- ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಇಂದು ಸಭಾಧ್ಯಕ್ಷ ಕಾಗೇರಿಗೆ ಸಲ್ಲಿಸಿದ್ದ ಜಗದೀಶ್ ಶೆಟ್ಟರ್
- ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎನ್ನುವ ಮೂಲಕ ಕುತೂಹಲ ಸೃಷ್ಟಿ
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಅವರ ಮುಂದಿನ ನಡೆ ಮತ್ತಷ್ಟು ರಹಸ್ಯವಾಗಿ ಉಳಿದಿದೆ.
ಭಾನುವಾರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ತಮ್ಮ ಬೆಂಬಲಿಗರ ಜೊತೆಗೂಡಿ ತೆರಳಿದ್ದ ಶೆಟ್ಟರ್ ಅವರು ತಮ್ಮ ರಾಜೀನಾಮೆ ಸಲ್ಲಿಸಿ, ಇಂದೇ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ಹೆಚ್ಚು ಕೇಳಿಬಂದಿದ್ದವು.
ಆದರೆ, ಜಗದೀಶ್ ಶೆಟ್ಟರ್ ಬೆಂಗಳೂರಿಗೆ ಆಗಮಿಸಿ ದ್ವಂದ್ವ ಹೇಳಿಕೆ ನೀಡುವ ಮೂಲಕ ತಮ್ಮ ಮುಂದಿನ ನಡೆಯನ್ನು ಇನ್ನೂ ನಿಗೂಢವಾಗಿಯೇ ಉಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶೆಟ್ಟರ್, “ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿರುವೆ. ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ 60 ದಾಟದು, ಕಾಂಗ್ರೆಸ್ ಕನಿಷ್ಠ 130 ಸ್ಥಾನ ಗೆಲ್ಲಲಿದೆ: ವೀರಪ್ಪ ಮೊಯ್ಲಿ
“ನಾನು ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿ, ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡೋದು ಸ್ವಲ್ಪ ನೋವಾಗುತ್ತಿದೆ” ಎನ್ನುವ ಮೂಲಕ ಮತ್ತಷ್ಟು ಕುತೂಹಲ ಸೃಷ್ಟಿಸಿದ್ದಾರೆ.
ಕಾಂಗ್ರೆಸ್ನವರು ತಮ್ಮನ್ನು ಬೆಂಗಳೂರಿಗೆ ಬರಮಾಡಿಕೊಳ್ಳಲು ವಿಶೇಷ ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿ, “ಶಾಮನೂರು ಅವರು ಈ ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ. ಅವರು ನನಗೆ ಬೀಗರು ಆಗಬೇಕು. ಹುಬ್ಬಳಿಗೆ ಶ್ಯಾಮನೂರು ಗಣೇಶ್ ಬಂದಿದ್ದರು. ಅವರ ಜೊತೆ ಬೆಂಗಳೂರಿಗೆ ಬಂದಿದ್ದೇನೆ” ಎಂದರು.
ಇದೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಸೇರುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, “ನಾನಿನ್ನು ರಾಜೀನಾಮೆ ನೀಡಿಲ್ಲ, ನೀಡಿದ ಮೇಲೆ ಕಾಂಗ್ರೆಸ್ನವರನ್ನು ಭೇಟಿಯಾಗೋದು.ಆದರೆ ಇದುವರೆಗೆ ನಾನು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಇನ್ನೂ ಎರಡು ದಿನದಲ್ಲಿ ತೀರ್ಮಾನ ತೊಗೋತೀನಿ” ಎಂದರು.
ಕಾಂಗ್ರೆಸ್ ನಾಯಕರ ಸ್ವಾಗತ
ರಾಜೀನಾಮೆ ನೀಡಿ ಶಿರಸಿಯಿಂದ ಆಗಮಿಸಿದ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ರುದ್ರಾಕ್ಷಿ ಹಾರ ಹಾಕಿ ಸ್ವಾಗತಿಸಿದರು.