“ಮತದಾನವೆಂಬುದು ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಾಂವಿಧಾನಿಕ ಹಕ್ಕು. ಈ ಹಕ್ಕನ್ನು ಕಸಿಯಲು ಬಿಡುವುದಿಲ್ಲ. ಎಸ್ಐಆರ್ ಎಂಬುದು ಭಾರತದ ಪ್ರಜಾಪ್ರಭುತ್ವ ಹಾಗೂ ಜನವಿರೋಧಿಯಾಗಿದೆ. ಎಸ್ಐಆರ್ ರದ್ದಾಗಬೇಕು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಪರಿಮಳಾ ಜೈನ್ ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ಸವಣೂರು ಮೂಲಕ ಹಾವೇರಿ ನಗರಕ್ಕೆ ಪ್ರವೇಶಿಸಿದ ಜಾಥಾವನ್ನು ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಅರ್ಥಪೂರ್ಣವಾಗಿ ಪ್ರಗತಿಪರ ಸಂಘಟನೆಗಳು ಸ್ವಾಗತಿಸಿದರು. ಜ್ಯಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿರುವ ಜಾಥಾದಲ್ಲಿ ನಗರದ ಹಲವು ಹೋರಾಟಗಾರರು ಪಾಲ್ಗೊಂಡರು.
ಜಾಥಾದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ ಪದಾಧಿಕಾರಿಗಳು, ತಹಶೀಲ್ದಾರ್ ಶರಣಮ್ಮ ಮೂಲಕ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.
“ಎಸ್ಐಆರ್ ಮೂಲಕ ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಜನರನ್ನು ಮತಪಟ್ಟಿಯಿಂದ ಹೊರಗಿಡುವ ಪ್ರಯತ್ನ ಆಗುತ್ತಿದೆ. ನಾವೆಲ್ಲರೂ ಜಾಗೃತರಾಗಬೇಕು. ಜೊತೆಗೆ ಜನರನ್ನು ಜಾಗೃತರನ್ನಾಗಿ ಮಾಡಬೇಕು” ಎಂದು ಪರಿಮಳ ಜೈನ್ ಹೇಳಿದರು.
ಎದ್ದೇಳು ಕರ್ನಾಟಕ ತಂಡದ ಸಂಚಾಲಕಿ ಹಿಸ್ಸಾ ಬೆಲ್ಲ ಮಾತನಾಡಿ, “ಎಸ್ಐಆರ್ ಮೂಲಕ ದೇಶದ ಲಕ್ಷಾಂತರ ಅರ್ಹ ಮತದಾರರ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ಎಸ್ಐಆರ್ ಮಾಡಲಾಗುತ್ತಿದ್ದು, ಅರ್ಹ ಮತದಾರರು ಹಕ್ಕು ಕಳೆದುಕೊಳ್ಳದಂತೆ ಜಾಗೃತಿ ಮೂಡಿಸಬೇಕು.’ ಎಂದರು.
“ಚುನಾವಣಾ ಆಯೋಗವು ಅವೈಜ್ಞಾನಿಕ ಕ್ರಮದ ಮೂಲಕ ಎಸ್ಐಆರ್ ಮಾಡುತ್ತಿದೆ. ರಾಜ್ಯ ಸರ್ಕಾರವೇ ಗ್ರಾಮ ಸಭೆಗಳನ್ನು ನಡೆಸಿ ಮತದಾರರಿಗೆ ಸಕಲ ದಾಖಲೆ ಒದಗಿಸಬೇಕು. ದಾಖಲೆ ಇಲ್ಲದ ಕಾರಣಕ್ಕೆ ಯಾರೊಬ್ಬರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು” ಎಂದರು.
