ದೇಶಾದ್ಯಂತ ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಕುರಿತು ತಾವು ಆಡಿದ್ದ ಮಾತುಗಳನ್ನು ಟಿಆರ್ಪಿ ಗಿಟ್ಟಿಸುವ ಸಲುವಾಗಿ ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡುತ್ತಿವೆ ಎಂದು ಬಾಲಿವುಡ್ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼಜೋಗಿರಾ ಸಾರಾ ರಾ ರಾʼ ಸಿನಿಮಾ ಮೇ 26ರಂದು ತೆರೆಗೆ ಬಂದಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು.
ಈ ಸಂದರ್ಶನದಲ್ಲಿ ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ʼದಿ ಕೇರಳ ಸ್ಟೋರಿʼ ಚಿತ್ರವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಖಂಡಿಸಿರುವ ಬಗ್ಗೆ ಉಲ್ಲೇಖಿಸಿ ನಿರೂಪಕರು ನವಾಜುದ್ದೀನ್ ಸಿದ್ದಿಕಿಗೆ ಪ್ರಶ್ನೆ ಹಾಕಿದ್ದರು. ʼದಿ ಕೇರಳ ಸ್ಟೋರಿʼ ನಿಷೇಧದ ಕುರಿತ ಪ್ರಶ್ನೆಗೆ ಉತ್ತಿರಿಸಿದ್ದ ನವಾಜುದ್ದೀನ್, “ಯಾವುದೇ ಚಿತ್ರ ಅಥವಾ ಕೃತಿ ಯಾರಿಗಾದರೂ ನೋವುಂಟು ಮಾಡುತ್ತಿದ್ದರೆ, ಅದು ತಪ್ಪು. ನಾವು, ಪ್ರೇಕ್ಷಕರನ್ನು ನೋಯಿಸುವ ಸಲುವಾಗಿ ಅಥವಾ ಅವರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಸಲುವಾಗಿ ಸಿನಿಮಾಗಳನ್ನು ಮಾಡುವುದಿಲ್ಲ” ಎಂದಿದ್ದರು.
ಆದರೆ, ನವಾಜುದ್ದೀನ್ ʼದಿ ಕೇರಳ ಸ್ಟೋರಿʼ ಚಿತ್ರದ ಮೇಲೆ ನಿರ್ಬಂಧ ಹೇರಿರುವುದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ಮತ್ತು ಯುಟ್ಯೂಬ್ ಮಾಧ್ಯಮಗಳು ತಿರುಚಿದ ವರದಿಯನ್ನು ಭಿತ್ತರಿಸಿದ್ದವು. ಈ ವರದಿಗಳನ್ನೇ ನಂಬಿಕೊಂಡ ಕೆಲವು ನೆಟ್ಟಿಗರು ನಟನ ಮೇಲೆ ಮುಗಿಬಿದ್ದಿದ್ದರು.
ಮಾಧ್ಯಮಗಳು ತಿರುಚಿದ ಹೇಳಿಕೆಯನ್ನು ಆಧರಿಸಿ ಸುದ್ದಿ ಭಿತ್ತರಿಸಿವೆ ಎಂಬುದು ತಮ್ಮ ಗಮನಕ್ಕೆ ಬರುತ್ತಲೇ ಟ್ವೀಟ್ ಮಾಡಿರುವ ನವಾಜುದ್ದೀನ್, “ವೀಕ್ಷಣೆಯನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಈ ರೀತಿ ಸುಳ್ಳು ಸುದ್ದಿಯನ್ನು ಹರಡುವುದನ್ನು ದಯವಿಟ್ಟು ನಿಲ್ಲಿಸಿ. ಇದು ಟಿಆರ್ಪಿಗಾಗಿ ಮಾಡುವ ಕೀಳುಮಟ್ಟದ ಕೆಲಸ. ಯಾವುದೇ ಚಿತ್ರವನ್ನೂ ನಿಷೇಧಿಸುವ ಬಗ್ಗೆ ನಾನು ಎಂದಿಗೂ ಮಾತನಾಡಿಲ್ಲ. ಚಿತ್ರಗಳನ್ನು ನಿಷೇಧಿಸುವುದನ್ನು ನಿಲ್ಲಿಸಿ. ಸುಳ್ಳು ಸುದ್ದಿ ಹಬ್ಬಿಸುವುದನ್ನೂ ನಿಲ್ಲಿಸಿ” ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅನುರಾಗ್ ಕಶ್ಯಪ್ ʼದಿ ಕೇರಳ ಸ್ಟೋರಿʼ ಚಿತ್ರವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ವಿರೋಧಿಸಿದ್ದರು. ಚಿತ್ರದ ಪ್ರದರ್ಶನಕ್ಕೆ ಬಂಗಾಳದಲ್ಲಿ ನಿರ್ಬಂಧ ಹೇರಿರುವುದನ್ನು ಖಂಡಿಸಿ ಟ್ವೀಟ್ ಮಾಡಿದ್ದ ಅನುರಾಗ್, “ನೀವು ಆ ಸಿನಿಮಾವನ್ನು ಒಪ್ಪುತ್ತಿರೋ, ಇಲ್ಲವೋ, ಆ ಸಿನಿಮಾ ಷಡ್ಯಂತ್ರದ ಭಾಗವಾಗಿರಲಿ ಅಥವಾ ಷಡ್ಯಂತ್ರಕ್ಕೆ ತಿರುಗೇಟು ನೀಡುವ ಕಥಾಹಂದರವನ್ನೇ ಹೊಂದಿರಲಿ, ಆಕ್ರಮಣಕಾರಿ ಪರಿಭಾಷೆಯನ್ನೇ ಹೊಂದಿರಲಿ. ಆದರೆ, ಚಿತ್ರವೊಂದನ್ನು ನಿಷೇಧಿಸುವುದು ತರವಲ್ಲ” ಎಂದಿದ್ದರು.
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತ ಮೂಡಿಬಂದಿರುವ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಮೇ 8ರಂದು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತ್ತು. ಚಿತ್ರದ ನಿಷೇಧವನ್ನು ಪ್ರಶ್ನಿಸಿ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರದ ನಿಷೇಧದ ಆದೇಶಕ್ಕೆ ತಡೆ ನೀಡಿದೆ.