ಕ್ರಿಕೆಟ್ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್ ಅವರ ಈ ಮೌನವೇ, ಅವರ ಶಕ್ತಿ...
ಮೇ 1ರಂದು ಜೈಪುರದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ಪಂದ್ಯ, ಬಹಳ ಅಪರೂಪದ ಪಂದ್ಯವಾಗಿತ್ತು. ಸಮಬಲದ ಪೈಪೋಟಿಯಾಗಿತ್ತು. ನೋಡುಗರನ್ನು ಕೊನೆ ಕ್ಷಣದವರೆಗೂ ಕುರ್ಚಿಯ ತುದಿಗೆ ತಂದು ಕೂರಿಸಿತ್ತು. ನೆನಪಿನಲ್ಲಿ ಉಳಿಯುವ ಪಂದ್ಯಗಳಲ್ಲೊಂದಾಗಿತ್ತು. ಮೊದಲಿಗೆ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ನಷ್ಟಕ್ಕೆ 225 ರನ್ಗಳನ್ನು ಪೇರಿಸಿತ್ತು. ಇದು ನಿಜಕ್ಕೂ ಸವಾಲಿನ ಮೊತ್ತವೇ ಆಗಿತ್ತು. ಆದರೆ 225 ರನ್ಗಳ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಹಂತದಲ್ಲಿಯೇ ಉತ್ತಮ ಪೈಪೋಟಿ ನೀಡುವಲ್ಲಿ ಭರವಸೆ ಹುಟ್ಟಿಸಿತು.
ಆರಂಭಿಕ ಆಟಗಾರ ಪಥುಮ್ ಕೊಂಚ ಬಿರುಸಿನ ಹೊಡೆತಗಳಿಂದ ಬಹಳ ಬೇಗ ರನ್ ಪೇರಿಸುವತ್ತ ಗಮನ ಹರಿಸಿದರೆ, ಮತ್ತೊಂದು ಬದಿಯಲ್ಲಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಕೊಂಚವೂ ವಿಚಲಿತರಾಗದೆ, ತಾಳ್ಮೆಗೆ ತಲೆಬಾಗಿದರು. ಐಪಿಎಲ್ನಲ್ಲಿ ಅಪರೂಪವೆನಿಸುವ ಕಲಾತ್ಮಕ ಶೈಲಿಯ ಆಟಕ್ಕೆ ಒತ್ತುಕೊಟ್ಟರು. ಅಷ್ಟೇ ಅಲ್ಲ, ಒಂದೊಂದು ಹೊಡೆತವನ್ನು ತೂಗಿನೋಡಿ ಪ್ರೇಕ್ಷಕರ ಕಣ್ಣಲ್ಲಿ ಉಳಿಯುವಂತೆ, ನಾಲಗೆಯ ಮೇಲೆ ನಲಿದಾಡುವಂತೆ ನೋಡಿಕೊಂಡರು. ಎದುರಿಸಿದ್ದು ಕೇವಲ 40 ಬಾಲ್ಗಳು, ಆದರೆ ಗಳಿಸಿದ್ದು 75 ರನ್ಗಳು. ಅದರಲ್ಲಿ ನಾಲ್ಕು ಬೌಂಡರಿಗಳಿದ್ದರೆ, ಐದು ಸಿಕ್ಸರ್. ತಂಡ ಗೆಲುವಿನತ್ತ ದಾಪುಗಾಲು ಹಾಕುವಂತೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿಕೊಟ್ಟಿದ್ದರು. ಆ ಮೂಲಕ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದ್ದರು.
ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೇವಲ 1 ರನ್ಗೆ ಔಟಾಗಿದ್ದ ರಾಹುಲ್, ಅಭಿಮಾನಿಗಳ ಅವಕೃಪೆಗೆ ಒಳಗಾಗಿದ್ದರು. ಆದರೆ ಈ ಪಂದ್ಯದಲ್ಲಿ ಪುಟಿದೆದ್ದು ನಿಂತಿದ್ದರು. ಸೊಗಸಾದ ಬ್ಯಾಟಿಂಗ್ನಿಂದ ಪ್ರೇಕ್ಷಕರ, ವೀಕ್ಷಕ ವಿವರಣೆಕಾರರ ಮೆಚ್ಚುಗೆ ಗಳಿಸಿದ್ದರು. ತಂಡಕ್ಕೆ ಪಂದ್ಯ ಗೆಲ್ಲಿಸಿಕೊಟ್ಟಿದ್ದಲ್ಲದೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.

