- ಕಾಂಗ್ರೆಸ್, ಬಿಜೆಪಿ 70 ಸ್ಥಾನ ದಾಟುವುದಿಲ್ಲ
- ಜೆಡಿಎಸ್ಗೆ 123 ಸ್ಥಾನಗಳನ್ನು ಗೆಲ್ಲುವ ಗುರಿ
ಜೆಡಿಎಸ್ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಸಮಾರೋಪದ ಬಳಿಕವೂ ಯಾತ್ರೆ ಮುಂದುವರೆಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀರ್ಮಾನಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿ, “ಏಪ್ರಿಲ್ 20ರವರೆಗೆ ನಮ್ಮ ಪ್ರಚಾರ ಮುಂದುವರೆಸುತ್ತೇವೆ. ಕಾಂಗ್ರೆಸ್ ನಾಯಕರಂತೆ ನಾವು ದುಡ್ಡು ಕೊಟ್ಟು ಜನ ಸೇರಿಸುವುದಿಲ್ಲ” ಎಂದಿದ್ದಾರೆ.
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶವನ್ನು ಜೆಡಿಎಸ್ ಬಹು ಅದ್ದೂರಿಯಾಗಿಯೇ ಮೈಸೂರಿನಲ್ಲಿ ಪೂರ್ಣಗೊಳಿಸಿತ್ತು. ಬೆನ್ನಲ್ಲೆ ಜನಖ್ಯಾತಿ ಗಳಿಸಿದ ಯಾತ್ರೆ ಮುಂದುವರೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
“ಕಾಂಗ್ರೆಸ್ ನಾಯಕರೇ ₹500 ಕೊಟ್ಟು ಜನ ಸೇರಿಸ್ತಿವಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ನಾವು ಅವರಂತೆ ದುಡ್ಡು ಕೊಟ್ಟು ಜನರನ್ನು ಸೇರಿಸುವುದಿಲ್ಲ. ಏಪ್ರಿಲ್ 20ರವರೆಗೆ ನಮ್ಮ ಪ್ರಚಾರ ಮುಂದುವರೆಸುತ್ತೇವೆ. ಹೊರಗಡೆ ಜೆಡಿಎಸ್ ಮುಗಿಸಿಬಿಟ್ಟಿದ್ದೀವಿ ಎಂದು ಹೇಳಿಕೊಳ್ಳುವುದು ಬೇರೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಕುರಿತು ಮಾತನಾಡಿದ ಅವರು, “ಜೆಡಿಎಸ್ ಪಕ್ಷದ ಬೆಳವಣಿಗೆ ಕಂಡು ಇವರು ತಳಮಳಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ 70 ಸ್ಥಾನ ದಾಟುವುದಿಲ್ಲ. ಜೆಡಿಎಸ್ 123 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ” ಎಂದು ತಿಳಿಸಿದರು.
ಬೆಂಗಳೂರು ನಗರದ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಕೈಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ದೊಡ್ಡ ಬಿದರಕಲ್ಲುನಿಂದ ರಥಯಾತ್ರೆ ಆರಂಭವಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಕಂಬಿ ಹಗರಣದ ತನಿಖೆಯಾದರೆ ಮಾಡಾಳ್ರಂತೆ ಸಿಎಂ ಬೊಮ್ಮಾಯಿ ಜೈಲುಪಾಲು: ಕಾಂಗ್ರೆಸ್
ಕಳೆದ ನವಂಬರ್ 18ರಂದು ಕೋಲಾರದ ಮುಳಬಾಗಿಲು ಕ್ಷೇತ್ರದ ಕುರುಡುಮಲೆಯಲ್ಲಿ ಆರಂಭವಾಗಿದ್ದ ರಥಯಾತ್ರೆಯು 99 ದಿನಗಳನ್ನು ಪೂರೈಸಿ ನಾಳೆ 100ನೇ ದಿನಕ್ಕೆ ಕಾಲಿರಿಸಲಿದೆ. 88 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಮಾಜಿ ಮುಖ್ಯಮಂತ್ರಿಗಳು, 10000 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿ, 5500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದರು.
ಪಂಚರತ್ನ ರಥಯಾತ್ರೆ ಯಶಸ್ಸಿನ ಹಿನ್ನೆಲೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ರಾಜ್ಯದ 10 ಜಿಲ್ಲೆಗಳನ್ನು ಬಡತನ ಹಾಗೂ ಅಪೌಷ್ಟಿಕತೆ ಕಾಡುತ್ತಿದ್ದು, ಅದರ ನಿವಾರಣೆಗೆ ಯಾವುದೇ ಕ್ರಮವಹಿಸದ ಪ್ರಧಾನಿ ಮೋದಿ ಅವರು ಜನರನ್ನಷ್ಟೇ ಅಲ್ಲ ಸಂವಿಧಾನವನ್ನೂ ಸಮಾಧಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದರು.