ಪರೀಕ್ಷೆ ನಡೆಸುವ ಹೊಣೆ ಹೊತ್ತ ಸಂಸ್ಥೆ ಎನ್ಟಿಎ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊರಲೇ ಇಲ್ಲ. ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರೂ ಹೊಣೆ ಹೊತ್ತಿಲ್ಲ. ಕೇಂದ್ರ ಸರ್ಕಾರಕ್ಕಂತು ಯಾವುದರ ಹೊಣೆ ಹೊತ್ತು ಅಭ್ಯಾಸವೇ ಇಲ್ಲ, ʼನೈತಿಕ ಹೊಣೆʼ ಎಂಬ ಪದ ಮರೆತೇ ಹೋಗಿದೆ. ಪ್ರಧಾನಿ ಮೋದಿಯವರು ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಯಥಾಪ್ರಕಾರ ವಿದೇಶ ಪ್ರಯಾಣದಲ್ಲಿ ನಿರತರಾಗಿದ್ದಾರೆ.
ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಆಘಾತಕಾರಿ ವಿಚಾರ ಮೇ ೧೨ರಂದು ಬಹಿರಂಗಗೊಂಡಿತ್ತು. ತಕ್ಷಣ ಎನ್ಟಿಎ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವ ನಿರ್ಧಾರ ಪ್ರಕಟಿಸಿತ್ತು. ಸುಮಾರು ೨೨-೨೩ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವರ್ಷಗಳ ಕಾಲ ಪರೀಕ್ಷೆಗೆ ತಯಾರಾಗಿ ಪರೀಕ್ಷೆ ಬರೆದು ನಿರಾಳವಾಗಿದ್ದ ವಿದ್ಯಾರ್ಥಿಗಳಿಗೆ ಈ ಮರು ಪರೀಕ್ಷೆ ಎಂಬ ಪದ ಬರ ಸಿಡಿಲಿನಂತಾಗಿತ್ತು. ಮರುಪರೀಕ್ಷೆ ಬರೆಯಬೇಕೆಂಬ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದುವರೆಗೆ 11 ವಿದ್ಯಾರ್ಥಿಗಳು ನೇಣಿಗೆ ಕೊರಳೊಡ್ಡಿದ್ದಾರೆ. ಆದರೂ ಪರೀಕ್ಷೆಯ ಹೊಣೆ ಹೊತ್ತ ಸಂಸ್ಥೆ ಎನ್ಟಿಎ, ಸೋರಿಕೆಯ ಹೊಣೆ ಹೊರಲೇ ಇಲ್ಲ. ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಹೊಣೆಗಾರಿಕೆಯಿಂದ ನುಣುಚಿಕೊಂಡು ನಿರುಮ್ಮಳವಾಗಿದ್ದಾರೆ. ಮೋದಿ ಸರ್ಕಾರಕ್ಕಂತೂ ಯಾವುದೇ ಹೊಣೆ ಹೊತ್ತು ಅಭ್ಯಾಸವೇ ಇಲ್ಲ, ನೈತಿಕ ಹೊಣೆ ಎಂಬ ಪದ ಅದರ ನಿಘಂಟಿನಲ್ಲೇ ಇಲ್ಲ. ಪ್ರಧಾನಿ ಮೋದಿಯವರು ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ವಿದೇಶ ಪ್ರಯಾಣದಲ್ಲಿ ನಿರತರಾಗಿದ್ದಾರೆ. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಾಗಿದ್ದ ಎನ್ಟಿಎ ಮುಖ್ಯಸ್ಥರು ಶಿಕ್ಷಣ ಸಚಿವರು ಅಧಿಕಾರದ ಅಮಲಿನಲ್ಲೆ ಮೈಮರೆತಿದ್ದಾರೆ. ಅದಕ್ಕೆ ಬದಲಾಗಿ ಪ್ರಶ್ನೆ ಪತ್ರಿಕೆಗಳು ಶೇರ್ ಆಗಿದ್ದ ಟೆಲಿಗ್ರಾಮ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೆಹಲಿ ಹೈಕೋರ್ಟ್ ಸರ್ಕಾರದ ಈ ಕ್ರಮವನ್ನು ಎತ್ತಿ ಹಿಡಿದಿದೆ. ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೋರಿಕೆಯನ್ನೂ ತಡೆಯುವ ಬದ್ಧತೆ ಈ ಸರ್ಕಾರಕ್ಕೆ ಇಲ್ಲ. ಹಂಚಿಕೆಯಾಗುವ ಟೆಲಿಗ್ರ್ಯಾಮ್ ಆ್ಯಪ್ ನ್ನು ಬಂದ್ ಮಾಡಲಾಗಿದೆ. ಎಂತಹ ಹೇಡಿತನದ ನಾಚಿಕೆಗೇಡಿನ ಪರಿಸ್ಥಿತಿಯಿದು?