ಇಷ್ಟಾದರೂ ಸಹನೆ, ಸಂಯಮಗಳ ಮೊತ್ತದಂತಿರುವ ಕೆ.ಎಲ್. ರಾಹುಲ್, ‘ವೈಯಕ್ತಿಕ ದಾಖಲೆಗಳನ್ನು ಸಾಧಿಸುವುದು ಒಂದು ರೀತಿಯಲ್ಲಿ ಒಳ್ಳೆಯದು. ಅವು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ. ಆದರೂ ಕ್ರಿಕೆಟ್ ತಂಡದ ಆಟ’ ಎನ್ನುವುದನ್ನು ಮರೆಯಲಿಲ್ಲ. ಆ ಮೂಲಕ ತಮ್ಮ ಆಟ ಮತ್ತು ಪ್ರತಿಭೆಯನ್ನು ಪ್ರದರ್ಶಿಸದೇ ಇರಲಿಲ್ಲ.
ಹಾಗೆ ನೋಡಿದರೆ, ಭಾರತೀಯ ಕ್ರಿಕೆಟ್ನಲ್ಲಿ ಪ್ರತಿಭೆಗಳ ಕೊರತೆ ಎಂದಿಗೂ ಇರಲಿಲ್ಲ. ಆದರೆ ಪ್ರತಿಭೆಯನ್ನು ತಾಳ್ಮೆಯಿಂದ ಹೊತ್ತುಕೊಂಡು, ಟೀಕೆಗಳ ನಡುವೆಯೂ ತನ್ನ ಶೈಲಿಯನ್ನು ಕಾಪಾಡಿಕೊಂಡು, ಮತ್ತೆ ಮತ್ತೆ ಸಾಬೀತುಪಡಿಸಿಕೊಂಡ ಆಟಗಾರರು ವಿರಳ. ಅಂತಹ ವಿರಳ ಆಟಗಾರರಲ್ಲಿ ಕೆ.ಎಲ್. ರಾಹುಲ್ ಕೂಡ ಒಬ್ಬರು. ಅವರ ಕ್ರಿಕೆಟ್ ಪಯಣವನ್ನು ಕೇವಲ ರನ್ಗಳ ಲೆಕ್ಕದಲ್ಲಿ ಅಳೆಯಲು ಸಾಧ್ಯವಿಲ್ಲ. ಅದು ಒತ್ತಡ, ನಿರೀಕ್ಷೆ, ವಿಫಲತೆ, ಮೌನ ಮತ್ತು ಪುನರಾಗಮನಗಳ ಪುರಾಣದಂತೆ ಕಂಡರೂ ಆಶ್ಚರ್ಯವಿಲ್ಲ.
ಕರ್ನಾಟಕದ ನೆಲದಿಂದ ಬಂದ ರಾಹುಲ್, ಆರಂಭದಿಂದಲೇ ಕ್ಲಾಸ್ ಬ್ಯಾಟ್ಸ್ಮನ್ ಎಂದು ಗುರುತಿಸಲ್ಪಟ್ಟವರು. ಅವರ ಕವರ್ ಡ್ರೈವ್ ಅತ್ಯುತ್ತಮ ಹೊಡೆತಗಳಲ್ಲೊಂದು. ಆದರೆ ಭಾರತೀಯ ಕ್ರಿಕೆಟ್ನ ಸಮಸ್ಯೆಯೇ ಬೇರೆ. ಇಲ್ಲಿ ಆಟಕ್ಕಿಂತ, ಆಟದ ಸೊಗಸಿಗಿಂತ, ಸೌಂದರ್ಯಕ್ಕಿಂತ ಸದ್ದು ಮಾಡುವುದು ಮುಖ್ಯ. ಷೋ ಕೊಡುವುದು ಮುಖ್ಯ. ಆದರೆ, ರಾಹುಲ್ ಸದ್ದು ಮಾಡುವ ಆಟಗಾರನೂ ಅಲ್ಲ, ಅನಗತ್ಯವಾಗಿ ಷೋ ಮಾಡುವುದಕ್ಕೂ ಹೋಗುವುದಿಲ್ಲ. ಅವರು ಮಿತಭಾಷಿ, ಸ್ಥಿತಪ್ರಜ್ಞ. ಮೈದಾನದಲ್ಲೂ ಆ ಮೂಲಕವೇ ಉತ್ತರ ಕೊಡುವವರು. ಅದಕ್ಕಾಗಿಯೇ ಅವರು ಹಲವಾರು ಬಾರಿ ತಪ್ಪಾಗಿ ಅರ್ಥೈಸಲ್ಪಟ್ಟವರು.
ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ಟೆಸ್ಟ್ ತಂಡದ ಭವಿಷ್ಯವೆಂದೂ, ಮತ್ತೊಂದು ಹಂತದಲ್ಲಿ ಟಿ20 ಕ್ರಿಕೆಟ್ಗೆ ಸೂಕ್ತವಲ್ಲವೆಂದೂ, ಮತ್ತೊಮ್ಮೆ ಏಕದಿನ ಕ್ರಿಕೆಟ್ನ ಆಧಾರಸ್ತಂಭವೆಂದೂ ಅವರನ್ನು ಕರೆಯಲಾಯಿತು. ಭಾರತೀಯ ಕ್ರಿಕೆಟ್ ವ್ಯವಸ್ಥೆ ರಾಹುಲ್ರನ್ನು ಯಾವ ಪಾತ್ರಕ್ಕೆ ಬಳಸಬೇಕು ಎಂಬುದರ ಬಗ್ಗೆ ಹಲವಾರು ಬಾರಿ ಗೊಂದಲಕ್ಕೀಡಾಯಿತು. ಓಪನರ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್, ವಿಕೆಟ್ ಕೀಪರ್, ಫಿನಿಷರ್- ಎಲ್ಲ ಪಾತ್ರಗಳನ್ನೂ ಅವರು ಹೊತ್ತರು. ಪ್ರಶ್ನೆ ಏನೆಂದರೆ: ಇಷ್ಟೊಂದು ಹೊರೆ ಹೊತ್ತ ಆಟಗಾರನಿಗೆ ವ್ಯವಸ್ಥೆ ಸೂಕ್ತ ನ್ಯಾಯ ನೀಡಿತೇ? ಆಟಗಾರನಿಗೆ ಬೇಕಾದ ಭರವಸೆ ಒದಗಿಸಿತೇ?
ಇದನ್ನು ಓದಿದ್ದೀರಾ?: ಕರ್ನಾಟಕ ಮಹಿಳಾ ಕ್ರಿಕೆಟ್ ಸಾಗಬೇಕಾದ ಹಾದಿ ಯಾವುದು? KSCA ತೋರಿಸಬೇಕಿದೆ ದಿಕ್ಕು
ಇಷ್ಟಾದರೂ ರಾಹುಲ್ ತಮ್ಮ ಕಲಾತ್ಮಕ ಆಟವನ್ನು, ಆಟದೊಂದಿಗಿನ ತಲ್ಲೀನತೆಯನ್ನು ಬಿಟ್ಟುಕೊಟ್ಟವರಲ್ಲ. ಮೊದಲು ಹೇಗೆ ಆಡುತ್ತಿದ್ದರೋ, ಈಗಲೂ ಹಾಗೆಯೇ ಆಡುತ್ತಿದ್ದಾರೆ. ಎಲ್ಲ ಆಟಗಾರರಲ್ಲಿ ಕಾಣಬಹುದಾದ ಏರಿಳಿತಗಳು ರಾಹುಲ್ರಲ್ಲೂ ಕಂಡಿವೆ. ಅದು ಸಹಜ ಕೂಡ. ಆದರೆ ಕ್ರಿಕೆಟ್ ಸಂಸ್ಥೆಗಳು, ಆಯ್ಕೆದಾರರು ಮತ್ತು ಫ್ರಾಂಚೈಸಿಗಳು ಯೋಚಿಸುವ ಬಗೆಯೇ ಬೇರೆ. ಇದನ್ನು ನೋಡಿಯೇ ನವಜೋತ್ ಸಿದ್ದು, ‘ರಾಹುಲ್ ಒಬ್ಬ ನಿಸ್ವಾರ್ಥ ಕ್ರಿಕೆಟರ್, ಓಪನಿಂಗ್ ಮಾಡಲು ಹೇಳಿ, ಮಧ್ಯಮ ಕ್ರಮಾಂಕದಲ್ಲಿ ಆಡಲು ಹೇಳಿ, 6ನೇ ಸ್ಥಾನದಲ್ಲಿ ಆಡಲು ಹೇಳಿ, ವಿಕೆಟ್ ಕೀಪಿಂಗ್ ಮಾಡಲು ಹೇಳಿ, ಬೇಡ ಫಿಲ್ಡಿಂಗ್ ಮಾಡು ಅನ್ನಿ, ಎಲ್ಲದಕ್ಕೂ ಆತ ರೆಡಿ ಇರುತ್ತಾರೆ. ಆಟಗಾರರು ತಂಡಕ್ಕೆ ಏನು ಬೇಕೊ ಅದನ್ನು ಕೊಡಲು ತಯಾರಿರಬೇಕು, ಅಂಥವರಿಗೆಲ್ಲ ಕೆ.ಎಲ್ ರಾಹುಲ್ ಮಾದರಿ’ ಎಂದು ಹಾಡಿಹೊಗಳಿದ್ದೂ ಇದೆ.
