ಪಂಚರಾಜ್ಯಗಳ ಚುನಾವಣೆಯ ಅಬ್ಬರ ಅಡಗುತ್ತಿದ್ದಂತೆಯೇ ಕೇಂದ್ರದ ಮೋದಿ ಸರ್ಕಾರ ಜನಸಾಮಾನ್ಯರಿಗೆ ನಿರೀಕ್ಷಿತವಾದರೂ ಅನಿರೀಕ್ಷಿತವೆಂಬಂತೆ ಬೆಲೆ ಏರಿಕೆಯ ಶಾಕ್ ನೀಡಿದೆ. ಮೇ ತಿಂಗಳ ಮೊದಲ ದಿನವೇ ಇಡೀ ದೇಶದ ಜನತೆ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುವಂತಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಮುಗಿಯುತ್ತಿದ್ದಂತೆಯೇ ಇಂತಹದೊಂದು ಆರ್ಥಿಕ ಹೊಡೆತ ಬೀಳಬಹುದು ಎಂಬ ಆತಂಕ ಜನರಲ್ಲಿತ್ತು, ಅದು ಈಗ ನಿಜವಾಗಿದೆ. ಮೇ 1ರ ಬೆಳಗ್ಗೆಯೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂಪಾಯಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ದೊಡ್ಡ ಪ್ರಹಾರ ಮಾಡಿದೆ. ಈ ಮೊದಲು 2,162 ರೂಪಾಯಿ ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ ಈಗ ಏಕಾಏಕಿ 3,155 ರೂಪಾಯಿಗೆ ತಲುಪಿದೆ. ಇಷ್ಟು ದೊಡ್ಡ ಮೊತ್ತದ ಏರಿಕೆ ಇತಿಹಾಸದಲ್ಲೇ ಮೊದಲು. ಇದು ಕೇವಲ ಹೋಟೆಲ್ ಮಾಲೀಕರಿಗೆ ಸೀಮಿತವಾದ ಸಮಸ್ಯೆಯಲ್ಲ, ಬದಲಿಗೆ ಹೋಟೆಲ್ಗಳನ್ನು ಅವಲಂಬಿಸಿರುವ ಲಕ್ಷಾಂತರ ಜನಸಾಮಾನ್ಯರ ಜೇಬಿಗೆ ಬೀಳುತ್ತಿರುವ ಕತ್ತರಿ.
ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮ ಕಂಗೆಟ್ಟಿದೆ. ಈಗಾಗಲೇ ದಿನಸಿ ಪದಾರ್ಥಗಳು, ತರಕಾರಿ ಮತ್ತು ಹಾಲಿನ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಾಲೀಕರಿಗೆ ಗ್ಯಾಸ್ ಬೆಲೆ ಏರಿಕೆ ‘ಗಾಯದ ಮೇಲೆ ಬರೆ ಎಳೆದಂತಾಗಿದೆ’. ಈಗಾಗಲೇ ಅನೇಕ ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆಯನ್ನು 15 ರಿಂದ 20 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಈಗ ಗ್ಯಾಸ್ ಬೆಲೆ ಏರಿಕೆಯಿಂದಾಗಿ ಮುಂದಿನ ದಿನಗಳಲ್ಲಿ ಕಾಫಿ, ಟೀ ಮತ್ತು ಊಟದ ದರಗಳು ಮತ್ತಷ್ಟು ದುಬಾರಿಯಾಗಲಿವೆ. ಗ್ಯಾಸ್ ಬೆಲೆ ಹೆಚ್ಚಳ ತಾಳಲಾರದೆ ಈಗಾಗಲೇ ಹಲವು ಸಣ್ಣ ಹೋಟೆಲ್ಗಳು ಮುಚ್ಚಲ್ಪಟ್ಟಿವೆ. ಹೋಟೆಲ್ ನಡೆಸಿದರೂ ಲಾಭವಿಲ್ಲ, ಮುಚ್ಚಿದರೂ ಬಾಡಿಗೆ ಮತ್ತು ಕಾರ್ಮಿಕರ ವೇತನ ಪಾವತಿಸಲೇಬೇಕಾದ ಅನಿವಾರ್ಯತೆಯಲ್ಲಿ ಮಾಲೀಕರಿದ್ದಾರೆ. ಬೆಲೆ ಹೆಚ್ಚಿಸಿದರೆ ಗ್ರಾಹಕರು ಹೋಟೆಲ್ಗೆ ಬರುವುದನ್ನು ಕಡಿಮೆ ಮಾಡುತ್ತಾರೆ, ಬೆಲೆ ಹೆಚ್ಚಿಸದಿದ್ದರೆ ಉದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಇಕ್ಕಟ್ಟಿನಲ್ಲಿ ಹೋಟೆಲ್ ಮಾಲೀಕರು ಸಿಲುಕಿದ್ದಾರೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಕೂಡ ಗಗನಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ. ಸಾರಿಗೆ ವೆಚ್ಚ ಹೆಚ್ಚಾದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಅವಶ್ಯಕ ವಸ್ತುವಿನ ಬೆಲೆ ದುಪ್ಪಟ್ಟಾಗಲಿದೆ. ಈಗಾಗಲೇ ಆಟೋ ಚಾಲಕರು ಮತ್ತು ಸಣ್ಣ ಸಾರಿಗೆ ಉದ್ಯಮಿಗಳು ದೈನಂದಿನ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.
