ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ನಕಲಿ ವಿಡಿಯೋಗಳನ್ನು ಯೂಟ್ಯೂಬ್ ಚಾನಲ್ ಮೂಲಕ ಹರಡಿದ ಆರೋಪ ಎದುರಿಸುತ್ತಿರುವ ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ತನ್ನ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
“ತಮಿಳುನಾಡು ಶಾಂತಿಯುತ ರಾಜ್ಯ. ಅಂತಹ ರಾಜ್ಯದಲ್ಲಿ ಶಾಂತಿ ಕದಡಲು ನೀವು ನಕಲಿ ವಿಡಿಯೋಗಳ ಮೂಲಕ ಏನು ಬೇಕಾದರೂ ಸುದ್ದಿ ಹರಡಿಸುತ್ತೀರಿ. ಇದನ್ನು ಆಲಿಸಲು ನಾವು ಸಿದ್ದರಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಯೂಟ್ಯೂಬರ್ ಮನೀಶ್ ಕಶ್ಯಪ್ ಅವರ ಅರ್ಜಿಯನ್ನು ತಿರಸ್ಕರಿಸಿದರು.
ಇದೇ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಸುರಕ್ಷತೆ ಕಾಯಿದೆಯಡಿ ತನ್ನ ಬಂಧನವನ್ನೂ ರದ್ದುಗೊಳಿಸಬೇಕೆಂದು ಆತ ಸಲ್ಲಿಸಿದ್ದ ಅರ್ಜಿಯನ್ನೂ ಪರಿಗಣಿಸಲು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲ ಅವರ ಪೀಠ ನಿರಾಕರಿಸಿದೆ. ಆದರೆ ಇದೇ ಅರ್ಜಿಗಳನ್ನು ಹೈಕೋರ್ಟಿನಲ್ಲಿ ಸಲ್ಲಿಸುವ ಸ್ವಾತಂತ್ರ್ಯವನ್ನು ಸುಪ್ರೀಂಕೋರ್ಟ್ ಕಶ್ಯಪ್ ಅವರಿಗೆ ನೀಡಿದೆ.
ವಿಚಾರಣೆ ಶುರುವಾಗುತ್ತಲೇ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, “ಯಾವ ಕಾರಣಕ್ಕಾಗಿ ನೀವು ಈ ನಕಲಿ ವಿಡಿಯೋ ತಯಾರಿಸಿದ್ದೀರಿ” ಎಂದು ಕೇಳಿದರು. ಈ ಸಂದರ್ಭದಲ್ಲಿ ಕಶ್ಯಪ್ ಪರ ಹಾಜರಿದ್ದ ಹಿರಿಯ ವಕೀಲ ಮನೀಂದರ್ ಸಿಂಗ್ ಪ್ರತಿಕ್ರಿಯಿಸಿ, “ಕೆಲ ಮುಖ್ಯ ವಾಹಿನಿ ದಿನಪತ್ರಿಕೆಗಳು ಪ್ರಕಟಿಸಿದ ಸುದ್ದಿಯ ಆಧಾರದಲ್ಲಿ ವಿಡಿಯೋ ತಯಾರಿಸಲಾಗಿತ್ತು. ಕಶ್ಯಪ್ ಅವರನ್ನು ಬಂಧಿಸಿದ್ದರೆ ಅದೇ ರೀತಿಯ ಸುದ್ದಿಗಳನ್ನು ಪ್ರಕಟಿಸಿದ ಇತರ ಪತ್ರಿಕೆಗಳ ಪತ್ರಕರ್ತರನ್ನೂ ಇದೇ ಕಾಯಿದೆಯಡಿ ಬಂಧಿಸಬೇಕು” ಎಂದು ಹೇಳಿದರು.
ಅಲ್ಲದೆ ತಮಿಳುನಾಡಿನಲ್ಲಿ ದಾಖಲಾದ ಎಲ್ಲಾ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ಮೊದಲ ಎಫ್ಐಆರ್ ದಾಖಲಾದ ಬಿಹಾರಕ್ಕೆ ವರ್ಗಾಯಿಸಬೇಕೆಂದು ಕೋರಿದರು. ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಲಿಲ್ಲ. ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, “ಅರ್ಜಿದಾರರು ಮದ್ರಾಸ್ ಹೈಕೋರ್ಟಿಗೆ ತಮ್ಮ ಮನವಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಹೇಳಿದರು.
ಏಪ್ರಿಲ್ 5ರಂದು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ನಕಲಿ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಬಿಹಾರ ಮೂಲದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರನ್ನು ತಮಿಳುನಾಡು ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿದ್ದರು.
ಕಳೆದ ತಿಂಗಳು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಸತ್ಯ ಪರಿಶೀಲಕರು ಮತ್ತು ಪೊಲೀಸ್ ಇಲಾಖೆ ವಿಡಿಯೋಗಳು ನಕಲಿ ಎಂದು ಸ್ಪಷ್ಟಪಡಿಸಿತ್ತು.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ವಿಡಿಯೋ ಬಗ್ಗೆ ಹೇಳಿಕೆ ನೀಡಿ, “ವಲಸೆ ಕಾರ್ಮಿಕರ ಬಗ್ಗೆ ಇಂತಹ ವದಂತಿಗಳನ್ನು ನಂಬಬೇಡಿ ಮತ್ತು ರಾಜ್ಯವು ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡುತ್ತದೆ. ತಮಿಳುನಾಡಿನಲ್ಲಿ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬಿಹಾರದ ಯೂಟ್ಯೂಬರ್ ವಿರುದ್ಧ ಎನ್ಎಸ್ಎ ಜಾರಿ; ತಮಿಳುನಾಡು ಸರ್ಕಾರದ ಕ್ರಮ ಪ್ರಶ್ನಿಸಿದ ಸುಪ್ರೀಂ ಕೋರ್ಟ್