- ಶರದ್ ಪವರ್ ಮನೆಯಲ್ಲಿ ಅಘಾಡಿ ಮೈತ್ರಿ ಕೂಟ ಸಭೆ
- ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆ
ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸಿನ ನಂತರ ಮಹಾರಾಷ್ಟ್ರದ ಮಹಾ ಅಘಾಡಿ ಮೈತ್ರಿ ಕೂಟ (ಎಂವಿಎ) ಹೊಸ ಹುರುಪಿನಲ್ಲಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಕಾರ್ಯಯೋಜನೆ ಸಿದ್ಧಪಡಿಸಲು ಮುಂದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಅತ್ಯುತ್ತಮ ಪ್ರದರ್ಶನದಿಂದ ಉತ್ತೇಜನಗೊಂಡಿರುವ ಎಂವಿಎ, ಭಾನುವಾರ ಸಭೆ ಸೇರಿ ಚರ್ಚಿಸಿದೆ. ಸಭೆಯಲ್ಲಿ ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ‘ಗೆಲುವಿನ ಕಾರ್ಯಯೋಜನೆ’ ರೂಪಿಸಲಾಗಿದೆ.
ಎನ್ಸಿಪಿ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿವಸೇನೆ ವಕ್ತಾರರಾದ ಸಂಜಯ್ ರೌತ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾರಾಷ್ಟ್ರದ ವಿಪಕ್ಷ ನಾಯಕ ಅಜಿತ್ ಪವಾರ್, ಬಾಳಾಸಾಹೇಬ್ ಥೋರಟ್ ಮೊದಲಾದವರು ಭಾಗವಹಿಸಿದ್ದಾರೆ. ಎನ್ಸಿಪಿ ಮುಖಂಡರಾದ ರಾಜ್ಯ ಎನ್ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್, ಸಂಸದೆ ಸುಪ್ರಿಯಾ ಸುಲೆ, ಜಿತೇಂದ್ರ ಅವದ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.
“ಮಹಾ ಅಘಾಡಿ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕರ್ನಾಟಕದಲ್ಲಿ ಶೇ 40ರಷ್ಟು ಭ್ರಷ್ಟಾಚಾರವಿದ್ದರೆ, ಮಹಾರಾಷ್ಟ್ರದಲ್ಲಿ ಶೇ 100 ಭ್ರಷ್ಟಾಚಾರವಿದೆ. ಈ ಸರ್ಕಾರವನ್ನು ಸೋಲಿಸುತ್ತೇವೆ” ಎಂದು ಸಭೆಯ ನಂತರ ಸಂಜಯ್ ರೌತ್ ಹೇಳಿದ್ದಾರೆ.
“ಕರ್ನಾಟಕದಂತೆ ಮಹಾರಾಷ್ಟ್ರದ ಜನರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ತಮ್ಮ ವಿರೋಧ ತೋರಿಸಲಿದ್ದಾರೆ” ಎಂದು ನಾನಾ ಪಟೋಲೆ ಹೇಳಿದ್ದಾರೆ.
“ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ತನ್ನೆಲ್ಲಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದರೂ ಮತ್ತು ವಂಚನೆಗೆ ಪ್ರಯತ್ನಿಸಿದರೂ ಅದನ್ನು ಸುಲಭವಾಗಿ ಸೋಲಿಸಬಹುದು” ಎನ್ನುವುದು ಸಾಬೀತಾಗಿದೆ ಎಂದು ಸಂಜಯ್ ರೌತ್ ಸಭೆಗೆ ಮೊದಲು ಹೇಳಿದ್ದರು.
ಇತ್ತೀಚೆಗೆ ಕಸ್ಬಾ ಪೇಠ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಜೊತೆಗೂಡಿ ಹೋರಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿರುವುದನ್ನು ಅವರು ನೆನಪಿಸಿದ್ದಾರೆ. “ಕಸ್ಬಾ ಪೇಠ್ನಲ್ಲಿ ಮೂರು ದಶಕಗಳ ನಂತರ ಬಿಜೆಪಿಗೆ ಸೋಲಾಗಿದೆ. ನಾವು ಜೊತೆಗೂಡಿ ಚುನಾವಣೆ ಎದುರಿಸಿದಲ್ಲಿ ಶಿಂಧೆ ಶಿವಸೇನೆ ನಮಗೆ ಸಮನಾಗಿ ನಿಲ್ಲಲಾಗದು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಿದ್ದೇವೆ” ಎಂದು ಅವರು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ಸಿಎಂ ಆಯ್ಕೆ | ಮೂವರು ವೀಕ್ಷಕರ ನೇಮಿಸಿದ ಎಐಸಿಸಿ
“ಸಭೆಯಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಚರ್ಚಿಸಲಾಗುವುದು. ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಸುಲಭವಾಗಿ ಸೋಲಿಸಬಹುದು ಎನ್ನುವುದು ಸಾಬೀತಾಗಿದೆ. ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು ಮತ್ತು ವಿಧಾನಸಭಾ ಚುನಾವಣೆಯನ್ನೂ ದೊಡ್ಡ ಪ್ರಮಾಣದಲ್ಲಿ ಗೆಲ್ಲಬಹುದು” ಎಂದು ರೌತ್ ಹೇಳಿದ್ದಾರೆ.
ಎನ್ಸಿಪಿ ಮತ್ತು ಪಕ್ಷದ ಇತರ ಮಿತ್ರರ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಮತ್ತು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಕಡಿಮೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದೂ ಅವರು ಹೇಳಿದ್ದಾರೆ. “ಮಾಧ್ಯಮಗಳ ಮುಂದೆ ನೀಡುವ ಹೇಳಿಕೆ ಮೈತ್ರಿಗೆ ತೊಡಕಾಗದಂತೆ ಮಾತುಕತೆ ಮೂಲಕ ಬಿಕ್ಕಟ್ಟು ಶಮನ ಮಾಡಲು ನಿರ್ಧರಿಸಲಿದ್ದೇವೆ” ಎಂದು ಹೇಳಿದ್ದಾರೆ.