- ಪಂಜಾಬ್ನ ಲುಧಿಯಾನ ನಗರದಲ್ಲಿ ಮಿಥೇನ್ಅನಿಲ ಸೋರಿಕೆ ಶಂಕೆ
- ಶೇರ್ಪುರ್ ಚೌಕ್ ಬಳಿಯ ಗಿಯಾಸ್ಪುರ ಪ್ರದೇಶದ ಕಾರ್ಖಾನೆಯಲ್ಲಿ ಘಟನೆ
ಪಂಜಾಬ್ನ ಲುಧಿಯಾನ ನಗರದಲ್ಲಿನ ಕಾರ್ಖಾನೆಯೊಂದರಲ್ಲಿ ಭಾನುವಾರ (ಏಪ್ರಿಲ್ 30) ಅನಿಲ ಸೋರಿಕೆ 11 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ನ ಲುಧಿಯಾನ ನಗರದ ಶೇರ್ಪುರ್ ಚೌಕ್ ಬಳಿಯ ಗಿಯಾಸ್ಪುರ ಪ್ರದೇಶದ ಸುವಾ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಬೆಳಿಗ್ಗೆ 7.15ಕ್ಕೆ ಅನಿಲ ಸೋರಿಕೆಯಾಗಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಐವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ.
ಅನಿಲ ಸೋರಿಕೆ ಬಳಿಕ ಪ್ರದೇಶದಲ್ಲಿ ಜನರ ಸಂಚಾರ ಬಂದ್ ಮಾಡಲಾಗಿದ್ದು, ಲುಧಿಯಾನ ನಗರದಲ್ಲಿ ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರದೇಶಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ವೈದ್ಯರ ತಂಡ ಹಾಗೂ ಆಂಬುಲೆನ್ಸ್ ಸ್ಥಳದಲ್ಲಿ ಬೀಡುಬಿಟ್ಟಿವೆ ಎಂದು ಪೊಲೀಸರು ತಿಳಿಸಿದರು.
ಅನಿಲ ಸೋರಿಕೆಯಾಗಿ ಅಸ್ವಸ್ಥಗೊಂಡವರಲ್ಲಿ ಐದು ಮಂದಿ ಮಹಿಳೆಯರು, ಆರು ಪುರುಷರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ. “ಅನಿಲ ಸೋರಿಕೆಗೆ ಕಾರಣ ಪತ್ತೆಯಾಗಿಲ್ಲ. ಇದರ ಬಗ್ಗೆ ಎನ್ಡಿಆರ್ಎಫ್ ತನಿಖೆ ನಡೆಸುತ್ತದೆ” ಎಂದು ಲುಧಿಯಾನದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸ್ವಾತಿ ತಿವಾನಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಅತಿ ಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್ ಯಾವುದು ಗೊತ್ತಾ?
“ಈವರೆಗೆ ಲುಧಿಯಾನದ ಘಟನೆಯಲ್ಲಿ 11 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮಿಥೇನ್ ಅನಿಲ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಮಾದರಿ ಸಂಗ್ರಹಿಸುತ್ತಿದ್ದು ಪರಿಶೀಲಿಸಲಾಗುತ್ತದೆ” ಎಂದು ಲುಧಿಯಾನದ ಉಪ ಆಯುಕ್ತೆ ಸುರಭಿ ಮಲಿಕ್ ತಿಳಿಸಿದರು.
ಮೃತರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
“ಅನಿಲ ಸೋರಿಕೆ ಘಟನೆಯಿಂದ ತೀವ್ರ ದುಃಖವಾಗಿದೆ. ಪೊಲೀಸರು, ಎನ್ಡಿಆರ್ಎಫ್ ಮತ್ತು ಸರ್ಕಾರ ಸ್ಥಳದಲ್ಲಿದೆ. ಎಲ್ಲ ರೀತಿಯ ನೆರವು ನೀಡಲಾಗುವುದು” ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.