ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಡಕೆಮಾರಿ
ಅಂಗಕ್ಕೆಂದಡೆ ಹಿರಿಯ ಹರಿವಾಣವ
ತುಂಬಿ ಬೋನವ ತಾ ಎಂಬರು.
ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು
ತುಂಬಿ ಬೋನವ ತಾ ಎಂಬರು.
ಅಂಗವ ಹಿರಿದು ಮಾಡಿ
ಲಿಂಗವ ಕಿರಿದು ಮಾಡಿ
ಮನೆಯಲ್ಲಿ ಮಡಕೆ ತುಂಬಿ
ಬೋನವ ಮಾಡಿ,
ಚಿಕ್ಕ ಕುಡಿಕೆ ಗಿಣ್ಣಿಲು
ಲಿಂಗಕ್ಕೆ ಬೋನವ ಹಿಡಿವ
ಈ ಮಡಕೆಮಾರಿಗಳನೇನೆಂಬೆ
ಗುಹೇಶ್ವರಾ
ಪದಾರ್ಥ:
ಬೋನ = ಅನ್ನ, ಆಹಾರ
ಗಿಣ್ಣಿಲು = ಸಣ್ಣ ಬಟ್ಟಲು
ವಚನಾರ್ಥ:
ಇದು ಮನುಷ್ಯನ ಲೋಭಿ ಗುಣದ ಬಗ್ಗೆ ಬರೆದಿರುವ ವಿಡಂಬನಾತ್ಮಕ ವಚನ. ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ದೈವಕ್ಕೆ ಅರ್ಪಿಸುವ ನೈವೇದ್ಯದಲ್ಲೂ ತನ್ನ ಲೋಭಿತನವನ್ನು ತೋರುತ್ತಾನೆ. ಮನುಷ್ಯನು ತನ್ನ ಸಹಜೀವಿಗಳೊಂದಿಗೆ ನಡೆಸುವ ಲೌಕಿಕ ವ್ಯವಹಾರಗಳಲ್ಲಿ ಲೋಭ, ಜಿಪುಣತನವನ್ನು ತೋರಿದರೆ ಒಪ್ಪಿಕೊಳ್ಳಬಹುದೇನೋ. ಆದರೆ ದೈವದೊಂದಿಗೆ ನಡೆಸುವ ಆತ್ಮ ಸಂಗಾತದಲ್ಲೂ ಲೋಭಿಯಾದರೆ ಅದು ಸಹ್ಯವಲ್ಲ. ಇದನ್ನು ಪ್ರತಿಪಾದಿಸಲು ಅಲ್ಲಮ ಉಪಯೋಗಿಸಿದ್ದು ನೈವೇದ್ಯದ ಉದಾಹರಣೆಯನ್ನು. ದೈವಕ್ಕೆ ನೈವೇದ್ಯ ನೀಡುವಾಗ ಒಂದು ಸಣ್ಣ ಬಟ್ಟಲಿನಲ್ಲಿ ಅನ್ನಾಹಾರವನ್ನು ಇಟ್ಟು ಅರ್ಪಣೆ ಮಾಡುವರು. ಆದರೆ ತನ್ನ ಊಟಕ್ಕೆ ಎಂದರೆ ಒಂದು ದೊಡ್ಡ ತಟ್ಟೆಯನ್ನು ತುಂಬಿ ಕೊಡಿ ಎನ್ನುವರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಒಡಲ ಹೊರೆವವರು. ಇದು ಇಂದಿಗೂ ನಡೆದು ಬಂದಿರುವ ಸಾರ್ವಕಾಲಿಕ ಸಂಪ್ರದಾಯ ಮತ್ತು ಸತ್ಯ.
ಪದಪ್ರಯೋಗಾರ್ಥ:
ಮಡಕೆಮಾರಿ ಎಂಬುದು ವಚನದ ಕೊನೆಯಲ್ಲಿ ಅಲ್ಲಮ ಮಾಡಿರುವ ಅನನ್ಯ ಪದಪ್ರಯೋಗ. ಮನೆಯಲ್ಲಿ ಮಡಕೆ ತುಂಬಾ ಅನ್ನವ ಮಾಡಿ, ಚಿಕ್ಕ ಕುಡಿಕೆ ಬಟ್ಟಲಿನಲ್ಲಿ ಲಿಂಗಕ್ಕೆ ಅನ್ನ ನೈವೇದ್ಯವ ಹಿಡಿವವರನ್ನು ಮಡಕೆಮಾರಿಗಳು ಎಂದು ಅಲ್ಲಮ ಕರೆದದ್ದು. ಸಾಂಪ್ರದಾಯಿಕವಾಗಿ ಪೂಜೆಯ ಕೊನೆಯಲ್ಲಿ ನೈವೇದ್ಯದ ಅರ್ಪಣೆ ಮಾಡುವುದು ಸಾಂಕೇತಿಕ ಮಾತ್ರ. ಈ ಜಗತ್ತಿಗಾಗಿ ಸಕಲವನ್ನೂ ಸೃಷ್ಟಿಸಿ ಕೊಟ್ಟಿರುವ ಸೃಷ್ಟಿಕರ್ತನಿಗೆ ನಾವು ಅನ್ನ ನೀಡುವುದುಂಟೇ? ಅಲ್ಲಮನೇ ಇನ್ನೊಂದು ವಚನದಲ್ಲಿ ಹೇಳುವ ಹಾಗೆ ಸೃಷ್ಟಿಕರ್ತನು ನಿತ್ಯತೃಪ್ತನು. ಇಲ್ಲಿಯ ವಿಚಾರ ಅದಲ್ಲ. ನೈವೇದ್ಯ ನೀಡುವವನ ಮನಸ್ಥಿತಿಯ ಬಗ್ಗೆ ವಿಡಂಬನೆ. ಮಡಕೆ ತುಂಬಾ ಅನ್ನವ ಮಾಡಿ ಅದನ್ನು ತಮ್ಮ ಊಟಕ್ಕೆ ಇರಿಸಿಕೊಂಡು ಒಂದು ಸಣ್ಣ ಬಟ್ಟಲಿನಲ್ಲಿ ದೈವಕ್ಕೆ ನೈವೇದ್ಯ ನೀಡುವ ಮನಸ್ಥಿತಿಯುಳ್ಳವರನ್ನು ಮಡಕೆಮಾರಿ ಎಂಬ ಅಪರೂಪದ ಪದ ಬಳಸಿ ಅಲ್ಲಮ ಛೇಡಿಸಿದ್ದು.
ಉಂಬ ಜಂಗಮ ಬಂದರೆ ನಡೆಯೆಂಬರು: ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ! ಎಂಬ ಬಸವಣ್ಣ ವಚನ ಕೂಡಾ ಇಂತಹ ಮಡಕೆಮಾರಿಗಳನ್ನು ಕುರಿತಾದದ್ದು!
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



