- ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಕುರಿತು ಮೃದು ಧೋರಣೆ
- ಬಲಪಂಥೀಯ ಸಿದ್ಧಾಂತಕ್ಕೆ ಅನುಕೂಲವಾಗುವಂತೆ ಬದಲಾವಣೆ
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಪ್ರಸ್ತುತ ಮಹಾತ್ಮ ಗಾಂಧಿ ಅವರ ಕುರಿತು ಕೆಲ ಉಲ್ಲೇಖಗಳನ್ನು 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಕ್ರಮದಿಂದ ಕೈಬಿಟ್ಟಿದೆ.
ಮಹಾತ್ಮ ಗಾಂಧಿ ಅವರು ಹಿಂದೂ ಉಗ್ರಗಾಮಿಗಳ ಬಗ್ಗೆ ಹೊಂದಿದ್ದ ನಿಲುವು, ಹಿಂದೂ ಉಗ್ರಗಾಮಿಗಳನ್ನು ಕೆರಳಿಸಿದ ಗಾಂಧೀಜಿಯ ನಿರ್ಧಾರಗಳ ಕುರಿತು ಪಠ್ಯದಲ್ಲಿ ಉಲ್ಲೇಖಿಸಲಾಗಿತ್ತು.
ಸೇಡು ತೀರಿಸಿಕೊಳ್ಳುವವರ ಮತ್ತು ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರ ಮಾಡಬೇಕೆನ್ನುವವರ ವಿರುದ್ಧ ಗಾಂಧೀಜಿ ಇದ್ದರು ಎನ್ನುವ ಉಲ್ಲೇಖವನ್ನೇ ಪಠ್ಯದಿಂದ ಅಳಿಸಿ ಹಾಕಲಾಗಿದೆ.
ಜೊತೆಗೆ ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ‘ಪುಣೆಯ ಬ್ರಾಹ್ಮಣ’ ಎನ್ನುವ ಉಲ್ಲೇಖವನ್ನು ಪಠ್ಯದಿಂದ ಕೈಬಿಡಲಾಗಿದೆ. ಇದರೊಂದಿಗೆ ಸಮಿತಿ ಬಲಪಂಥೀಯ ಧೋರಣೆಗಳ ಪರ ಒಲವು ತೋರಿದೆ.
ತೆಗೆದು ಹಾಕಲಾಗಿರುವ ಉಲ್ಲೇಖಗಳು
- ಹಿಂದೂಗಳು ಸೇಡಿ ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದಂತೆ ಭಾರತವನ್ನೂ ಸಂಪೂರ್ಣವಾಗಿ ಹಿಂದೂ ರಾಷ್ಟ್ರ ಮಾಡಬೇಕು ಎನ್ನುವವರನ್ನು ಮಹಾತ್ಮ ಗಾಂಧೀಜಿ ಇಷ್ಟಪಡುತ್ತಿರಲಿಲ್ಲ.
- ಮಹಾತ್ಮ ಗಾಂಧಿ ಅವರ ಹಿಂದೂ – ಮುಸ್ಲಿಂ ಐಕ್ಯತೆಯ ಯತ್ನ ಹಿಂದೂ ಉಗ್ರಗಾಮಿಗಳನ್ನು ತೀವ್ರ ಅಸಮಾಧಾನಕ್ಕೆ ದೂಡಿತ್ತು. ಎಷ್ಟರ ಮಟ್ಟಿಗೆ ಎಂದರೆ, ಗಾಂಧೀಜಿ ಅವರನ್ನು ಕೊಲ್ಲಲು ಅನೇಕ ಸಲ ಯತ್ನಿಸಿದರು.
- ಭಾರತ ಸರ್ಕಾರವು ಕೋಮು ದ್ವೇಷವನ್ನು ಹರಡುವ ಸಂಘಟನೆಗಳ ಮೇಲೆ ನಿಗಾ ವಹಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳನ್ನು ಕೆಲಕಾಲ ನಿಷೇಧಿಸಲಾಗಿತ್ತು.