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ, ಬಿಹಾರ, ದೆಹಲಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತೆಂಬ ಅಂಶ ಬಯಲಾಗಿದೆ. ಇವೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳು ಎಂಬುದು ಗಮನಾರ್ಹ. ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಟೆಲಿಗ್ರಾಮ್ನಲ್ಲಿ ಸೋರಿಕೆ ಮಾಡಿದ ಕೋಚಿಂಗ್ ಸೆಂಟರ್ ಮಾಲೀಕರ ಬಂಧನ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಮತ್ತು ಸಾಗಾಟದ ಸಂದರ್ಭದಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಕಳೆದ ಆರು ವರ್ಷಗಳಲ್ಲಿ ಮೂರನೇ ಬಾರಿ ಲೀಕ್ ಆಗಿದೆ. 2024ರಲ್ಲೂ ಆಗಿತ್ತು. ಆದರೆ, ಸಂಬಂಧಪಟ್ಟವರು ಪಾಠ ಕಲಿತೇ ಇಲ್ಲ. ಈ ಬಾರಿಯೂ ಕೇಂದ್ರ ಸರ್ಕಾರ, ಎನ್ಟಿಎ ತಮ್ಮ ಬೇಜವಾಬ್ದಾರಿತನ ಮುಂದುವರಿಸಿವೆ. ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಪ್ರಧಾನಿ ಒಂದು ಮಾತೂ ಆಡಿಲ್ಲ. ಮನ್ ಕೀ ಬಾತ್ನಲ್ಲೂ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಇಂತಹ ಪ್ರಧಾನಿ ಮೋದಿಯವರು ಪ್ರತಿವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ʼಪರೀಕ್ಷಾ ಪೇ ಚರ್ಚಾʼ ಎಂದು ಕಾರ್ಯಕ್ರಮ ನಡೆಸುತ್ತಿರುವುದು ತಮಾಷೆಯಾಗಿದೆ.
ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ಗೆ “ಪ್ರಧಾನಿಯವರೇ ಖುದ್ದು ಮರು ಪರೀಕ್ಷೆಯ ಮೇಲೆ ನಿಗಾ ಇಡಲಿದ್ದಾರೆ” ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ಮೊದಲ ಬಾರಿಗೆ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೇನಾ ಕಾರ್ಯಚರಣೆಯ ಮೂಲಕ ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಶ್ನೆ ಪತ್ರಿಕೆಯನ್ನು ರವಾನಿಸಲಿದೆಯಂತೆ! ಒಂದು ಪರೀಕ್ಷೆ ನಡೆಸಲು ಸೇನೆಯನ್ನು ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ಹನ್ನೆರಡು ವರ್ಷಗಳಿಂದ ಅಕ್ರಮ ನಡೆಸಿಯೇ ಗೆಲ್ಲುತ್ತಿರುವ ಬಿಜೆಪಿ, ತಮ್ಮ ಪಕ್ಷ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದ್ದಾಗಲೂ ಆ ರಾಜ್ಯಗಳಲ್ಲಿ ಹೇಗೆ ಗೆಲ್ಲಬೇಕು ಎಂಬ ‘ಕಲೆ’ ಪರಿಣತಿ ಗಳಿಸಿರುವ ಮೋದಿಯವರಿಗೆ ಒಂದು ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿಲ್ಲ ಎಂಬುದು ಸೋಜಿಗದ ಸಂಗತಿ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿಯೇ ಚುನಾವಣೆಗಳನ್ನು ಗೆಲ್ಲುತ್ತಿರುವಾಗ ಅವರಿಗೆ ನೀಟ್ ಪರೀಕ್ಷಾ ಅಕ್ರಮ, ಅದರಿಂದಾಗಿ ಯುವಜನರಲ್ಲಿ ಉಂಟಾಗಿರುವ ಆತಂಕ, ಆತ್ಮಹತ್ಯೆ ಹಾದಿ ಹಿಡಿದಿರುವ ಬಗ್ಗೆ ಯಾವುದೇ ಕಳವಳ ಉಂಟಾಗಲು ಸಾಧ್ಯವೇ ಇಲ್ಲ.
