ಒಂದು ಕಡೆ ಬಿಜೆಪಿಯ ಭಕ್ತರು, ಅಂಧಭಕ್ತರು ಮತ್ತು ಮಾರಿಕೊಂಡ ಪತ್ರಕರ್ತರಿಂದ ಕುಹಕವಾಡುವ, ಭಯ ಬಿತ್ತುವ ಕೆಲಸ. ಮತ್ತೊಂದು ಕಡೆ ಭ್ರಷ್ಟಾಚಾರಕ್ಕೆ ಬಾಯ್ದೆರೆದು ನಿಂತ ಭಕಾಸುರ ಅಧಿಕಾರಿಗಣ. ಜನರಿಗಿತ್ತ ಭರವಸೆಯನ್ನು ಈಡೇರಿಸುವಲ್ಲಿ, ಬಡವರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಚ್ಚರ ವಹಿಸಬೇಕಾಗಿದೆ.
ʻಮನ್ ಕೀ ಬಾತ್ʼನಿಂದ ಹಸಿದ ಹೊಟ್ಟೆಗೆ ಅನ್ನ ಸಿಗುತ್ತಾ, ಮನೆ ಇಲ್ಲದವರಿಗೆ ಮನೆ ಸಿಗುತ್ತಾ, ಮಕ್ಕಳಿಗೆ ಶಿಕ್ಷಣ ಸಿಗುತ್ತಾ, ನಾವು ಬಡಜನರಿಗೆ ಅನ್ನ, ಮನೆ, ಶಿಕ್ಷಣ ಕೊಡ್ತೀವಿ, ನಮ್ದು ಕಾಮ್ ಕೀ ಬಾತ್.. ಎಂದು ಕೇವಲ ಒಂದು ತಿಂಗಳ ಹಿಂದೆ, ಸಿದ್ದರಾಮಯ್ಯನವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
ಮೋದಿಯವರ ಮನ್ ಕೀ ಬಾತೇ ಭಗವದ್ಗೀತೆ; ಸಿದ್ದರಾಮಯ್ಯರದ್ದು ಶುದ್ಧ ಸುಳ್ಳು ಎಂದವರೇ ಹೆಚ್ಚು. ಮೋದಿಯವರ ಮನದ ಮಾತಿಗೆ ನೂರು ತುಂಬಿತು, ಆದರೆ ದೇಶದ ಜನರ ಹೊಟ್ಟೆ ತುಂಬಲಿಲ್ಲ. ಸಿದ್ದರಾಮಯ್ಯನವರು ಕಾಮ್ ಕೀ ಬಾತ್ ಎಂದು ಹೇಳಿ ಕೇವಲ ತಿಂಗಳು ಕಳೆಯುವುದರೊಳಗೆ, ಮುಖ್ಯಮಂತ್ರಿ ಗಾದಿಯಲ್ಲಿ ಕೂತಿದ್ದಾರೆ, ಚುನಾವಣಾಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ನುಡಿದಂತೆ ನಡೆದಿದ್ದಾರೆ.
ಹೀಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಸುಳ್ಳನ್ನೇ ಸತ್ಯವೆಂದು ಸಾರುವ ಸೋ ಕಾಲ್ಡ್ ದೇಶಭಕ್ತರು; ಆ ದೇಶಭಕ್ತರು ಹೇಳಿದ್ದನ್ನೇ ಸತ್ಯವೆಂದು ಭ್ರಮಿಸಿ ಹಂಚುವ ವಾಟ್ಸಾಪ್ ಯೂನಿವರ್ಸಿಟಿಯ ಅಂಧಭಕ್ತರು; ಅದನ್ನೇ ದಿನದ ಇಪ್ಪತ್ನಾಲ್ಕು ಗಂಟೆಯೂ ಬಿತ್ತರಿಸುವ ಮಾರಿಕೊಂಡ ಮಾಧ್ಯಮಗಳ ಪತ್ರಕರ್ತರು- ಕಾಂಗ್ರೆಸ್ ಅಧಿಕಾರಕ್ಕೇರುವುದನ್ನು ಕನಸಿನಲ್ಲೂ ಕಂಡಿರಲಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತಿದ್ದಂತೆ, ಈ ಮುಖೇಡಿಗಳು- ತಾಖತ್ತಿದ್ದರೆ, ಧಮ್ಮಿದ್ರೆ ಚುನಾವಣಾ ಸಮಯದಲ್ಲಿ ಕೊಟ್ಟ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ ಎಂದು ಭಿನ್ನ ರಾಗದಲ್ಲಿ ಪ್ರಚೋದಿಸತೊಡಗಿದರು. ಈಗ, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಂತೆ- ಸಾಲ ಹೆಚ್ಚಾಗುತ್ತದೆ, ರಾಜ್ಯ ದಿವಾಳಿಯಾಗುತ್ತದೆ, ರಾಷ್ಟ್ರದ ಆರ್ಥಿಕ ಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ, ಭವ್ಯ ಭಾರತ ಪಾಕಿಸ್ತಾನವಾಗುತ್ತದೆ ಎಂದು ಬೊಬ್ಬೆ ಹೊಡೆಯತೊಡಗಿದ್ದಾರೆ. ಆ ಮೂಲಕ ಮುಗ್ಧ ಜನರಲ್ಲಿ ವಿನಾಕಾರಣ ಗೊಂದಲ, ಆತಂಕ ಮತ್ತು ಭಯ ಬಿತ್ತತೊಡಗಿದ್ದಾರೆ.
