- ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ
- ಮೈಸೂರಿನ ಗನ್ಹೌಸ್ನಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಹೋಳಿಗೆ ಊಟ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಮೈಸೂರಿನ ಗನ್ಹೌಸ್ನಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ನೀಡುವ ಮೂಲಕ ಸಂಭ್ರಮಿಸಿದರು.
ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ಡಿ ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷ ಆಗಿದೆ. ಇಬ್ಬರೂ ಪ್ರಭಾವಿ ಅನುಭವಿ ಹಾಗೂ ದಕ್ಷ ಆಡಳಿತಗಾರರು ಇವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ” ಎಂದು ತಿಳಿಸಿದರು.
“ಕಾಂಗ್ರೆಸ್ಗೆ ಅಧಿಕಾರ ಲಭಿಸುವಲ್ಲಿ ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ಮನಗಂಡು ಕಾಂಗ್ರೆಸ್ನ ವರಿಷ್ಠರು ಈಗ ಹಿರಿಯ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ವರ್ಗದ ಜನಾಂಗದವರ ಏಳಿಗೆಗಾಗಿ ಹಗಲಿರಲು ಶ್ರಮವಹಿಸುತ್ತಾರೆ. ಅವರು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸುವುದರ ಜೊತೆಗೆ ಸರ್ವ ಜನಾಂಗದ ಅಭಿವೃದ್ಧಿಯನ್ನು ಬಯಸುವಂತಹ ಮಹಾನ್ ನಾಯಕರು” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯಕ್ಕೆ ಡಿಜಿಸಿಎ ಅನುಮತಿ
“ಕಾಂಗ್ರೆಸ್ಗೆ ಬಲ ತುಂಬಿದ ಜೊತೆಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಪಾಲಿಕೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ಅವರ ಗುರಿಯಾಗಿದೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕೆಂಬುದು ಎಲ್ಲ ಜಾತಿ ಜನಾಂಗದವರ ಬೇಡಿಕೆಯಾಗಿತ್ತು. ಮುಂದಿನ ದಿನಗಳಲ್ಲಿಯೂ ನಾವೆಲ್ಲ ಅವರ ಜೊತೆಗೆ ಇರುತ್ತೇವೆ. ವಿಶೇಷವಾಗಿ ಮೈಸೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾರೆಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಇದೇ ವೇಳೆ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಎಸ್ ಎನ್ ರಾಜೇಶ್, ಮಂಜುನಾಥ್, ವಿಜಯ್ ಕುಮಾರ್, ಶಿವು, ರವಿಚಂದ್ರ, ಶಕ್ತಿಪ್ರಸಾದ್, ತೀರ್ಥ ಕುಮಾರ್ ಸೇರಿದಂತೆ ಇತರ ಅಭಿಮಾನಿಗಳು ಇದ್ದರು.