ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಅಲ್ಲಿನ ಹಲವು ಜಲಾಶಯಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವ ಹಿನ್ನೆಲೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಹೊರಹರಿವನ್ನು ಈ ವರ್ಷ ಮೊದಲ ಬಾರಿಗೆ 1,50,000 ಕ್ಯುಸೆಕ್ಗೆ ಹೆಚ್ಚಿಸಲಾಗಿದೆ.
ಭಾನುವಾರದಿಂದ ಜಲಾಶಯದಿಂದ 1,30,000 ಕ್ಯುಸೆಕ್ ನೀರನ್ನು ಹೊರಹರಿಸಲಾಗುತ್ತಿದ್ದು, ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಅದನ್ನು 1,50,000 ಕ್ಯುಸೆಕ್ಗೆ ಹೆಚ್ಚಿಸಲಾಗಿದೆ. ಜಲಾಶಯಕ್ಕೆ ಒಂದೇ ದಿನದಲ್ಲಿ 10.87 ಟಿಎಂಸಿ ಅಡಿ ನೀರು ಹರಿದು ಬಂದಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಜಲಾಶಯಕ್ಕೆ 1,25,855 ಕ್ಯುಸೆಕ್ (10.87 ಟಿಎಂಸಿ) ನೀರು ಒಳಹರಿದರೆ, ಇದೇ ಅವಧಿಯಲ್ಲಿ 1,28,350 ಕ್ಯುಸೆಕ್ (11 ಟಿಎಂಸಿ) ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗಿದೆ. ಸೋಮವಾರ ಸಂಜೆ ವೇಳೆಗೆ ಜಲಾಶಯದ ಒಳಹರಿವು ಮತ್ತಷ್ಟು ಏರಿಕೆ ಕಂಡು 1,36,973 ಕ್ಯುಸೆಕ್ ತಲುಪಿದೆ.
ಹೊರಹರಿವು ಹೆಚ್ಚಿಸಿರುವ ಪರಿಣಾಮ ಜಲಾಶಯದ ನೀರಿನ ಮಟ್ಟ 518.92 ಮೀಟರ್ಗೆ ಇಳಿಕೆಯಾಗಿದ್ದು, ಪ್ರಸ್ತುತ 111.644 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಾದ ಕೊಯ್ನಾದಿಂದ 24,908 ಕ್ಯುಸೆಕ್, ಧೋಮ್ದಿಂದ 2,852 ಕ್ಯುಸೆಕ್, ಕಣ್ಹೇರ್ದಿಂದ 2,897 ಕ್ಯುಸೆಕ್, ಉರ್ಮೋದಿಯಿಂದ 1,719 ಕ್ಯುಸೆಕ್, ತರಳಿಯಿಂದ 225 ಕ್ಯುಸೆಕ್, ವಾರಣಾದಿಂದ 6,900 ಕ್ಯುಸೆಕ್ ಹಾಗೂ ರಾಧಾನಗರಿಯಿಂದ 7,112 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಹರಿವು 1,15,833 ಕ್ಯುಸೆಕ್ ದಾಖಲಾಗಿದ್ದು, ದೂಧಗಂಗಾ ನದಿಯಿಂದ 17,248 ಕ್ಯುಸೆಕ್ ನೀರು ಕಲ್ಲೋಳ ಬ್ಯಾರೇಜ್ ಬಳಿ ಸೇರುತ್ತಿದೆ. ಇದರಿಂದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಒಟ್ಟು ಹರಿವು 1,33,081 ಕ್ಯುಸೆಕ್ಗೆ ಏರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಆಲಮಟ್ಟಿ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್ಗೂ ಅಧಿಕ ಪ್ರಮಾಣದ ಒಳಹರಿವು ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹಾಗೂ ಅಲ್ಲಿನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟೆಗೆ ಒಳಹರಿವು ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹೊರಹರಿವನ್ನು 1.50 ಲಕ್ಷ ಕ್ಯುಸೆಕ್ಗೆ ಹೆಚ್ಚಿಸಲಾಗಿದೆ,” ಎಂದು ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಡಿ. ಬಸವರಾಜ್ ತಿಳಿಸಿದ್ದಾರೆ.