ಈ ಪ್ರಕರಣ ಬಯಲಾಗಿ ಒಂದು ತಿಂಗಳಾಗಿದೆ. ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ನಮ್ಮ ಮುಂದಿದೆ. ಬಿಜೆಪಿ ಬೆಂಬಲಿಗರು, ಮಾಧ್ಯಮಗಳು ನೀಟ್ ಅಕ್ರಮದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಯುವ ಸಮೂಹವನ್ನು ನಡೆಸಿಕೊಳ್ಳುತ್ತಿರುವ ರೀತಿ, ಕಾಕ್ರೋಚ್ ಜನತಾ ಪಾರ್ಟಿಯ ಯುವ ಮುಖಂಡರ ಮೇಲೆ ನಡೆಸುತ್ತಿರುವ ದಾಳಿ, ಅಪಪ್ರಚಾರ ಫ್ಯಾಸಿಸ್ಟ್ ಸರ್ಕಾರದ ದುರಾಡಳಿತಕ್ಕೆ ಕನ್ನಡಿ ಹಿಡಿದಿದೆ. ಈ ಮಧ್ಯೆ ನೆಹರೂ ಅವರಿಗಿಂತ ಹೆಚ್ಚು ದಿನಗಳು ಅಧಿಕಾರದಲ್ಲಿರುವ ಬಗ್ಗೆ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಟಿವಿ ಮಾಧ್ಯಮಗಳಲ್ಲಿ ಮೋದಿ ಯೋಜನೆಗಳ ಪ್ರಚಾರ ನಡೆಯುತ್ತಿದೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ಪ್ರಕಟವಾಗುತ್ತವೆ. ʼಸಬ್ ಚೆಂಗಾಸಿʼ ಎಂಬ ಮನಸ್ಥಿತಿಯಲ್ಲಿ ಬಿಜೆಪಿ ಬೆಂಬಲಿಗರಿದ್ದಾರೆ. ಮೋದಿ ಸರ್ಕಾರ ಇಂಧನ, ಸಿಲಿಂಡರ್ ಬೆಲೆ ಹೆಚ್ಚಿಸಿದರೆ ʼದೇಶಕ್ಕೋಸ್ಕರʼ ಎಂದು ಬೆಂಬಲಿಸುವ ಪಡೆ ಇದೆ. ನೀಟ್ ಅಕ್ರಮದ ವಿರುದ್ಧ ಮಾತನಾಡಿದರೆ ೨೦೧೪ರ ಹಿಂದೆ ಆದ ಅಕ್ರಮದ ಪಟ್ಟಿ ಮಾಡುತ್ತಿದ್ದಾರೆ!
ದೇಶವೊಂದರ ಶಿಕ್ಷಣ ವ್ಯವಸ್ಥೆ ಆ ದೇಶವನ್ನು ಮುನ್ನಡೆಸುತ್ತಿರುವವರ ಮನಸ್ಥಿತಿ ಅವಲಂಬಿಸಿರುತ್ತದೆ. ಶಿಕ್ಷಣ ವ್ಯವಸ್ಥೆ ಹದಗೆಡಲು ಆಡಳಿತ ನಡೆಸುತ್ತಿರುವವರ ವೈಫಲ್ಯವೂ ಕಾರಣ. ಅಧಿಕಾರಕ್ಕೆ ಬರುತ್ತಿದ್ದಂತೆ ಪಠ್ಯಪುಸ್ತಕಗಳ ಕೇಸರೀಕರಣಕ್ಕೆ ಮುಂದಾದ ಬಿಜೆಪಿ, ತನ್ನ ಬೆಂಬಲಿಗರನ್ನು ವಿಶ್ವವಿದ್ಯಾಲಯಗಳ ಆಯಕಟ್ಟಿನ ಜಾಗಗಳಲ್ಲಿ ನೇಮಿಸಿದ್ದಾರೆ. ಹೀಗಾಗಿ ವಿವಿ ಕ್ಯಾಂಪಸ್ಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ರಾಜಕೀಯ ನುಸುಳಿದೆ. ನೀಟ್ನಂತಹ ಬಹಳ ಪಾರದರ್ಶಕವಾಗಿ ನಡೆಯಬೇಕಾಗಿದ್ದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕೋಚಿಂಗ್ ಸೆಂಟರ್ಗಳಿಗೆ ಸುಲಭವಾಗಿ ಸಿಗುತ್ತಿವೆ. ಕೋಚಿಂಗ್ ಸೆಂಟರ್ಗಳನ್ನು ಅವಲಂಬಿಸದೇ, ಸ್ವಂತ ಪರಿಶ್ರಮದಿಂದ ಪರೀಕ್ಷೆಗೆ ತಯಾರಿ ನಡೆಸುವ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಉನ್ನತ ಶಿಕ್ಷಣದಿಂದ ವಿಮುಖರನ್ನಾಗಿ ಮಾಡುತ್ತಿದೆ.
ನೊಂದ ನೀಟ್ ವಿದ್ಯಾರ್ಥಿಗಳ ಪರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿಂತಿದ್ದಾರೆ. ದೇಶದ ಅತಿ ದೊಡ್ಡ ಕೋಚಿಂಗ್ ಸೆಂಟರ್ ರಾಜಧಾನಿ ಎಂದೇ ಕರೆಸಿಕೊಳ್ಳುವ ಕೋಟದಲ್ಲಿ ಯುವ ಸಮೂಹದೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಮತ್ತೊಂದೆಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಏನೇ ಆದರೂ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದುಕೊಂಡ ಪ್ರಾಣ ಮತ್ತೆ ಬಾರದು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಶಮನವಾಗುವ ಔಷಧಿ ಇನ್ನೂ ಕಂಡು ಹಿಡಿದಿಲ್ಲ. ಆದರೆ, ಈ ಘಟನೆಯಿಂದ ಪಾಠ ಕಲಿತರೆ, ಭವಿಷ್ಯದಲ್ಲಿ ಇಂತಹ ಪ್ರಮಾದವಾದಂತೆ ಎಚ್ಚರಿಕೆ ವಹಿಸುವುದು ಸಾಧ್ಯ.




