲು ಮಾಡುವಂತಹ ಶಕ್ತಿಗಳು’ ಮತ್ತು ‘ಅದೃಶ್ಯ ಸೇನೆಗಳ ಸಮರ’ ಕುರಿತು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಅಜಿತ್ ಡೋವಲ್ ಈ ಹಿಂದೆ ನೀಡಿದ್ದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಮತ್ತು ಟೀಕೆಗೆ ಗುರಿಯಾಗಿತ್ತು. ಜನತಂತ್ರ ವಿರೋಧಿ, ನಾಗರಿಕ ಹಕ್ಕುಗಳ ದಮನಕಾರಿ ಎಂಬ ಖಂಡನೆಗೆ ಒಳಗಾಗಿದ್ದ ಡೋವಲ್ ಮಾತುಗಳನ್ನು ಆಯೋಗವು ಎತ್ತಿ ಹಿಡಿದು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಒದಗಿಸಿರುವುದು ಆಘಾತಕಾರಿ.  

ಪಾಕಿಸ್ತಾನ ಸಾಕಿದ್ದ ತಾಲಿಬಾನಿ ಶಕ್ತಿಗಳು ಇದೀಗ ತನ್ನ ಸೃಷ್ಟಿಕರ್ತನನ್ನೇ ನುಂಗಲು ಬಾಯಿ ತೆಗೆದಿವೆ. ಪಾಕಿಸ್ತಾನ ಎದುರಿಸಿರುವ ಆಂತರಿಕ ಭದ್ರತೆಯ ಅಪಾಯಗಳಿಗೆ ಹೋಲಿಸಿದಲ್ಲಿ ಭಾರತದ್ದು ಸಮಸ್ಯೆಯೇ ಅಲ್ಲ. ಹೀಗಿದ್ದಾಗಲೂ ರಾಜದ್ರೋಹದ ಕಾನೂನನ್ನು ಅಲ್ಲಿನ ಲಾಹೋರ್ ಹೈಕೋರ್ಟು ಮೊನ್ನೆ  ಸಂವಿಧಾನಬಾಹಿರ ಎಂದು ಸಾರಿತು. ಪಾಕಿಸ್ತಾನದ ಸುಪ್ರೀಂ ಕೋರ್ಟು ಲಾಹೋರ್ ಹೈಕೋರ್ಟಿನ ಈ ತೀರ್ಪನ್ನು ಎತ್ತಿ ಹಿಡಿಯುತ್ತದೆಯೇ ಎಂದು ಕಾದು ನೋಡಬೇಕಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಈ ಕಾನೂನನ್ನು ಕೊಟ್ಟವರು ಬ್ರಿಟಿಷರು. ಅವರು ಈ ಕಾನೂನನ್ನು ರದ್ದು ಮಾಡಿ ಹದಿನಾಲ್ಕು ವರ್ಷಗಳಾದವು.

‘ಸಾರ್ವಜನಿಕ ಅವ್ಯವಸ್ಥೆ ಉಂಟು ಮಾಡುವಂತಹ ಹಿಂಸೆಯನ್ನು ಪ್ರಚೋದಿಸುವ ಪ್ರವೃತ್ತಿ ಎಂಬ ಪದಗಳನ್ನು ರಾಜದ್ರೋಹದ ವ್ಯಾಖ್ಯೆಗೆ ಸೇರಿಸಬೇಕು. ವಾಸ್ತವವಾಗಿ ಹಿಂಸೆಯನ್ನು ಉಂಟು ಮಾಡುವುದಿರಲಿ, ಹಿಂಸೆ ಉಂಟು ಮಾಡುವ ಒಲವನ್ನು ಹೊಂದಿರುವುದೂ ರಾಜದ್ರೋಹವೇ’ ಎಂಬ ಆಯೋಗದ ವಾದ ಅನಾಹುತಕಾರಿ. ಜನತಾಂತ್ರಿಕ ವ್ಯವಸ್ಥೆಗೆ ಮಾರಕ. ಸರ್ವಾಧಿಕಾರೀ ಆಡಳಿತ ವ್ಯವಸ್ಥೆಗಳು ಮಾತ್ರವೇ ಹೊಂದಿರಬಹುದಾದ ಜನ ದಮನ ಉದ್ದೇಶದ ದುಷ್ಟತನ.

