- ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿಯಾದ ಸಚಿವ ಡಿಜಿಆರ್
- ಇಲ್ಲಿನ ಜನ ಶಾಂತಿ ಸಹೋದರತೆ, ಸೌಹಾರ್ದತೆಯಿಂದ ಬದುಕಿ ಬಾಳಬೇಕು
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿಯಾದ ಸಚಿವರಾಗಿ ಘೋಷಣೆಯಾಗುತ್ತಿದ್ದಂತೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೈತಿಕ ಪೊಲೀಸ್ ಗಿರಿ ವಿರುದ್ಧ ಗುಡುಗಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿನ ಕಾನೂನು ಬಾಹಿರ ಅಶಿಸ್ತಿಗೆ ಅಂತ್ಯ ಹಾಡಿಸುವುದಾಗಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿನ ನೈತಿಕ ಪೊಲೀಸ್ಗಿರಿಗೆ ಅಂತ್ಯ ಹಾಡುತ್ತೇವೆ. ಇಲ್ಲಿನ ಜನ ಸಹೋದರತೆಯಿಂದ ಬಾಳಬೇಕು. ಶಾಂತಿ ಸೌಹಾರ್ದತೆಯಿಂದ ಬದುಕಬೇಕು, ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳತ್ತೇವೆ ಎಂದು ದಿನೇಶ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಲುವಾಗಿ ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ, ಇದು ಮುಖ್ಯಮಂತ್ರಿ ಗಳ ನಿರ್ಧಾರ, ಯಾವ ಜಿಲ್ಲೆಗೆ ಹೋದರು ಕೆಲಸ ಮಾಡಬೇಕು ಎಂದು ಗುಂಡುರಾವ್ ಹೇಳಿದ್ದಾರೆ.
ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ
ರಾಜ್ಯದಲ್ಲಿನ ‘ನೈತಿಕ ಪೊಲೀಸ್ಗಿರಿʼ ತಡೆಯಲು ʼಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ವಾರದ ಹಿಂದಷ್ಟೇ ಹೇಳಿಕೆ ನೀಡಿದ್ದರು.
ನೈತಿಕ ಪೊಲೀಸ್ ಗಿರಿ ನಿಗ್ರಹದ ಸಲುವಾಗಿ ಮಂಗಳೂರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪಶ್ಚಿಮ ವಿಭಾಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವರು, ಅವರ ಅಭಿಪ್ರಾಯಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ನ ಹೊಸ ಘಟಕ ಆರಂಭಿಸುವುದಾಗಿ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ?:ನೈತಿಕ ಪೊಲೀಸ್ಗಿರಿ ಕಡಿವಾಣಕ್ಕೆ ʼಆ್ಯಂಟಿ ಕಮ್ಯುನಲ್ ವಿಂಗ್ʼ ಸ್ಥಾಪನೆಗೆ ಮುಂದಾದ ಸರ್ಕಾರ
ಹಾಗೆಯೇ ಇದರ ಬಗ್ಗೆ ಮಾಹಿತಿ ನೀಡಿದ್ದ ಪರಮೇಶ್ವರ್, ಹೊಸ ವಿಭಾಗದಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದು, ಇವರು ಕರಾವಳಿ ಭಾಗದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಸಹಬಾಳ್ವೆ ನಡೆಸುವ ಒಳ್ಳೆಯ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಘಟನೆಗಳು ನಡೆಯದಂತೆ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.