ಜನಸಾಮಾನ್ಯರು ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿದ್ದರೂ, ಕೇಂದ್ರದಲ್ಲಿರುವ ಕರ್ನಾಟಕದ ಮಂತ್ರಿಗಳು ಮತ್ತು ರಾಜ್ಯದ ಪ್ರಭಾವಿ ನಾಯಕರು ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಬದಲು ಸಮರ್ಥನೆಗಿಳಿದಿರುವುದು ದುರಂತ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನಡೆ ಇದಕ್ಕೆ ಸ್ಪಷ್ಟ ಉದಾಹರಣೆ. ಪತ್ರಕರ್ತರೊಬ್ಬರು “ಚುನಾವಣೆ ಮುಗಿದ ತಕ್ಷಣ ಸಿಲಿಂಡರ್ ಬೆಲೆ ಏರಿಸಿದ್ದೀರಿ, ಇದರ ಬಗ್ಗೆ ಏನು ಹೇಳುತ್ತೀರಿ?” ಎಂದು ಕೇಳಿದ ನೇರ ಪ್ರಶ್ನೆಗೆ ಉತ್ತರಿಸಲು ವಿಫಲರಾದ ಅವರು, ಸಂಬಂಧವೇ ಇಲ್ಲದ ‘ಮಹಿಳಾ ಮೀಸಲಾತಿ’ ಮತ್ತು ‘ಡಿಲಿಮಿಟೇಶನ್ ಬಿಲ್’ ಬಗ್ಗೆ ಮಾತನಾಡಿ ವಿಷಯಾಂತರ ಮಾಡಿದರು. ಕೇಳಿದ ಪ್ರಶ್ನೆಗೂ ನೀಡಿದ ಉತ್ತರಕ್ಕೂ ಯಾವುದೇ ತಾರ್ಕಿಕ ಸಂಬಂಧವಿರಲಿಲ್ಲ. ಇದು ಕೇವಲ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ರಾಜಕೀಯ ತಂತ್ರವಷ್ಟೇ.
https://www.facebook.com/share/v/17gYaWaaUz
ಈ ಹಿಂದೆ ಕರ್ನಾಟಕದಲ್ಲಿ ಬೆಲೆ ಏರಿಕೆಯಾದಾಗ ಬೀದಿಗಿಳಿದು ಹೋರಾಡುತ್ತಿದ್ದ ಬಿಜೆಪಿ ನಾಯಕರು ಈಗ ಮೌನಕ್ಕೆ ಶರಣಾಗಿದ್ದಾರೆ. ಹಿಂದೆ ಮೆಟ್ರೋ ದರ ಏರಿಕೆಯಾದಾಗ ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಈಗ ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬಸ್ ದರ ಏರಿಕೆಯಾದಾಗ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಗಮನ ಸೆಳೆದಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೇಂದ್ರದ ಈ ಜನವಿರೋಧಿ ಧೋರಣೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

ಕರ್ನಾಟಕದ ಕೇಂದ್ರ ಮಂತ್ರಿಗಳಿಗೆ ಮತ್ತು ಬಿಜೆಪಿ ನಾಯಕರಿಗೆ ಬೆಲೆ ಏರಿಕೆಯ ಬಗ್ಗೆ ಮಾತನಾಡಲು ಭಯವಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕೇಂದ್ರದ ನಾಯಕರ ವಿರುದ್ಧ ಧ್ವನಿ ಎತ್ತಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂಬ ಆತಂಕ ಅವರಲ್ಲಿ ಮನೆ ಮಾಡಿರುವಂತೆ ತೋರುತ್ತಿದೆ. ಜನರ ಸಂಕಷ್ಟಕ್ಕಿಂತ ಪಕ್ಷದ ನಿಷ್ಠೆಯೇ ಮುಖ್ಯವಾಯಿತೇ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.

