- ವಿದ್ಯಾರ್ಥಿಗಳ ಕೊರತೆ ಉಂಟಾಗಿ ಎಸ್ ವೆಂಕಟಾಪುರ ಸರ್ಕಾರಿ ಶಾಲೆ ಮುಚ್ಚಿದೆ
- ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚಿಸಲು ಪ್ರತಿನಿತ್ಯ ₹2 ನೀಡುವ ಯೋಜನೆ
ವಿದ್ಯಾರ್ಥಿಗಳ ಕೊರತೆ ಹೆಚ್ಚುತ್ತಿದೆ ಎಂಬ ಸಬೂಬು ಹೇಳಿ, ಎಸ್ ವೆಂಕಟಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಈಗಾಗಲೇ ಮುಚ್ಚಲಾಗಿದೆ. ಇದೀಗ, ನೆರೆಯ ಪೋಸಗಾನದೂಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಷ್ಟೇ ದಾಖಲಾಗಿದ್ದಾರೆ ಎಂದು ಹೇಳಲಾಗಿದ್ದು, ಆ ಶಾಲೆಯನ್ನೂ ಮುಚ್ಚಲು ಸರ್ಕಾರ ಮುಂದಾಗಿದೆ.
“ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಸಾದಲಿ ಹೋಬಳಿಯ ಸರ್ಕಾರಿ ಶಾಲೆಗಳು ಮುಚ್ಚುವ ದುಃಸ್ಥಿತಿಗೆ ತಲುಪಿವೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಇರಲಿವೆಯೇ ಎಂಬ ಆತಂಕ ಕಾಡುತ್ತಿದೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
“ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದರಿಂದ ಮೂರು ವರ್ಷಗಳ ಹಿಂದೆ ಎಸ್. ವೆಂಕಟಾಪುರ ಸರ್ಕಾರಿ ಶಾಲೆಗೆ ಕೇವಲ 20 ವಿದ್ಯಾರ್ಥಿಗಳು ದಾಖಲಾಗಿದ್ದರು. ಪ್ರಸಕ್ತ ವರ್ಷ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಎರಡು ಶಾಲಾ ಕೊಠಡಿ, ಬಿಸಿಯೂಟದ ಅಡಿಗೆ ಮನೆ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಇದ್ದರೂ ಕೂಡ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮನಸ್ಸು ಮಾಡುತ್ತಿಲ್ಲ” ಎಂದು ಗ್ರಾಮದ ಹಿರಿಯರು ಮಾತನಾಡುತ್ತಿದ್ದಾರೆ.
“ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಉಚಿತ ಪುಸ್ತಕ, ಸಮವಸ್ತ್ರ ಹಾಗೂ ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚಿಸಲು ಪ್ರತಿನಿತ್ಯ ₹2 ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇಷ್ಟೆಲ್ಲಾ ಯೋಜನೆಗಳು ಇದ್ದರೂ ಕೂಡ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ” ಎಂದು ಕೆಲವು ವಿದ್ಯಾವಂತ ಯುವಕರು ಬೇಸರ ವ್ಯಕ್ತಪಡಿಸುತ್ತಾರೆ.
“ನಾನು ನಾಲ್ಕನೇ ತರಗತಿಯನ್ನು ಓದುತ್ತಿದ್ದೇನೆ. ನನ್ನದು ಬಡ ಕುಟುಂಬ. ಪ್ರತಿದಿನ 5 ಕಿಲೋ ಮೀಟರ್ ಹೋಗಿ ಪಕ್ಕದ ಪೂಸಗಾನದೊಡ್ಡಿ ಸರ್ಕಾರಿ ಶಾಲೆಯಲ್ಲಿ ಓದುವ ಸ್ಥಿತಿ ಎದುರಾಗಿದೆ. ನಮ್ಮೂರಿನಲ್ಲಿಯೇ ಶಾಲೆ ಪ್ರಾರಂಭ ಮಾಡಿ ಉತ್ತಮ ಶಿಕ್ಷಕರನ್ನು ನೇಮಿಸಿದರೆ ನಾವು ಇಲ್ಲೇ ಓದುತ್ತೇವೆ. ದಯವಿಟ್ಟು ಮುಂದಿನ ಶೈಕ್ಷಣಿಕ ವರ್ಷಕ್ಕಾದರೂ ನಮ್ಮೂರ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಬೇಕು” ಎಂದು ವಿದ್ಯಾರ್ಥಿನಿ ಅನುಷಾ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ವಿತರಣೆ; ತನಿಖೆಗೆ ನ್ಯಾ. ಕೆ ಎನ್ ಫಣೀಂದ್ರ ಭರವಸೆ
“ವರ್ಷದ ಹಿಂದಷ್ಟೇ ಶಾಲಾ ಆವರಣದಲ್ಲಿ ಲೋಕೋಪಯೋಗಿ ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಡಿಯಲ್ಲಿ ₹11 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಒಮ್ಮೆಯೂ ಈ ಕೊಠಡಿಯಲ್ಲಿ ತರಗತಿ ನಡೆದಿಲ್ಲ. ಇದೀಗ ವಿದ್ಯಾರ್ಥಿಗಳ ಕೊರತೆ ಉಂಟಾಗಿ ಶಾಲೆಯನ್ನೇ ಮುಚ್ಚಲಾಗಿದೆ” ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಣಿಕಂಠ ತಿಳಿಸಿದ್ದಾರೆ.
ಒಂದೇ ಮಗು ಇದ್ದರೂ ಶಾಲೆ ನಡೆಸುವಂತೆ ಸರ್ಕಾರ ಹೇಳುತ್ತದೆ. ಆದರೆ, ನಮ್ಮ ಗ್ರಾಮದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ, ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಜಿಲ್ಲಾ ಉಪ ನಿರ್ದೇಶಕ ಅಥವಾ ಸಂಪನ್ಮೂಲ ವ್ಯಕ್ತಿಗಳು ಶಾಲೆಯತ್ತ ಸುಳಿದಿಲ್ಲ” ಎಂದು ಆರೋಪಿಸಿದರು.