ಐಪಿಎಲ್ ಯುಗದಲ್ಲಿ ವೇಗವೇ ಮಹತ್ವದ ಮೌಲ್ಯವಾಗಿಬಿಟ್ಟಿದೆ. ‘ಸ್ಟ್ರೈಕ್ ರೇಟ್’ ಎಂಬ ಅಂಕಿಯ ಆಧಾರದ ಮೇಲೆ ಆಟಗಾರರ ಮೌಲ್ಯ ನಿರ್ಧಾರವಾಗುತ್ತದೆ. ಇದೇ ಸಂದರ್ಭದಲ್ಲಿ ರಾಹುಲ್ ಮೇಲಿನ ಟೀಕೆಗಳು ಹೆಚ್ಚಾದವು. ಅವರು ನಿಧಾನವಾಗಿ ಆಡುತ್ತಾರೆ, ತಂಡದ ಮೊರೆ ಹೋಗುತ್ತಾರೆ, ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪಗಳು ಕೇಳಿಬಂದವು. ಆದರೆ ಕ್ರಿಕೆಟ್ ಎನ್ನುವುದು ಕೇವಲ ಹೊಡೆತಗಳ ಕ್ರೀಡೆಯಲ್ಲ; ಪರಿಸ್ಥಿತಿಯನ್ನು ಅರಿತು ಅರಗಿಸಿಕೊಂಡು ಇನ್ನಿಂಗ್ಸ್ ಕಟ್ಟುವ ಕಲೆ. ಟಿ20 ಕ್ರಿಕೆಟ್ನ ಅತಿಯಾದ ವ್ಯಾಪಾರೀಕರಣದಲ್ಲಿ, ಸಹನೆ ಮತ್ತು ತಾಂತ್ರಿಕ ಶಿಸ್ತಿನ ಮೌಲ್ಯ ಕುಗ್ಗುತ್ತಿದೆ.
