ನೂತನ ಸಚಿವ ಸಂಪುಟದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಬೇರೆ ಜಿಲ್ಲೆಯ ಜನಪ್ರತಿನಿಧಿಗಳು ಬಂದು ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್. ಮಾರೆಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿಕೊಂಡಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಆಡಳಿತದ ಮೇಲೆ ಹಿಡಿತ ಸಾಧಿಸಲು ಕಲಬುರಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಆಸಕ್ತಿಯೂ ಒಂದು ಕಾರಣವಾಗಿದೆ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆಯಲ್ಲಿ ಮಾತ್ರವಲ್ಲ, ಇತರ ಜಿಲ್ಲೆಗಳಲ್ಲಿಯೂ ರಾಜಕೀಯ ಬಣಗಳಿವೆ. ಆದರೆ ಸ್ಥಳೀಯ ಗುಂಪುಗಾರಿಕೆಯನ್ನು ನೆಪವನ್ನಾಗಿ ಮಾಡಿಕೊಂಡು ಜಿಲ್ಲೆಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿರುವುದು ಖಂಡನೀಯ. ಜಿಲ್ಲೆಯಲ್ಲಿ ಸಿಂಡಿಕೇಟ್ ರಾಜಕಾರಣವಿದೆ. ಗುಡ್ಡ, ಕೆರೆ ನಾಶ ಮಾಡಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಂದಾಗುತ್ತಾರೆ. ಜಿಲ್ಲೆಯ ಅಭಿವೃದ್ದಿಗಾಗಿ ಒಗ್ಗೂಟ್ಟಿನಿಂದ ಜಿಲ್ಲೆಗೆ ಸಚಿವ ಸ್ಥಾನ ಪಡೆಯಲು ಶಾಸಕರು ಕಾರ್ಯನಿರ್ವಹಿಸುವದಿಲ್ಲ. ಹೊರ ಜಿಲ್ಲೆಯವರಗೆ ಸಚಿವ ಸ್ಥಾನ ನೀಡುವದು ರಾಜಕೀಯ ದಬ್ಬಾಳಿಕೆಯಾಗಿದೆ ಎಂದು ಆರೋಪಿಸಿದರು.
ಆಡಳಿತ ಮತ್ತು ಪ್ರತಿಪಕ್ಷದ ಶಾಸಕರುಗಳಿಗೆ ಕನಿಷ್ಟ ಆತ್ಮಸಾಕ್ಷಿ ಇಲ್ಲದೇ ಹೋಗಿದೆ. ಯಾರೊಬ್ಬರು ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಪ್ರತಿರೋಧಿಸುತ್ತಿಲ್ಲ. ಕಲ್ಬುರ್ಗಿ ಜಿಲ್ಲೆಗೆ ಮೂರು, ಬೀದರ್ ಎರಡು, ಕೊಪ್ಪಳಕ್ಕೆ ಎರಡು ಸಚಿವ ಸ್ಥಾನ ನೀಡುವಾಗ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕೆನ್ನುವುದನ್ನೇ ಕಾಂಗ್ರೆಸ್ ಹೈಕಮಾಂಡ ಮರೆತಿರುವುದು ಈ ಹಿಂದೆ ವ್ಯವಸ್ಥಿತ ರಾಜಕೀಯ ಕುತಂತ್ರವಿದೆ ಎಂದರು.
ಜಿಲ್ಲೆಯವರನ್ನೇ ಸಚಿವರನ್ನಾಗಿ ಉಸ್ತುವಾರಿ ಸಚಿವರಾಗಿಸಬೇಕು. ಅಲ್ಲಿಯವರಗೆ ಬೇರೆ ಜಿಲ್ಲೆಯವರು ಧ್ವಜಾರೋಹಣ ಮಾಡಲು ಬಿಡುವುದಿಲ್ಲ. ಜಿಲ್ಲೆಯ ಯಾರಿಗಾದರೂ ಸಚಿವ ಸ್ಥಾನ ಮಾಡಲಿ, ಪ್ರಾತಿನಿಧ್ಯ ನೀಡಲೇಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು ರಾಜಕೀಯದಲ್ಲಿ ಮತ್ತೆ ಹಿನ್ನಡೆ: ಸಚಿವ ಸ್ಥಾನಕ್ಕೆ ಚೊಂಬು, ಜಿಲ್ಲೆಯ ನಿರೀಕ್ಷೆ ಭಗ್ನ
ಪತ್ರಿಕಾಗೋಷ್ಠಿಯಲ್ಲಿ ಹೇಮರಾಜ ಅಸ್ಕಿಹಾಳ, ನರಸಿಂಹಲು ಮರ್ಚಟ್ಹಾಳ, ಶ್ರೀನಿವಾಸ ಕೊಪ್ಪರ, ಶ್ರೀನಿವಾಸ ಕಲವಲದೊಡ್ಡಿ, ಲಕ್ಷ್ಮಣ ಕಲ್ಲೂರು, ತಾಯಪ್ಪ ,ರವಿ ಇದ್ದರು.




