- ಗ್ರಾಮಸ್ಥರೊಂದಿಗೆ ಇಂದು ಮಾತುಕತೆ ನಡೆಸಲಿರುವ ಸೋಮಣ್ಣ
- ರಥ ಮಾಡಿಕೊಡುವುದಾಗಿ ಮಾತು ತಪ್ಪಿದ್ದಕ್ಕೆ ಸಚಿವರ ವಿರುದ್ಧ ಆಕ್ರೋಶ
ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ತಮ್ಮ ವಿರುದ್ಧ ಚಾಮರಾಜನಗರದಲ್ಲಿ ನಡೆದ ಗೋ ಬ್ಯಾಕ್ ಪ್ರತಿಭಟನೆ ಎಚ್ಚರಿಕೆ ಬೆನ್ನಲ್ಲೇ ವಸತಿ ಸಚಿವ ವಿ ಸೋಮಣ್ಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸೋಮಣ್ಣ ಅವರು ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ 400 ವರ್ಷ ಪುರಾತನವಾದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಥ ಮಾಡಿಸಿಕೊಡುವುದಾಗಿ ಮತ್ತು ದೇಗುಲ ಜೀರ್ಣೋದ್ಧಾರ ಮಾಡುವುದಾಗಿ ಗ್ರಾಮದ ಜನರಿಗೆ ಭರವಸೆ ನೀಡಿದ್ದರು. ಆದರೆ, ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ಸೋಮಣ್ಣ ವಿಫಲರಾಗಿದ್ದರೆಂಬುದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ ವಿಶೇಷ | ಸಾಮಾನ್ಯ ಅಶೋಕ್ ರನ್ನು ಸಾಮ್ರಾಟನನ್ನಾಗಿ ಬೆಳೆಸಿದವರಾರು?
ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಅಮಚಪುರ ಮತ್ತು ಚನ್ನಪ್ಪಪುರದ ಗ್ರಾಮಸ್ಥರು, ‘ಗೋ ಬ್ಯಾಕ್ ಸೋಮಣ್ಣ, ಸುಳ್ಳುಗಾರ ಸೋಮಣ್ಣ, ಚಾಮರಾಜನಗರ ಬಿಟ್ಟು ತೊಲಗಿ” ಎಂಬ ಪೋಸ್ಟರ್ ಹಿಡಿದು ಪ್ರತಿಭಟಿಸಿದ್ದರು. ಮಾರ್ಚ್ 26 ಅಥವಾ ಮಾರ್ಚ್ 27ರಂದು ಈ ಕುರಿತು ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ಚುನಾವಣೆಯಲ್ಲಿ ಸೋಮಣ್ಣನವರನ್ನು ಬಹಿಷ್ಕರಿಸುವುದಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.
ಸ್ಥಳೀಯರ ಪ್ರತಿಭಟನೆಗೆ ಎಚ್ಚೆತ್ತುಕೊಂಡಿರುವ ಸೋಮಣ್ಣ ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದು, ದಿಢೀರಾಗಿ ಇಂದು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಚನ್ನಪ್ಪನಪುರ ಗ್ರಾಮದ ವಿವಿಧ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಿ,ಅಸಮಾಧಾನಗೊಂಡಿರುವ ಮುಖಂಡರನ್ನು ಸಮಧಾನಪಡಿಸುವ ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.