ಕಳೆದ ವರ್ಷ ಸುಪ್ರೀಮ್ ಕೋರ್ಟಿನ ಮುಂದೆ ಈ ಕಾನೂನನ್ನು ಮೋದಿ ಸರ್ಕಾರ ತೀವ್ರವಾಗಿ ಸಮರ್ಥಿಸಿಕೊಂಡಿತ್ತು. ಆದರೆ ಕೋರ್ಟು ಚಾಟಿ ಬೀಸಿದ ನಂತರ ದಾರಿಗೆ ಬಂದಿತ್ತು. ಮರುವಿಮರ್ಶೆ ಮಾಡುವುದಾಗಿ ನಿವೇದಿಸಿಕೊಂಡಿತ್ತು. ಸೂಕ್ತ ವೇದಿಕೆಯಿಂದ  ಮರುವಿಮರ್ಶೆಗೆ ಒಳಪಡಿಸುವ ತನಕ ಈ ಕಾನೂನಿನ ಕುರಿತ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿತ್ತು.

ಮರುವಿಮರ್ಶೆ ಮಾಡುತ್ತೇನೆಂದು ಸುಪ್ರೀಮ್ ಕೋರ್ಟಿಗೆ ನಿವೇದಿಸಿಕೊಂಡ ಮೋದಿ ಸರ್ಕಾರ ಕಾಲಾವಕಾಶ ಖರೀದಿ ತಂತ್ರವನ್ನು ಅನುಸರಿಸಿತೇ ಎಂಬ ಸಂಶಯ ಈಗ ಮೂಡುವುದೇ ಆದರೆ ಅದು ಸ್ವಾಭಾವಿಕ. ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತದ ಆವರಣಗಳು ಕುಗ್ಗತೊಡಗಿವೆ. ಹಿಂದುತ್ವವಾದಿ ಶಕ್ತಿಗಳಿಂದ ತೀವ್ರ ಆಕ್ರಮಣಕ್ಕೆ ಒಳಗಾಗುತ್ತಿವೆ.

ಇಂತಹ ಕಳವಳದ ಕಾಲಘಟ್ಟದಲ್ಲಿ ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಕಾನೂನು ಆಯೋಗದ ಶಿಫಾರಸು ಅತ್ಯಂತ ಆತಂಕಕಾರಿ. ಸಂಸತ್ತಿನ ಕಡೆಗೂ ಆಸೆಗಣ್ಣಿನಿಂದ ನೋಡುವಂತಿಲ್ಲ. ನಾಗರಿಕ ಸ್ವಾತಂತ್ರ್ಯವನ್ನು ಅದು ಎತ್ತಿ ಹಿಡಿದೀತು ಎಂದು ನೆಚ್ಚುವಂತಿಲ್ಲ.

ಉಳಿದಿರುವ ಏಕಮಾತ್ರ ಆಶಾಕಿರಣ ಸುಪ್ರೀಮ್ ಕೋರ್ಟು. ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರದ ಆಶ್ವಾಸನೆಯ ಮೇರೆಗೆ ತಡೆ ಹಿಡಿದಿದ್ದ ವಿಚಾರಣೆಯನ್ನು ತಾನು ಮುಂದುವರೆಸಬೇಕು. ಜನವಿರೋಧಿ ಕಾನೂನನ್ನು ಅಂತ್ಯಗೊಳಿಸಬೇಕು ಇಲ್ಲವೇ ಈ ಉಗ್ರ ಉರಗದ ಹಲ್ಲಿನ ತಳದ ವಿಷದ ಸಂಚಿಯನ್ನು ಕಿತ್ತೆಸೆಯಬೇಕು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬೆಂಗಳೂರು ಉತ್ತರಕ್ಕೆ ಬೆಂಕಿ ಹಚ್ಚದಿರಲಿ ಶೋಭಾ ಕರಂದ್ಲಾಜೆ

ಬಿಜೆಪಿ ನಾಯಕರು ಇನ್ನಾದರೂ ಇಂತಹ ಕೆಡುಕಿನ ರಾಜಕಾರಣ ಮಾಡುವುದು ಬಿಟ್ಟು, ಜನರ...

ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

ಎಲ್ಲ ಕ್ಷೇತ್ರವನ್ನೂ ಪುರುಷರೇ ಆವರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷ, ಸರ್ಕಾರದೊಳಗೆ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ...

ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ

ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ....

ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

ಹಬ್ಬಗಳು ಎಲ್ಲ ಕಾಲಕ್ಕೂ ಉಳ್ಳವರ ಸಂಭ್ರಮ-ಸಂತೋಷವನ್ನು ಹೆಚ್ಚು ಮಾಡುತ್ತವೆ. ಬಡವರನ್ನು ನೋಯಿಸಿ...