- ನಾಥುರಾಮ್ ಗೋಡ್ಸೆ ಎನ್ನುವ ಪುಣೆ ಬ್ರಾಹ್ಮಣ ಗಾಂಧೀಜಿಯನ್ನು 1948ರ ಜನವರಿ 30ರಂದು ಹತ್ಯೆ ಮಾಡಿದ್ದನು. ಈತ ಹಿಂದೂ ಉಗ್ರಗಾಮಿ ಪತ್ರಿಕೆಯ ಸಂಪಾದಕನಾಗಿದ್ದನು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಮೊಘಲ್ ಅರಸರ ಕುರಿತ ಅಧ್ಯಯನ ಕಡಿತ
ಈ ನಾಲ್ಕು ಉಲ್ಲೇಖಗಳನ್ನು ಎನ್ಸಿಇಆರ್ಟಿ ಕೈಬಿಟ್ಟಿದೆ. ಆ ಮೂಲಕ ಸುಮಾರು 15 ವರ್ಷಗಳಿಂದ 12ನೇ ತರಗತಿಯಲ್ಲಿದ್ದ ಪಠ್ಯವನ್ನು ಬದಲಾಯಿಸಲಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ 2022ರಲ್ಲಿ ಕೇಂದ್ರ ಸರ್ಕಾರ ಎನ್ಸಿಇಆರ್ಟಿ 6 ರಿಂದ 12 ನೇ ತರಗತಿಯ ತರ್ಕಬದ್ಧ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಕಳೆದ ವರ್ಷ ಜೂನ್ನಲ್ಲಿ ಬಿಡುಗಡೆಯಾದ ತರ್ಕಬದ್ಧ ವಿಷಯಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ಅವರ ಕುರಿತ ಮಾಹಿತಿ ಅಳಿಸಿರಲಿಲ್ಲ. ಆದರೆ, ಮಾರುಕಟ್ಟೆಗೆ ಬಂದಿರುವ ಹೊಸ ಪಠ್ಯಪುಸ್ತಕಗಳಲ್ಲಿ ಕೆಲ ಉಲ್ಲೇಖಗಳು ಕಾಣೆಯಾಗಿವೆ.
12 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕ ‘ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ’ ಮೊದಲ ಅಧ್ಯಾಯದಲ್ಲಿ ಮಹಾತ್ಮ ಗಾಂಧಿ ಅವರಿಗಿದ್ದ ಹಿಂದೂ ಉಗ್ರಗಾಮಿಗಳು ವಿಶೇಷವಾಗಿ ಮಹಾತ್ಮ ಗಾಂಧಿಯನ್ನು ಹೇಗೆ ಇಷ್ಟಪಡಲಿಲ್ಲ ಮತ್ತು ಅವರನ್ನು ಹತ್ಯೆ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದರು ಎಂಬ ವಾಕ್ಯಗಳನ್ನು ತೆಗೆದುಹಾಕಿದೆ.
ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದು, ಪುಣೆ ಬ್ರಾಹ್ಮಣ ಮತ್ತು ಹಿಂದೂ ಉಗ್ರಗಾಮಿ ನಾಥುರಾಮ್ ಗೋಡ್ಸೆ ಎಂದು ಹಳೆಯ ಪಠ್ಯದಲ್ಲಿ ಉಲ್ಲೇಖವಿತ್ತು. ಇದೀಗ ಜನವರಿ 30 ರ ಸಂಜೆ ಅವರ ದೈನಂದಿನ ಪ್ರಾರ್ಥನಾ ಸಭೆಯಲ್ಲಿ, ಗಾಂಧೀಜಿಯನ್ನು ಯುವಕನೊಬ್ಬ ಗುಂಡಿಕ್ಕಿ ಕೊಂದನು. ನಂತರ ಶರಣಾದ ಹಂತಕ ನಾಥುರಾಮ್ ಗೋಡ್ಸೆ ಎಂದು ಹಂತಕನ ಬಗ್ಗೆ ಮೃದು ಧೋರಣೆ ತಾಳಲಾಗಿದೆ.