ಮುಖಂಡ ಆರೀಫ್ ಉಲ್ಲಾ ಮಾತನಾಡಿ, ‘ಕರಡು ಮತದಾರರ ಪಟ್ಟಿಯಲ್ಲಿ ಓದುವ ಮಾದರಿ ಜಾರಿಗೆ ತರಬೇಕು. ಕರಡು ಮತದಾರರ ಪಟ್ಟಿ ಗ್ರಾಮ ಸಭೆ, ಗ್ರಾ.ಪಂ., ತಹಸೀಲ್ದಾರ ಕಚೇರಿ, ತಾಲ್ಲೂಕು ಪಂಚಾಯಿತಿ ಸೇರಿ ಎಲ್ಲ ಕಚೇರಿಯಲ್ಲಿ ಪ್ರಕಟಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋದ ಹೆಸರನ್ನು ಸೇರ್ಪಡೆ ಮಾಡಲು 6 ತಿಂಗಳ ಕಾಲಾವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಜಿಲಾನಿ ಮೇದೂರು ಮಾತನಾಡಿ, “ಭಾರತದಲ್ಲಿ ನುಸುಳುಕೋರರು ಇದ್ದಾರೆಂಬ ಕಾರಣಕ್ಕೆ ಮಾತ್ರ ಎಸ್ಐಆರ್ ಪ್ರಕ್ರಿಯೆ ಮಾಡುತ್ತಿದ್ದಾರೆ. ಅದರೆ ನಮ್ಮ ಕರ್ನಾಟಕಕ್ಕೆ ಯಾವ ಗಡಿದೇಶಗಳು ಇದ್ದಾವೆಯೇ? ಇಲ್ಲಿಗೆ ನುಸುಳುಕೋರರು ಹೇಗೆ ಬಂದಿದ್ದಾರೆ? ನಿಮ್ಮ ಪರಿಶೀಲನಾ ಅಧಿಕಾತುಗಳು ಏನು ಮಾಡುತ್ತಿದ್ದಾರೆ? ಪ್ರಶ್ನೆಗಳು ಬಂರುತ್ತವೆ. ಕರ್ನಾಟಕದಲ್ಲಿ ಚುನಾವಣೆ ಆಯೋಗದ ಮೂಲಕ ಎಸ್ಐಆರ್ ಪರಿಷ್ಕರಣೆ ಮಾಡಲು ಬಿಎಲ್ಓಗಳಿಗೆ ಕೊಟ್ಟಿದ್ದೀರಾ. ಅವರು ಸಣ್ಣ ಕೆಲಸ ಮಾಡುವರು. ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಜೂನ್ 13ರಿಂದ ಶುರುವಾಗಿರುವ ಜಾಥಾವು ಗುರುವಾರ ಹಾವೇರಿಗೆ ಬಂದಿದೆ. ಜೂ. 20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜಾಥಾವೂ ಸಮಾಪ್ತಿಗೊಳ್ಳಲಿದ್ದು, ಅಲ್ಲಿಯೇ ಬಹಿರಂಗ ಸಭೆ ಜರುಗಲಿದೆ.
ಹಾವೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇರ್ಫಾನ್ಖಾನ್ ಪಠಾಣ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಸುರೇಶ ಚಲವಾದಿ, ಖಲಂದರ್ ಅಲಿಗೌಡ್ರ, ಹಸೀನಾ ಹೆಡಿಯಾಲ, ಅಕ್ಟರ್ ಅಲಿ, ಮಹ್ಮದಕಾಸೀಮ್ ರಬ್ಬಾನಿ, ಜಿಲಾನಿ ಮೇದೂರ, ಪ್ರೇಮಲತಾ ಮುದ್ದಿ, ಸುಮಂಗಲಾ ಇಪ್ಪಿಕೊಪ್ಪ, ಐಶ್ವರ್ಯ ಮಡಿವಾಳರ, ಜಿಶಾನ್ ಪಠಾಣ, ಖಮರ್ಅಲಿ ಕಲ್ಯಾಣಿ, ದಾವಲಸಾಬ ಹಿರೇಮುಗದೂರ, ಯಾಸೀರ್ ಇರ್ಷಾದ್, ವಾಜೀಂ ಅಲಿ ತುಮ್ಮಿನಕಟ್ಟಿ, ಇಮ್ಮಿಯಾಜ್ ಕಟ್ಟಿಮನಿ, ಮಕ್ಯೂಲ್ ಎಂ.ಕೆ. ಹಾಗೂ ಇತರರು ಇದ್ದರು.




