ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಹುರುಪು ನೀಡಲು ಸಜ್ಜಾಗಿರುವ ಕರ್ನಾಟಕ ಸರ್ಕಾರ, ಖ್ಯಾತ ನಟ ರಿಷಬ್ ಶೆಟ್ಟಿ ಅವರನ್ನು ‘ರಾಯಭಾರಿ’ಯನ್ನಾಗಿ ನೇಮಿಸಲು ಚಿಂತನೆ ನಡೆಸಿದೆ. ನಿನ್ನೆ (ಜೂ.19) ಬೆಂಗಳೂರಿನಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಉನ್ನತ ಮಟ್ಟದ ಸಭೆಯಲ್ಲಿ ರಿಷಬ್ ಶೆಟ್ಟಿ ಪಾಲ್ಗೊಂಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧ ಚರ್ಚೆಗಳಿಗೆ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ಬಿಸಿ ಬಿಸಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಾವಳಿ ಭಾಗದಲ್ಲಿ ಸಿಆರ್ಝಡ್ (CRZ) ಮತ್ತು ಅರಣ್ಯ ಇಲಾಖೆಯ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು 15-20 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಹೂಡಿಕೆದಾರರಿಗೆ ಸರಳ ಮಾರ್ಗಗಳನ್ನು ಸೃಷ್ಟಿಸುವುದು ಮತ್ತು ಅನುಮೋದಿತ 45 ಯೋಜನೆಗಳ ಮೂಲಕ 4,500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ. ರಿಷಬ್ ಶೆಟ್ಟಿ ಅವರು ಕರಾವಳಿಯ ಜಾನಪದ ಕಲೆ ಮತ್ತು ಚಿತ್ರೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡುವಂತೆ ಈ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದ ಈ ಚಿಂತನೆಗೆ ಪ್ರಗತಿಪರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ಅವರ ‘ಬಲಪಂಥೀಯ ಒಲವು’ ಇದಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.
“ಅಧಿಕಾರಿಗಳು ಮತ್ತು ಸಚಿವರಿದ್ದ ಸಭೆಯಲ್ಲಿ ರಿಷಬ್ ಶೆಟ್ಟಿಯವರ ಉಪಸ್ಥಿತಿ ಪ್ರಶ್ನಾರ್ಹ. ಕಾಂಗ್ರೆಸ್ ಸರ್ಕಾರ ಇವರನ್ನೇ ಯಾಕೆ ವಿಶೇಷವಾಗಿ ಆಹ್ವಾನಿಸಿದೆ?” ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ಜೊತೆಗೆ ತುಳುನಾಡಿನ ಯುವಜನರಿಗೆ ಮಂಗಗಳಂತೆ ಸಾಮಾಜಿಕ ಜಾಲತಾಣದಲ್ಲಿ ಆಡುವುದನ್ನು ನಿಲ್ಲಿಸಿ, ಸ್ವಲ್ಪ ಗಂಭೀರವಾಗಿ ಸರಕಾರದ, ಜನಪ್ರತಿನಿಧಿಗಳ ನಡೆಗಳನ್ನು ಗಮನಿಸಿ, ಎಂದು ಕರೆ ನೀಡಿದ್ದಾರೆ.
ಬಿಜೆಪಿಯ ಆರಾಧಕರಾದ ರಿಷಬ್ ಶೆಟ್ಟಿಯ ಸಮಯಸಾಧಕತಕ್ಕೆ ಡಿ.ಕೆ. ಶಿವಕುಮಾರ್ ಏಕೆ ನೀರೆರೆಯುತ್ತಿದ್ದಾರೆ? ಎಂದು ವಸಂತ ಬನ್ನಾಡಿ ಪ್ರಶ್ನಿಸಿದ್ದಾರೆ.
“ಇದು ಕಾಂಗ್ರೆಸ್ ಸರ್ಕಾರದ ಸೈದ್ಧಾಂತಿಕ ವಿರೋಧಾಭಾಸ. ತಮ್ಮದೇ ಸಿದ್ಧಾಂತಕ್ಕೆ ವಿರುದ್ಧವಾದ ನಟನನ್ನು ರಾಯಭಾರಿಯನ್ನಾಗಿ ಮಾಡುವುದು ಸರ್ಕಾರದ ದುರಂತ” ಎಂದು ಸಾಮಾಜಿಕ ಕಾರ್ಯಕರ್ತ ಶಶಿಧರ್ ಹೆಮ್ಮಾಡಿ ಕಿಡಿಕಾರಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಈ ನಿರ್ಧಾರವನ್ನು ಸ್ವಾಗತಿಸಿದೆ. “ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾಗಳ ಮೂಲಕ ಕರಾವಳಿಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಅವರು ರಾಯಭಾರಿಯಾಗಲು ಅತ್ಯಂತ ಸೂಕ್ತ ವ್ಯಕ್ತಿ” ಎಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು | 60 ವರ್ಷಗಳ ಬಳಿಕ DMKಗೆ ಗುಡ್ಬೈ ಹೇಳಿದ ಮುಸ್ಲಿಂ ಲೀಗ್
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, “ಈ ನೇಮಕಾತಿಯ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಸರ್ಕಾರದ ಪ್ರಮುಖ ಉದ್ದೇಶ ಆರ್ಥಿಕ ಸ್ಥಿರತೆ, ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅಷ್ಟೇ” ಎಂದು ಹೇಳುವ ಮೂಲಕ ನೇರ ಉತ್ತರವನ್ನೇನೂ ನೀಡಿಲ್ಲ.
ಕಲೆ ಮತ್ತು ಸಾಂಸ್ಕೃತಿಕ ರಾಯಭಾರತ್ವದ ನೆಪದಲ್ಲಿ ಸರ್ಕಾರ ಕೈಗೊಂಡಿರುವ ಈ ಹೆಜ್ಜೆ, ಇದೀಗ ರಾಜಕೀಯ ಮತ್ತು ಸೈದ್ಧಾಂತಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.




