ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ಆದರೆ, ಅವರಿಗೆ ಯಾವ ಹುಲಿಯೂ ಕಾಣಿಸಿಲ್ಲ ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಟುಕಿದ್ದಾರೆ.
ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಪ್ರಧಾನಿ ಮೋದಿ ಸಫಾರಿ ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಸುಮಾರು 22 ಕಿ.ಮೀ ಸಫಾರಿ ನಡೆಸಿರುವ ಮೋದಿ ಅವರಿಗೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಎದುರಾಗಿವೆ. ಆದರೆ, ಒಂದೇ ಒಂದು ಹುಲಿ ಸಹ ಅವರ ಕಣ್ಣಿಗೆ ಬಿದ್ದಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಹಿಡಿದು ಮಾರಿಬಿಡುತ್ತಾರೆ ಎನ್ನುವ ಭಯಕ್ಕೆ ಹುಲಿಗಳು ಯಾವ ಗುಹೆಯೊಳಗೆ ಕೂತಿವೆಯೋ. ಅಯ್ಯೋ ಪಾಪ” ಎಂದು ವ್ಯಂಗ್ಯವಾಡಿದ್ದಾರೆ.
“ಇನ್ನು ಕೆಲವೇ ದಿನಗಳಲ್ಲಿ ಬಂಡಿಪುರ ಉಳಿಸಿ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಮೋದಿಯವರೇ” ಎಂದು ಕುಟುಕಿದ್ದಾರೆ.
ಸಫಾರಿಯನ್ನು ಓಪನ್ ಜೀಪ್ನಲ್ಲಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ದುರ್ಬಿನ್ ಹಿಡಿದು ಪ್ರಾಣಿಗಳನ್ನು ವೀಕ್ಷಿಸಿದ್ದಾರೆ. ದುರ್ಬಿನ್ ಹಿಡಿದು ಕಾಡು ವೀಕ್ಷಿಸಿದ ಮೋದಿ, ಕ್ಯಾಮೆರಾ ಹಿಡಿದು ಕೆಲ ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದ್ದಾರೆ. ಆದರೆ, ಒಂದೇ ಒಂದು ಹುಲಿ ಕಂಡಿಲ್ಲ.
ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲೆಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದ ಬೊಮ್ಮಾ, ಬೆಳ್ಳಿ ಮತ್ತು ರಘು ಆನೆಯನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.