- ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ ಕಾಗೋಡು ಪುತ್ರಿ ರಾಜನಂದಿನಿ
- ಇದರ ಹಿಂದೆ ಶಾಸಕ ಹರತಾಳು ಹಾಲಪ್ಪ ತಂತ್ರ ಇರಬಹುದು: ಆರೋಪ
ಇಂತಹ ರಾಜಕೀಯ ಸನ್ನಿವೇಶದಲ್ಲಿ ನನ್ನ ಮಗಳು (ರಾಜನಂದಿನಿ) ಬಿಜೆಪಿ ಸೇರಲು ಹೋಗಿದ್ದಾಳೆ ಎಂದರೆ ನನ್ನ ಎದೆಗೆ ಚೂರಿ ಹಾಕಿದಂಗೆ ಆಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬುಧವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಕಾಗೋಡು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ವಿಚಾರವಾಗಿ ಮಾಧ್ಯಮಗಳಿಗೆ ಕಾಗೋಡು ತಿಮ್ಮಪ್ಪನವರು ಪ್ರತಿಕ್ರಿಯಿಸಿ, “ಅವಳು (ರಾಜ ನಂದಿನಿ) ಈ ರೀತಿ ಮಾಡುತ್ತಾಳೆ ಎಂಬುದನ್ನು ಕನಸಲ್ಲೂ ನಾನು ಯೋಚಿಸಿರಲಿಲ್ಲ. ಇದರ ಹಿಂದೆ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು” ಎಂದು ಆರೋಪಿಸಿದರು.
“ರಾಜಕಾರಣದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಆದ್ದರಿಂದ ಅದೇ ಬದ್ಧತೆಯಿಂದಲೇ ನಾವು ನಡೆದುಕೊಂಡಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತಂದ ಆ ಸಂತೋಷ, ನೆಮ್ಮದಿ ನನಗೆ ಈಗಲೂ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜಕೀಯ ನಿವೃತ್ತಿ ಘೋಷಿಸಿದ ಸಚಿವ ಅಂಗಾರ
“ನನ್ನ ಮಗಳು ಇಂತಹ ಕೆಲಸ ಮಾಡಬಾರದಿತ್ತು. ಇದು ದೌರ್ಭಾಗ್ಯ. ಈ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಈಗ ವಿಷಯ ಗೊತ್ತಾಯಿತು. ನಾನಂತೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಕಾಂಗ್ರೆಸ್ ಪರವಾಗಿಯೇ ಇದ್ದೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
ಕಾಂಗ್ರೆಸ್ನಿಂದ ಟಿಕೆಟ್ ವಂಚಿತವಾಗಿದ್ದರಿಂದ ರಾಜನಂದಿನಿ ಬಿಜೆಪಿ ಸೇರಿದ್ದಾರೆಯೇ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನನ್ನ ಮಗಳು ಎಂದೂ ಟಿಕೆಟ್ ವಿಚಾರವಾಗಿ ಬೇಸರ ಹೇಳಿಕೊಂಡಿಲ್ಲ. ಒಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರ ಹತ್ತಿರ ಮಗಳನ್ನು ಕರ್ಕೊಂಡು ಹೋಗಿದ್ದೆ” ಎಂದರು.