ಅಷ್ಟೇ ಯಾಕೆ ತೆರಿಗೆ ಹಂಚಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸತತವಾಗಿ ಅನ್ಯಾಯ ಮಾಡುತ್ತಾ ಬಂದಿದ್ದರೂ, ರಾಜ್ಯದ ಬಿಜೆಪಿ ನಾಯಕರು ಆ ಬಗ್ಗೆ ಧ್ವನಿ ಎತ್ತದೆ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕವು ದೇಶದ ಬೊಕ್ಕಸಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಮರಳಿ ರಾಜ್ಯಕ್ಕೆ ಸಿಗಬೇಕಾದ ಪಾಲು ಮಾತ್ರ ಅತ್ಯಂತ ನಗಣ್ಯವಾಗಿದೆ. ಚುನಾವಣೆಯ ಸಮಯದಲ್ಲಿ ಮತ ಕೇಳಲು ರಾಜ್ಯದ ಮೂಲೆ ಮೂಲೆಗೆ ಬರುವ ನಾಯಕರಿಗೆ, ಇಲ್ಲಿನ ಜನರ ತೆರಿಗೆಯ ಹಣದಲ್ಲಿ ನ್ಯಾಯಯುತ ಪಾಲು ಪಡೆಯುವ ಇಚ್ಛಾಶಕ್ತಿಯಿಲ್ಲದಿರುವುದು ದುರಂತ. ಕನ್ನಡಿಗರ ಮತಗಳಿಂದ ಗೆದ್ದು ಕೇಂದ್ರದಲ್ಲಿ ಅಧಿಕಾರ ಅನುಭವಿಸುತ್ತಿರುವ ಈ ಪ್ರತಿನಿಧಿಗಳು, ಜನರ ಕಷ್ಟಕಾಲದಲ್ಲಿ ಕೇಂದ್ರದ ಮುಂದೆ ನಿಂತು ಹಕ್ಕೊತ್ತಾಯ ಮಾಡುವ ಬದಲು, ಹೈಕಮಾಂಡ್ ವಿಧೇಯರಂತೆ ವರ್ತಿಸುತ್ತಿರುವುದು ಅವರ ಜನವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಜನರ ಹಿತಕ್ಕಿಂತ ಪಕ್ಷದ ನಿಷ್ಠೆಯೇ ಮುಖ್ಯವೆಂದು ಭಾವಿಸಿರುವ ಇವರ ನಡೆ ‘ವೋಟ್ ಇಲ್ಲಿನದು, ಲಾಭ ಅಲ್ಲಿನದು’ ಎನ್ನುವಂತಿದೆ.
ಚುನಾವಣೆಗಳ ಸಮಯದಲ್ಲಿ ಮತದಾರರಿಗೆ ಹತ್ತಾರು ಭರವಸೆ ನೀಡುವ ಸರ್ಕಾರಗಳು, ಅಧಿಕಾರಕ್ಕೆ ಬಂದ ಮೇಲೆ ಅಥವಾ ಚುನಾವಣೆ ಮುಗಿದ ಮೇಲೆ ಜನಸಾಮಾನ್ಯರನ್ನೇ ಶೋಷಿಸುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಶೋಭೆಯಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯ ನೆಪವೊಡ್ಡಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವುದು ಸುಲಭ, ಆದರೆ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪ್ರತಿ ರೂಪಾಯಿಗೂ ಪಡುತ್ತಿರುವ ಪಾಡನ್ನು ಆಳುವವರು ಅರ್ಥಮಾಡಿಕೊಳ್ಳಬೇಕಿದೆ.

