ಕೇಂದ್ರ ಸರ್ಕಾರದ 50% ಸೀಟು ಹೆಚ್ಚಳದ ಪ್ರಸ್ತಾಪವನ್ನು ಬೆಂಬಲಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಇತ್ತೀಚೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಡಿಲಿಮಿಟೇಷನ್ ಪಾಠ ಮಾಡಿದ್ದಾರೆ. ನಾಯ್ಡು ಅವರಿಗೆ ಒಂದು ‘ಚಿಂತನಾ ಪ್ರಯೋಗ’ (Thought Experiment) ಅಥವಾ ಸರಳ ಉದಾಹರಣೆ ಮೂಲಕ ಪಾಠ ಮಾಡಿರುವ ಶಶಿ ತರೂರ್, ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ವಿವರಿಸಿದ್ದಾರೆ.
ಕೇಂದ್ರದ ಎನ್ಡಿಎ ಸರ್ಕಾರವು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿ ಜಾರಿಗೆ ತರಲು ಯೋಜಿಸಿದೆ. ಇದರ ಅಡಿಯಲ್ಲಿ ಎಲ್ಲ ರಾಜ್ಯಗಳ ಲೋಕಸಭೆ ಸ್ಥಾನಗಳನ್ನು ಸಮಾನವಾಗಿ 50% ರಷ್ಟು ಹೆಚ್ಚಿಸುವ ಪ್ರಸ್ತಾಪವಿದೆ. ಇದರಿಂದಾಗಿ ಯಾವುದೇ ರಾಜ್ಯ ತನ್ನ ಪ್ರಸ್ತುತ ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅನುಪಾತ ಬದಲಾಗುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಸಮರ್ಥಿಸಿಕೊಂಡಿದ್ದರು. ವಿರೋಧ ಪಕ್ಷಗಳು ಇದನ್ನು ಅನಗತ್ಯವಾಗಿ ವಿವಾದ ಮಾಡುತ್ತಿವೆ ಎಂದೂ ಟೀಕಿಸಿದ್ದರು.
ಇದನ್ನು ಓದಿದ್ದೀರಾ? ‘ಹೆರುವವರ ಕಷ್ಟ ನೀವು ಬಲ್ಲಿರಾ?’ ಹೆಚ್ಚು ಮಕ್ಕಳನ್ನು ಹೆರಿ ಎನ್ನುವ ಆಂಧ್ರ ಸರ್ಕಾರ vs ಮಹಿಳೆಯರು
ಶಶಿ ತರೂರ್ ಹೇಳಿದ ಡಿಲಿಮಿಟೇಷನ್ ಪಾಠ
ಚಂದ್ರಬಾಬು ನಾಯ್ಡು ಅವರ ಈ ವಾದಕ್ಕೆ ತನ್ಮ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿರುಗೇಟು ನೀಡಿರುವ ಶಶಿ ತರೂರ್, “ನಾಯ್ಡು ಜೀ, ನಾವು ಒಂದು ಚಿಂತನಾ ಪ್ರಯೋಗವನ್ನು ಮಾಡೋಣ. ಉದಾಹರಣೆಗೆ ನಿಮ್ಮ ಸಂಬಳ ಎರಡು ಲಕ್ಷ ರೂಪಾಯಿ ಮತ್ತು ನಿಮ್ಮ ಚಾಲಕನ ಸಂಬಳ 20,000 ರೂಪಾಯಿ ಎಂದು ಭಾವಿಸೋಣ. ನಿಮ್ಮನ್ನೂ ಸೇರಿಸಿ ಕಂಪನಿಯ ಎಲ್ಲರಿಗೂ 50% ಸಂಬಳ ಹೆಚ್ಚಳ ಮಾಡುವುದಾಗಿ ನೀವು ಘೋಷಿಸುತ್ತೀರಿ. ಆಗ ನಿಮ್ಮ ಸಂಬಳ 3 ಲಕ್ಷ ರೂಪಾಯಿಗೆ ಏರುತ್ತದೆ, ನಿಮ್ಮ ನಿಮ್ಮ ಚಾಲಕನ ಸಂಬಳ 30,000 ರೂಪಾಯಿಗೆ ಬಂದು ನಿಲ್ಲುತ್ತದೆ. ಇಲ್ಲಿ ಶೇಕಡಾವಾರು ಅಥವಾ ಅನುಪಾತದ ಲೆಕ್ಕಾಚಾರ ಇಬ್ಬರಿಗೂ ಸಮಾನ. ಆದರೆ ನಿಮ್ಮ ಸಂಬಳ ಒಂದು ಲಕ್ಷ ಹೆಚ್ಚಿತಲ್ಲವೇ? ಆರ್ಥಿಕವಾಗಿ ನೀವು ನಿಮ್ಮ ಚಾಲಕನಿಗಿಂತ ಹಿಂದಿಗಿಂತಲೂ ಅಧಿಕ ಲಾಭ ಪಡೆಯುವುದಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ದಕ್ಷಿಣ ಭಾರತದ ಇತರೆ ಮುಖ್ಯಮಂತ್ರಿಗಳ ಕಳವಳವೂ ಇದೇ. ಉತ್ತರ ಪ್ರದೇಶದಲ್ಲಿ ಎಂಬತ್ತು ಸಂಸದರಿದ್ದರೆ, ಕೇರಳದ ಸಂಸದರ ಸಂಖ್ಯೆ 20. ಯುಪಿ ಮತ್ತು ಕೇರಳ ಎರಡಕ್ಕೂ ಶೇ.50ರಷ್ಟು ಸಮಾನ ಹೆಚ್ಚಳ ನೀಡಿದರೂ ಅಸಮಾನತೆ ಉಳಿದೇ ಉಳಿಯುತ್ತದೆ. ಯುಪಿಯ ಸಂಸದರ ಸಂಖ್ಯೆ 120ಕ್ಕೆ ಏರಿದರೆ ಕೇರಳದ ಸಂಸದರ ಸಂಖ್ಯೆ 30ಕ್ಕೇ ನಿಲ್ಲುತ್ತದೆ. ಈ ಬಗ್ಗೆ ನಿಮಗೆ ಕಳವಳ ಇಲ್ಲವೇ” ಎಂದು ನಾಯ್ಡು ಅವರನ್ನು ಶಶಿ ತರೂರ್ ಪ್ರಶ್ನಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳಿಗೆ ಈ ಮರುವಿಂಗಡಣೆ ರಾಜಕೀಯವು ಶಿಕ್ಷೆಯಂತಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಕ್ಷೇತ್ರ ಮರುವಿಂಗಡಣೆಯನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಆದರೆ ದಕ್ಷಿಣ ಭಾರತದವರೇ ಆದ ಆಂಧ್ರಪ್ರದೇಶ ಸಿಎಂ ನಾಯ್ಡು ತಮ್ಮ ಎನ್ಡಿಎ ಮೈತ್ರಿಕೂಟದ ಬೆಂಬಲಕ್ಕೆ ಇಳಿದು ಆಗಾಗೇ ಪೇಚಿಗೆ ಸಿಲುಕುತ್ತಿದ್ದಾರೆ. ಈಗಾಗಲೇ ಆಂಧ್ರದಲ್ಲಿ ಮಹಿಳೆಯರು ಅಧಿಕ ಹೆರುವಂತೆ ಕರೆ ನೀಡಿದ್ದಾರೆ. ಅದಕ್ಕಾಗಿ ಪ್ರೋತ್ಸಾಹಧನವನ್ನೂ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.