ಆದರೆ, ಈ ಬಾರಿಯ ಐಪಿಎಲ್ನಲ್ಲಿ ಕೆ.ಎಲ್. ರಾಹುಲ್ ತಮ್ಮ ಮೇಲಿನ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಈ ಸೀಸನ್ನಲ್ಲಿ, ಇಲ್ಲಿಯವರೆಗೆ ರಾಹುಲ್ ಪೇರಿಸಿದ ಒಟ್ಟು ರನ್ 433. ಸ್ಟ್ರೈಕ್ ರೇಟ್ 186. ಜೊತೆಗೆ ಆರೇಂಜ್ ಕ್ಯಾಪ್ ಗೌರವ ಬೇರೆ. ಅಂದರೆ, ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕೆ ಮಾಡಿದವರು, ಫಾರ್ಮ್ ಬಗ್ಗೆ ಆಡಿಕೊಂಡು ನಗಾಡಿದವರನ್ನು ಇಂದು ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಇನ್ನು ಆಟಗಾರರಿಗೆ ಫಿಟ್ನೆಸ್ ಬಹಳ ಮುಖ್ಯ. ರಾಹುಲ್ ವಿಷಯದಲ್ಲಿ, ಅವರ ಕ್ರಿಕೆಟ್ ಪಯಣದಲ್ಲಿ ಈ ಫಿಟ್ನೆಸ್ ಕೂಡ ಅವರನ್ನು ಕಾಡಿದ್ದುಂಟು. ಆದರೆ ಪ್ರತೀ ಬಾರಿ ಅವರು ಮರಳಿ ಬಂದ ರೀತಿ ಗಮನಾರ್ಹವಾದುದು. ಹಲವರು ಸದ್ದು-ಗದ್ದಲ ಮಾಡುವ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದರೆ; ರಾಹುಲ್ ಮಾತ್ರ ಬ್ಯಾಟ್ ಎಂಬ ಮಾಂತ್ರಿಕ ದಂಡದ ಮೂಲಕವೇ ಉತ್ತರ ಕೊಡುತ್ತಾರೆ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್ ಅವರ ಈ ಮೌನವೇ, ಅವರ ಶಕ್ತಿಯಾಗಿದೆ, ಅವರ ವಿರೋಧಿಗಳಿಗೆ ಅಸ್ತ್ರದಂತೆ ಬಳಕೆಯಾಗುತ್ತಿದೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಟಗಾರರನ್ನು ಬಹಳ ಬೇಗ ದೇವರನ್ನಾಗಿಸಿ ಆರಾಧಿಸುತ್ತಾರೆ. ಅದೇ ವೇಗದಲ್ಲಿ ಅನುಮಾನಿಸಿ ಕೆಳಕ್ಕೆ ಬಿಸಾಡುತ್ತಾರೆ. ಕೆ.ಎಲ್. ರಾಹುಲ್ ಈ ಎರಡನ್ನೂ ಅನುಭವಿಸಿದ ಆಟಗಾರ. ಆದರೆ ಅವರ ಆಟ ಇನ್ನೂ ಮುಗಿದಿಲ್ಲ. ಏಕೆಂದರೆ ಶೈಲಿ, ತಾಳ್ಮೆ ಮತ್ತು ಆತ್ಮವಿಶ್ವಾಸಗಳ ಮೇಲೆ ನಿಂತ ಆಟಗಾರರು ಅಷ್ಟು ಬೇಗ ಮುಗಿಯುವುದಿಲ್ಲ.

ಕ್ರಿಕೆಟ್ನಲ್ಲಿ ಬೇಸಿಕ್ಸ್ ತುಂಬಾ ಮುಖ್ಯ. ರಾಹುಲ್ ಅವರ ಆಟ ಕಲಾತ್ಮಕವಾಗಿ ಕಾಣಲು ಕಾರಣ ಅವನ ಬಲಿಷ್ಠ ಬೇಸಿಕ್ಸ್. ಹೊಡಿ-ಬಡಿ ಕದನದಂತೆ ಕಾಣುವ ಟಿ20 ಕ್ರಿಕೆಟನ್ನು ಕೂಡ ಕಲಾತ್ಮಕವಾಗಿ ಆಡಬಹುದು ಎಂಬುದನ್ನು ತೋರಿಸಿಕೊಟ್ಟವರು ರಾಹುಲ್. ಇವರ ಈ ಬ್ಯಾಟಿಂಗ್ ಶೈಲಿ, ಕಲಿಕೆಯ ಹಂತದಲ್ಲಿರುವ ಹುಡುಗರಿಗೆ ಪಾಠವಾದರೂ ಆಶ್ಚರ್ಯವಿಲ್ಲ.
ಕ್ರಿಕೆಟ್ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ- ಮೃದು ಮನಸ್ಸಿನ ಹಿಂದೆ ಗಟ್ಟಿಯಾದ ಬ್ಯಾಟಿಂಗ್ ಹೊಂದಿರುವ ಆಟಗಾರ. ಹಾಗೆಯೇ ಗತಕಾಲದ ಕ್ರಿಕೆಟ್ ಸಂಸ್ಕೃತಿಯ ಕೊನೆಯ ಕೊಂಡಿಯಂತೆ ಕಾಣುವ ಅಪರೂಪದ ಆಟಗಾರ.

ಲೇಖಕ, ಪತ್ರಕರ್ತ



