ಮಕ್ಕಳಲ್ಲಿ ಬುದ್ಧಿ ಶಕ್ತಿ ಮಾತ್ರ ಗುರುತಿಸುವುದಲ್ಲದೇ ಬಹುಮುಖ ಪ್ರತಿಭೆ ಹೊರತಂದು ಮುಖ್ಯವಾಹಿನಿಗೆ ತರುವ ಕೆಲಸ ಮಾಡುವುದೇ ನಿಜವಾದ ಶಿಕ್ಷಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ತಿಳಿಸಿದರು.
ಗುಬ್ಬಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಚಿದಂಬರಾಶ್ರಮ ಸೇವಾಸದನ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈಹಿಕ ಶಿಕ್ಷಣ ಬಹುತೇಕ ಎಲ್ಲಾ ಮಕ್ಕಳಿಗೂ ಬಹಳ ಇಷ್ಟವಾದ ತರಗತಿಯಾಗಿದೆ. ಈ ಸಮಯ ಮತ್ತೊಂದು ಪಠ್ಯ ವಿಷಯಕ್ಕೆ ಬಳಸದೆ ಕ್ರೀಡಾ ಸಾಮಾಗ್ರಿ ಜೊತೆಯಲ್ಲಿ ಮಕ್ಕಳಿಗೆ ಆಡಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದರು.
ಕ್ರೀಡಾ ಶಿಕ್ಷಣ ಮಕ್ಕಳಲ್ಲಿ ಮನರಂಜನೆ, ದೈಹಿಕ ಕಸರತ್ತು, ಸಹಕಾರ, ಸ್ಪರ್ಧಾ ಮನೋಭಾವ, ಸಾಮಾಜಿಕ ಜೀವನ ಎಲ್ಲವನ್ನೂ ಕಲಿಸುತ್ತದೆ. ಕ್ರೀಡೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದ ಮಕ್ಕಳು ನಮ್ಮ ಕಣ್ಮುಂದೆ ನಿದರ್ಶನವಾಗಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಕ್ರೀಡೆಗೆ ಸೂಕ್ತ ತರಬೇತಿ ನೀಡಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿ ಕ್ರೀಡಾಕೂಟದಿಂದ ಮನೆಗೆ ಮಕ್ಕಳನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂಬುದು ನೆನಪಿರಲಿ ಎಂದು ತಿಳಿಸಿದರು.
ಬಿಆರ್ ಸಿ ಮಧುಸೂದನ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಒಂದು ಉತ್ತಮ ಸಾಧನವಾಗಿದೆ. ಮಕ್ಕಳಲ್ಲಿನ ಆಸಕ್ತಿ ಅನುಸಾರ ಕ್ರೀಡೆ ಕಲಿಸಬೇಕು. ದೈಹಿಕ ಮಾನಸಿಕ ಶಕ್ತಿ ಹೆಚ್ಚಿಸುವ ಜೊತೆಗೆ ಕ್ರೀಡೆಯ ಎಲ್ಲಾ ಆಯಾಮ ಸೂಕ್ಷ್ಮವಾಗಿ ಕಲಿಸಬೇಕು ಎಂದು ಸಲಹೆ ನೀಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ ಮಕ್ಕಳಲ್ಲಿ ಕ್ರೀಡೆಗೆ ಅಗತ್ಯ ದೈಹಿಕ ಶಕ್ತಿ ತರಲು ಸರ್ಕಾರ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದೆ. ಮಧ್ಯಾಹ್ನದ ಬಿಸಿಯೂಟ ಮಕ್ಕಳ ಶಾರೀರಕ ಬೆಳೆವಣಿಗೆಗೆ ಸೂಕ್ತವಾಗಿದೆ. ಓದಿನ ಜೊತೆ ಆಹಾರ ಪಡೆದ ಮಕ್ಕಳು ಕ್ರೀಡೆಯಲ್ಲಿ ಸಹ ಸಾಧನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಿಸಿಯೂಟ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾ ಜ್ಯೋತಿಯನ್ನು ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಾಗರತ್ನ ಗೌಡರ್ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ್, ಸೇವಾಸದನ ಪ್ರೌಢಶಾಲಾ ಮುಖ್ಯ ಶಿಕ್ಷಕ ಎ.ಬಿ.ಜಗದೀಶ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರವೀಶ್, ಮುಖ್ಯ ಶಿಕ್ಷಕಿ ನೇತ್ರಾವತಿ, ಶಿಕ್ಷಕರಾದ ಶಿವಕುಮಾರ್, ಸತೀಶ್, ನಾಗೇಶ್, ದಕ್ಷಿಣಾಮೂರ್ತಿ, ರಶ್ಮಿ, ಜ್ಞಾನಗಂಗಾ ಇನ್ನಿತರರು ಉಪಸ್ಥಿತರಿದ್ದರು.




