ಹುಮನಾಬಾದ್ ಹೊರವಲಯದ ಕೈಗಾರಿಕೆ ಪ್ರದೇಶದ ರಾಸಾಯನಿಕ ಕಂಪನಿಗಳಿಂದ ಮಾಣಿಕನಗರd ಪವಿತ್ರ ಗುರುಗಂಗಾ ಹಳ್ಳಕ್ಕೆ ಸೇರುತ್ತಿರುವ ವಿಷಕಾರಿ ತ್ಯಾಜ್ಯವನ್ನು ಶಾಶ್ವತವಾಗಿ ತಡೆಗಟ್ಟುವಂತೆ ಒತ್ತಾಯಿಸಿ ಶ್ರೀ ಮಾಣಿಕಪ್ರಭು ಸಂಸ್ಥಾನದ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಶ್ರೀ ಮಾಣಿಕ ನಗರ ಸಂಸ್ಥಾನದಿಂದ ಆರಂಭವಾದ ಬೃಹತ್ ಪ್ರತಿಭಟನೆಯು ತಹಸೀಲ್ ಕಚೇರಿವರೆಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಕೈಯಲ್ಲಿ ಕಪ್ಪು ಧ್ವಜ ಹಿಡಿದ ಪ್ರತಿಭಟನಾಕಾರರು ʼಪ್ರದೂಷಣ ತಡೆಸಿ-ಗುರುಗಂಗಾ ಉಳಿಸಿʼ ಎಂಬ ಘೋಷಣೆಯೊಂದಿಗೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ಮೊಳಗಿತು.
ಹುಮನಾಬಾದ್ ಕ್ಷೇತ್ರದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಪ್ರತಿಭಟನೆಗೆ ಬೆಂಬಲಿಸಿ ಭಾಗಿಯಾದರು. ಬಳಿಕ ತಹಸೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಬಳಿಕ ಪ್ರಮುಖರು ಮಾತನಾಡಿ, “ಕಳೆದ ಸುಮಾರು ಒಂದು ದಶಕದಿಂದ ಹುಮನಾಬಾದ್ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಕೆಲವು ಕೈಗಾರಿಕೆಗಳಿಂದ ಸಂಸ್ಕರಿಸದ ವಿಷಕಾರಿ ಕೈಗಾರಿಕಾ ತ್ಯಾಜ್ಯವನ್ನು ಗುರುಗಂಗಾ ಹಳ್ಳಕ್ಕೆ ಅಕ್ರಮವಾಗಿ ಹರಿಸಲಾಗುತ್ತಿದೆ. ಇದರಿಂದ ಹಳ್ಳದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ, ತೈಲಯುಕ್ತ ಪದರ ನಿರ್ಮಾಣ ಹಾಗೂ ಜಲಚರಗಳ ಸಾವಿನಂತಹ ಆತಂಕಕಾರಿ ಪರಿಸ್ಥಿತಿ ಉಂಟಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಈ ಮಾಲಿನ್ಯವು ಭೂಗರ್ಭಜಲಕ್ಕೂ ವ್ಯಾಪಿಸಿದ್ದು, ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮಗಳಾದ ಮಾಣಿಕನಗರ, ಹುಮನಾಬಾದ್, ಗಡವಂತಿ, ಮೊಳಕೇರಾ, ಧುಮ್ಮನ್ಸೂರು ಹಾಗೂ ಹುಡಗಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರು ಅವಲಂಬಿಸಿರುವ ಕುಡಿಯುವ ನೀರಿನ ಮೂಲಕ್ಕೆ ಗಂಭೀರ ಅಪಾಯ ಎದುರಾಗಿದೆ. ಇದರಿಂದ ಸಾರ್ವಜನಿಕರು ಚರ್ಮರೋಗ, ಜೀರ್ಣಾಂಗದ ಸೋಂಕು, ಯಕೃತ್ ಹಾಗೂ ಮೂತ್ರಪಿಂಡದ ಸಮಸ್ಯೆ, ನರಮಂಡಲದ ತೊಂದರೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆ” ಎಂದರು.
ಪ್ರತಿವರ್ಷ ಲಕ್ಷಾಂತರ ಭಕ್ತರು ಮಾಣಿಕನಗರಕ್ಕೆ ಆಗಮಿಸಿ ಗುರುಗಂಗಾ ಹಾಗೂ ವಿರಜಾ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ತೀರ್ಥ ಸ್ವೀಕರಿಸುವ ಹಿನ್ನೆಲೆ, ಈ ಮಾಲಿನ್ಯವು ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಸಮಸ್ಯೆಯಷ್ಟೇ ಅಲ್ಲದೆ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟುಮಾಡುತ್ತಿದೆ. ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ಕಾಯಿಲೆಗಳು ಸಂಭವಿಸುವ ಆತಂಕ ಕಾಡುತ್ತಿದೆ ಎಂದರು.

ಈ ಪ್ರಕರಣವನ್ನು ತುರ್ತು ಆದ್ಯತೆಯ ಮೇರೆಗೆ ಪರಿಗಣಿಸಿ, ಸಂಬಂಧಿತ ಇಲಾಖೆಗಳ ಮೂಲಕ ಸಮಗ್ರ ತನಿಖೆ ನಡೆಸಿ, ಮಾಲಿನ್ಯದ ಮೂಲವನ್ನು ಪತ್ತೆಹಚ್ಚಿ, ತಪ್ಪಿತಸ್ಥ ಕೈಗಾರಿಕೆಗಳ ವಿರುದ್ಧ ಪರಿಸರ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ ಸೇರುವುದನ್ನು ಶಾಶ್ವತವಾಗಿ ತಡೆಗಟ್ಟಲು ಪರಿಣಾಮಕಾರಿ ವ್ಯವಸ್ಥೆಯನ್ನು ತುರ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಮುಂದಿನ 72 ಗಂಟೆಗಳೊಳಗೆ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಈ ಜನಹಿತ ಹೋರಾಟವು ಮಾಣಿಕನಗರಕ್ಕೆ ಮಾತ್ರ ಸೀಮಿತವಾಗದೆ ಮಾಲಿನ್ಯದಿಂದ ಬಾಧಿತವಾಗಿರುವ ಎಲ್ಲ ಪ್ರದೇಶಗಳ ಜನರನ್ನು ಒಳಗೊಂಡ ಬೃಹತ್ ಸಾರ್ವಜನಿಕ ಹೋರಾಟವಾಗಿ ರೂಪುಗೊಳ್ಳಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಕಾರ್ಖಾನೆಗಳ ವಿಷಕಾರಿ ತ್ಯಾಜ್ಯ ಹಳ್ಳದ ಒಡಲಿಗೆ: ಜನ-ಜಾನುವಾರು ಜೀವಕ್ಕೆ ಆಪತ್ತು!
ಪ್ರತಿಭಟನೆಯಲ್ಲಿ ಶ್ರೀ ಮಾಣಿಕನಗರ ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಮಾಣಿಕ ಸಂಸ್ಥಾನದ ಭಕ್ತಾದಿಗಳು ಪಾಲ್ಗೊಂಡಿದ್ದರು.