ಇನ್ನು ಅಂಧಭಕ್ತರ ವಿಚಿತ್ರ ಮನಸ್ಥಿತಿಯ ಬಗ್ಗೆ ಹೇಳುವುದಾದರೆ, ಇವರ ಕುರುಡು ಆರಾಧನೆ ದೇಶದ ವಾಸ್ತವವನ್ನೇ ಮರೆಮಾಚುವಂತಿದೆ. ಬೆಲೆ ಏರಿಕೆಯಿಂದ ಇಡೀ ದೇಶವೇ ತತ್ತರಿಸುತ್ತಿದ್ದರೂ, ಇವರು ಮಾತ್ರ ಯಾವುದೋ ಮಾಯಾಲೋಕದಲ್ಲಿ ವಿಹರಿಸುತ್ತಾ ‘ಮೋದಿ ಮಾಡಿದ್ದೆಲ್ಲವೂ ಸರಿ’ ಎಂದು ಬೊಬ್ಬೆ ಹೊಡೆಯುತ್ತಿರುವುದು ಹಾಸ್ಯಾಸ್ಪದ. ಈ ಹಿಂದೆ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ವೈಜ್ಞಾನಿಕ ದಾರಿ ಹುಡುಕುವ ಬದಲು ಗಂಟೆ, ಜಾಗಟೆ ಬಾರಿಸಿ ರೋಗ ಓಡಿಸುತ್ತೇವೆ ಎಂದು ಹೊರಟಿದ್ದ ಇವರು, ಈಗ ಅಡುಗೆ ಅನಿಲ ದುಬಾರಿಯಾದಾಗ ‘ಹಳೆಯ ಕಾಲದಂತೆ ಸಗಣಿ ತಟ್ಟಿ, ಬೆರಣಿ ಬಳಸಿ ಅಡುಗೆ ಮಾಡಿ, ಆರೋಗ್ಯಕ್ಕೆ ಒಳ್ಳೆಯದು’ ಎಂಬ ಅಸಂಬದ್ಧ ಉಪದೇಶ ನೀಡಿದರೂ ಅಚ್ಚರಿಯಿಲ್ಲ. ದೇಶದ ಜನಸಾಮಾನ್ಯರ ಹೊಟ್ಟೆ ಉರಿಯುತ್ತಿದ್ದರೆ, ಇವರು ಮಾತ್ರ ವಾಸ್ತವಕ್ಕೆ ಕಣ್ಣುಮುಚ್ಚಿ ಕೇವಲ ಭಜನೆಯಲ್ಲಿ ಮಗ್ನರಾಗಿರುವುದು ದೇಶದ ದೌರ್ಭಾಗ್ಯವೇ ಸರಿ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದ ಇಂತಹ ಕುರುಡು ಅಭಿಮಾನ ದೇಶದ ಪ್ರಗತಿಗೆ ದೊಡ್ಡ ಅಡ್ಡಿಯಾಗಿದೆ.
ಕನ್ನಡಿಗರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕೇವಲ ‘ಹೈಕಮಾಂಡ್’ ಆಜ್ಞಾಪಾಲಕರಾಗದೆ, ಕರ್ನಾಟಕದ ಜನರ ದನಿಯಾಗಿ ದೆಹಲಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ, ಜನಸಾಮಾನ್ಯರ ಆಕ್ರೋಶ ಮುಂದಿನ ದಿನಗಳಲ್ಲಿ ಸ್ಫೋಟಗೊಳ್ಳುವುದರಲ್ಲಿ ಸಂಶಯವಿಲ್ಲ. ಬೆಲೆ ಏರಿಕೆಯ ಈ ಸರಣಿ ಹೀಗೆಯೇ ಮುಂದುವರೆದರೆ, ಸಾಮಾನ್ಯ ಮನುಷ್ಯನ ಬದುಕು ಕೇವಲ ಹೋರಾಟಕ್ಕಷ್ಟೇ ಸೀಮಿತವಾಗಲಿದೆ.