ಬದುಕಿದರೂ-ಕೆಟ್ಟರೂ ಬಾಯಿ ಬಡಿದುಕೊಳ್ಳುವ ಜನ ಎಲ್ಲಾ ಕಾಲಕ್ಕೂ ಇರುತ್ತಾರೆ. ಈ ಕಾಲಕ್ಕೆ ಅವರು ಮೋದಿ ಭಕ್ತರಾಗಿ ಪರಿವರ್ತನೆಗೊಂಡಿದ್ದಾರೆ. ಅವರ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಬರಿ ಬೊಗಳೆ ಎನ್ನುವುದನ್ನು ಅರಿತು; ಅವರನ್ನು ಅಲ್ಲಿಗೇ ಬಿಟ್ಟು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ತೋರಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರೂ ಆಗಿರುವುದರಿಂದ; ಅತೀ ಹೆಚ್ಚು ಬಜೆಟ್ ಗಳನ್ನು ಮಂಡಿಸಿದ ದಾಖಲೆ ಹೊಂದಿರುವುದರಿಂದ; ರಾಜ್ಯದ ಆರ್ಥಿಕ ಸ್ಥಿತಿಗತಿ ಬಲ್ಲವರಾಗಿರುವುದರಿಂದ; ಕೇಂದ್ರದಿಂದ ಬರಬೇಕಾದ ರಾಜ್ಯದ ಪಾಲನ್ನು ಹಕ್ಕಿನಿಂದ ಕೇಳಿ ಪಡೆಯುವಂತಹ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಹಾಗೆಯೇ ಅನಗತ್ಯ ನೇಮಕಾತಿಗಳಿಗೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು, ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವುದು- ಸದ್ಯಕ್ಕೆ ಸವಾಲಿನ ಕೆಲಸವೂ ಆಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ
ಸರ್ಕಾರ ಬಡವರಿಗೆ ಬೇಕಾದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೂ, ಅವುಗಳನ್ನು ಕಾರ್ಯರೂಪಕ್ಕೆ ತರುವುದು, ಜನರಿಗೆ ತಲುಪಿಸುವುದು ರಾಜ್ಯದ ಆಡಳಿತಯಂತ್ರ ಎನ್ನುವುದನ್ನು ಮರೆಯಬಾರದು. ಬರ-ನೆರೆ ಮತ್ತು ಪ್ರಕೃತಿ ವಿಕೋಪಗಳಾದಾಗ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣದ ಹೊಳೆ ಹರಿಯುತ್ತದೆ. ಕಣ್ಮುಚ್ಚಿ ಬಿಡುವುದರೊಳಗೆ ಖಾಲಿಯಾಗಿರುತ್ತದೆ. ಕೊಡಗು-ಉತ್ತರ ಕರ್ನಾಟಕದ ನೆರೆ ನೋಡಿದ್ದೇವೆ; ಕೊರೊನಾ ಕಾಲದ ಸಾವು-ನೋವುಗಳನ್ನು ಸಹಿಸಿಕೊಂಡಿದ್ದೇವೆ. ಇದಕ್ಕಾಗಿ ಸಾವಿರಾರು ಕೋಟಿ ಖರ್ಚಾಗಿದ್ದನ್ನೂ ಕಂಡಿದ್ದೇವೆ. ಆದರೆ ಫಲಾನುಭವಿಗಳಿಗೆ ಎಷ್ಟು ತಲುಪಿತು ಎನ್ನುವುದು ಇವತ್ತಿಗೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಈಗ ಈ ಐದು ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ವಾರ್ಷಿಕ 60 ಸಾವಿರ ಕೋಟಿ ಖರ್ಚಾಗಬಹುದೆಂದು ಅಂದಾಜಿಸಿದೆ. ಈಗಾಗಲೇ ಅಧಿಕಾರಿಗಳ ವಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಕೂರಲು ಜಾತಿ-ಹಣದ ಶಿಫಾರಸ್ಸುಗಳು, ಮಂತ್ರಿಗಳ ಭೇಟಿ ಬಹಳ ಬಿರುಸಿನಿಂದ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಬಾಯ್ದೆರೆದು ನಿಂತವರಲ್ಲಿ ಕಾಂಗ್ರೆಸ್ ನ ಜನಪ್ರತಿನಿಧಿಗಳೂ ಇದ್ದಾರೆ.
ಒಂದು ಕಡೆ ಬಿಜೆಪಿಯ ಭಕ್ತರು, ಅಂಧಭಕ್ತರು ಮತ್ತು ಮಾರಿಕೊಂಡ ಪತ್ರಕರ್ತರಿಂದ ಕುಹಕವಾಡುವ, ಭಯ ಬಿತ್ತುವ ಕೆಲಸ. ಮತ್ತೊಂದು ಕಡೆ ಭ್ರಷ್ಟಾಚಾರಕ್ಕೆ ಬಾಯ್ದೆರೆದು ನಿಂತ ಬಕಾಸುರ ಅಧಿಕಾರಿಗಣ. ಭಯ ಮತ್ತು ಭ್ರಷ್ಟಾಚಾರವನ್ನು ಬದಿಗಿಟ್ಟು, ಜನರಿಗಿತ್ತ ಭರವಸೆಯನ್ನು ಈಡೇರಿಸುವಲ್ಲಿ, ಬಡವರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಚ್ಚರ ವಹಿಸಬೇಕಾಗಿದೆ.